HEALTH TIPS

ರಷ್ಯಾ-ಉಕ್ರೇನ್ ಕದನ: :ಜಾಗತಿಕ ರಾಜಕಾರಣ: ಭಾರತದ ಗಟ್ಟಿಧ್ವನಿ

            ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗಲೇ ಹೊಸ ಭಾರತಕ್ಕೆ ಜಗತ್ತು ಮುಖಾಮುಖಿಯಾಗುತ್ತಿದೆ. ಆಷಾಢಭೂತಿತನ ಹಾಗೂ ದ್ವಂದ್ವ ಮಾತುಗಳನ್ನು ಈ ಭಾರತ ಸಹಿಸುತ್ತಿಲ್ಲ. ದಶಕಗಳಿಂದ ಹಾಗೆಯೇ ಉಳಿದಿರುವ ಪ್ರಶ್ನೆಗಳಿಗೆ ಉತ್ತರವನ್ನು ಬಯಸುವ ಆತ್ಮನಿರ್ಭರ ಭಾರತ ಇದು.

         ಧರ್ಮ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಅನೇಕ ರಾಷ್ಟ್ರಗಳಲ್ಲಿನ ಧೋರಣೆಗಳನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರು ಪ್ರಶ್ನಿಸಿದಾಗ ಅಂತರರಾಷ್ಟ್ರೀಯ ಸಮುದಾಯಕ್ಕೂ ಇದರ ರುಚಿ ಕಂಡಂತಾಯಿತು.

           ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಮಾ ವೇಶದಲ್ಲಿ ಇತ್ತೀಚೆಗೆ ಮಾತನಾಡುತ್ತಾ, ಇತರ ರಾಷ್ಟ್ರಗಳಿಗೆ ಮೂರು ಪ್ರಶ್ನೆಗಳನ್ನು ಅವರು ಕೇಳಿದರು. ಮೊದಲನೆಯ ಪ್ರಶ್ನೆ, 'ಇಸ್ಲಾಮೋಫೋಬಿಯಾ', 'ಕ್ರಿಶ್ಚಿಯಾನೋಫೋಬಿಯಾ' ಹಾಗೂ ಯಹೂದ್ಯ ವಿರೋಧಿ ಭಾವನೆಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಇತರ ಧರ್ಮಗಳ ಮೇಲಿನ ಆಕ್ರಮಣಗಳು ಹಾಗೂ ಹಿಂದೂಫೋಬಿಯಾ ಹರಡುವವರು ಸೃಷ್ಟಿಸುತ್ತಿರುವ ಬೆದರಿಕೆಗಳ ಬಗ್ಗೆ ವಿಶ್ವಸಂಸ್ಥೆ ಹೇಗೆ ತಾನೇ ಗಮನ ಹರಿಸಿಲ್ಲ? ಎರಡನೆಯ ಪ್ರಶ್ನೆ, ಪ್ರಜಾಪ್ರಭುತ್ವಕ್ಕೆ ಸೈದ್ಧಾಂತಿಕ ವೈವಿಧ್ಯವೇ ಕೇಂದ್ರ ವಾಗಿರುವಾಗ 'ಎಡಪಂಥ' ಸರಿಯಾದುದಾದರೆ 'ಬಲಪಂಥ' ಏಕೆ ಸರಿಯಲ್ಲ, ಅದೂ...

ಇವು ಪ್ರಜಾಪ್ರಭುತ್ವದಲ್ಲಿ ಮತದಾರರು ಮಾಡುವ ಆಯ್ಕೆಗಳಾಗಿದ್ದಾಗ? ಕಡೆಯದಾಗಿ, 'ಭಯೋತ್ಪಾದನೆ' ವಿವರಣೆಯನ್ನು ಅಂತರರಾಷ್ಟ್ರೀಯ ಸಮುದಾಯವೇಕೆ ತೆಳುಗೊಳಿಸುತ್ತಿದೆ? ಅಲ್ಲದೆ, ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರವನ್ನು ದುರ್ಬಲಗೊಳಿಸುವ ಬಾಹ್ಯ ವಿಚಾರ
ಗಳನ್ನೇಕೆ ಎಳೆದು ತರುತ್ತಿದೆ?

               ವಾಸ್ತವವಾಗಿ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವು ಇಂತಹ ನೇರ ಮಾತುಗಳನ್ನಾಡಿರುವುದೇ ಅಪರೂಪ. ಮೋದಿಪೂರ್ವ ದಿನಗಳಲ್ಲಿ, ಹಿಂದೂಗಳು ಅಥವಾ ಹಿಂದೂ ಧರ್ಮ ಕುರಿತ ವಿಚಾರಗಳನ್ನು ಭಾರತದ ರಾಜತಾಂತ್ರಿಕರೊಬ್ಬರು ಮಾತನಾಡುವುದೇ ಧರ್ಮನಿಂದೆಯ ವಿಚಾರವೆಂದು ಪರಿಗಣಿಸಲಾಗುತ್ತಿತ್ತು. ಅಥವಾ ಸೈದ್ಧಾಂತಿಕ ಹೊದರುಗಳೊಳಗೆ ಪ್ರವೇಶಿಸಿ, 'ಬಲಪಂಥೀಯ' ನೆಲೆಯನ್ನು ರಾಕ್ಷಸೀಕರಿಸುವವರ ಆಷಾಢಭೂತಿತನವನ್ನು ಎತ್ತಿತೋರಿಸುವುದೂ ಸಾಧ್ಯವಿರಲಿಲ್ಲ.

            ಸಂತಸದ ಸಂಗತಿ ಎಂದರೆ, ಇದು ಬದಲಾಗಿದೆ. ಕಳೆದ 75 ವರ್ಷಗಳಿಂದ ಭಾರತೀಯರು ಕೇಳಲು ಕಾತರರಾಗಿದ್ದ ಭಾಷೆಯನ್ನು ಈಗ ಭಾರತದ ರಾಜ ತಾಂತ್ರಿಕರು ಮಾತನಾಡುತ್ತಿದ್ದಾರೆ. ಭಾರತ ಏನನ್ನು ಪ್ರತಿನಿಧಿಸುತ್ತದೆ ಹಾಗೂ ಭಾರತೀಯರು ಹೇಗೆ ಭಾವಿಸುತ್ತಾರೆ ಎಂಬುದರ ದೃಢವಾದ ಹಾಗೂ ಪ್ರಾಮಾಣಿಕ ನಿರೂಪಣೆ ಇದು. ತಮ್ಮದೇ ರಾಜಕೀಯ, ಧಾರ್ಮಿಕ ಮತ್ತಿತರ ಪ್ರೇರಣೆಗಳ ಪ್ರಚೋದನೆಗಳಲ್ಲಿ ಸಿಲುಕಿರುವ ವಿಶ್ವಸಂಸ್ಥೆಯ ಹಲವು ಸದಸ್ಯ ರಾಷ್ಟ್ರಗಳನ್ನು ಟೀಕಿಸುತ್ತಾ, 'ಇಸ್ಲಾಮೋಫೋಬಿಯಾ', 'ಕ್ರಿಶ್ಚಿಯಾನೋ
ಫೋಬಿಯಾ' ಹಾಗೂ ಯಹೂದ್ಯ ವಿರೋಧಿ ಭಾವನೆ ಗಳನ್ನು ವಿಶ್ವಸಂಸ್ಥೆ ದೊಡ್ಡದಾಗಿ ಬಿಂಬಿಸಿದೆ. ಆದರೆ, ಹಿಂದೂ, ಬೌದ್ಧ ಹಾಗೂ ಸಿಖ್ ಧರ್ಮವಿರೋಧಿ ಭಾವನೆಗಳ ಬಗ್ಗೆ ಏನು ಹೇಳುತ್ತೀರಿ?

ಹೊಸ 'ಫೋಬಿಯಾ'ಗಳು, ದ್ವೇಷಗಳು ಅಥವಾ ವಿಶ್ವದ ಇತರ ಪ್ರಮುಖ ಧರ್ಮಗಳ ವಿರುದ್ಧದ ಪೂರ್ವಗ್ರಹಗಳನ್ನೂ ಪೂರ್ಣವಾಗಿ ಗುರುತಿಸಬೇಕು ಎಂದು ತಿರುಮೂರ್ತಿ ಹೇಳಿದರು. ಧರ್ಮದ ವಿಚಾರಗಳಲ್ಲಿ ಸಮತೋಲನದ ಅಗತ್ಯವನ್ನು ಒತ್ತಿ ಹೇಳುತ್ತಾ, 'ಹಿಂದೂ, ಬೌದ್ಧ ಹಾಗೂ ಸಿಖ್ ವಿರೋಧಿ ಭಾವನೆಗಳು ಉದಯಿಸುತ್ತಿರುವುದು ಗಂಭೀರ ಕಾಳಜಿಯ ವಿಚಾರವಾಗಿದ್ದು, ಈ ಬೆದರಿಕೆಯ ನಿರ್ವಹಣೆಗೆ ವಿಶ್ವಸಂಸ್ಥೆ ಹಾಗೂ ಇತರ ಎಲ್ಲಾ ಸದಸ್ಯ ರಾಷ್ಟ್ರಗಳ ಗಮನ ಅಗತ್ಯ ಎಂದು ಪ್ರತಿಪಾದಿಸಿದರು. ಹಾಗಾದಾಗ ಮಾತ್ರ, ಅಂತಹ ವಿಚಾರಗಳ ಬಗ್ಗೆ ನಮ್ಮ ಚರ್ಚೆಗಳಲ್ಲಿ 'ಹೆಚ್ಚಿನ ಸಮತೋಲನ' ತರುವುದು ಸಾಧ್ಯ ಎಂದರು ಅವರು. ಇದನ್ನು ಚರ್ಚಾವಸ್ತುವಾಗಿಸಲು ಭಾರತಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಅಗತ್ಯವಾಯಿತು.

           ರಾಯಭಾರಿ ಎತ್ತಿರುವ ಎರಡನೆಯ ವಿಚಾರವು ಸಿದ್ಧಾಂತಕ್ಕೆ ಸಂಬಂಧಿಸಿದೆ. ಬಲಪಂಥದ ಮೇಲೆ ತೀವ್ರವಾದ ದಾಳಿಗಳನ್ನು ಗಮನಿಸಿದಲ್ಲಿ, 'ಪ್ರಜಾಪ್ರಭುತ್ವಗಳಲ್ಲಿ, ಬಲಪಂಥ ಹಾಗೂ ಎಡಪಂಥ, ರಾಜಕಾರಣದ ಎರಡು ಭಾಗಗಳಾಗಿವೆ. ಜನರ ಮತಗಳಿಂದ ಆಯ್ಕೆ ಗೊಂಡು ಅಧಿಕಾರಕ್ಕೇರುವವರು ಬಹುಜನರ ಆಯ್ಕೆ ಯನ್ನು ಪ್ರತಿನಿಧಿಸುತ್ತಾರೆ' ಎಂಬುದನ್ನು ಅರ್ಥ ಮಾಡಿ ಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು.

             ಪ್ರಜಾಪ್ರಭುತ್ವವು ಹಲವು ಸಿದ್ಧಾಂತ ಹಾಗೂ ನಂಬಿಕೆಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ ಎಂಬುದು ಅದರ ವ್ಯಾಖ್ಯಾನದಲ್ಲಿಯೇ ಇದೆ ಎಂಬ ಅಂಶವನ್ನು ಅವರು ಗಟ್ಟಿಸಿ ಹೇಳಿದ್ದು ಮುಖ್ಯ. ಪ್ರಜಾಪ್ರಭುತ್ವದ ಮೊದಲ ಪಾಠವನ್ನು ವಿಶ್ವಸಂಸ್ಥೆಯಲ್ಲಿ ಹೇಳಬೇಕಾಯಿತು ಎಂಬುದು ನಿಜಕ್ಕೂ ದೊಡ್ಡ ವ್ಯಂಗ್ಯದ ಸಂಗತಿ; ಆದರೆ, ವಿಶ್ವದಲ್ಲೇ ಹೆಚ್ಚು ಚೈತನ್ಯಶೀಲ ಪ್ರಜಾಪ್ರಭುತ್ವದ ಪ್ರತಿನಿಧಿಯಲ್ಲದೆ ಮತ್ಯಾರು ತಾನೇ ಇದನ್ನು ಮನಕ್ಕೆ ನಾಟುವಂತೆ ಹೇಳಬಲ್ಲವರು? ಸ್ಟಾಲಿನ್ (ಜನಹತ್ಯೆ ಯೋಜಿಸಿ ಲಕ್ಷಾಂತರ ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡಿದ ವ್ಯಕ್ತಿ) ಹೆಸರು ಹೇಳಿಕೊಂಡು ಓಡಾಡುವವರು ಪ್ರಜಾಪ್ರಭುತ್ವದ ರಕ್ಷಕರಂತೆ ಠೀವಿಯಿಂದ ಓಡಾಡುವುದು ಆಶ್ಚರ್ಯವೇನಲ್ಲ! ಹಾಗೆಯೇ ಪಶ್ಚಿಮ ರಾಷ್ಟ್ರಗಳ ಕೆಲವು ಪ್ರಖ್ಯಾತ ಶೈಕ್ಷಣಿಕ ಸಂಸ್ಥೆಗಳು, ಈ ಕಪಟಿಗಳನ್ನು 'ಪ್ರಜಾಪ್ರಭುತ್ವವಾದಿಗಳು' (ಡೆಮಾಕ್ರಾಟ್ಸ್) ಹಾಗೂ 'ಉದಾರವಾದಿಗಳು' (ಲಿಬರಲ್) ಎಂದು ಭಾವಿಸಿ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳ ಪರಿಧಿಯಲ್ಲಿ ತಮ್ಮ ವಿಚಾರಗಳನ್ನು ಪ್ರಚುರ ಪಡಿಸಲು ಅವಕಾಶ ನೀಡುವುದೂ ಅಷ್ಟೇ ವಿಚಿತ್ರ.

ಭಯೋತ್ಪಾದನೆಯ ವ್ಯಾಖ್ಯಾನವನ್ನು ದುರ್ಬಲಗೊಳಿಸುವುದರ ವಿರುದ್ಧ ವಿಶ್ವಸಂಸ್ಥೆಗೆ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಚಾರವನ್ನು ಎತ್ತಿ ಹೇಳುವುದು ಪ್ರಧಾನಿ ಯವರಿಗೂ ಇತ್ತೀಚೆಗೆ ಮುಖ್ಯವೆನಿಸಿತ್ತು. ಭಾರತದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಯತ್ನಗಳ ಕುರಿತಂತೆ ಅವರು ಜಾಗತಿಕ ಆಧ್ಯಾತ್ಮಿಕ ಸಂಸ್ಥೆಯೊಂದರ ಸಮಾರಂಭವೊಂದರಲ್ಲಿ ಮಾತನಾಡಿದರು. ರಾಷ್ಟ್ರವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಈ ಯತ್ನಗಳನ್ನು ಬರೀ ರಾಜಕೀಯ ಎಂದು ಬದಿಗೊತ್ತಲಾಗದು ಎಂದೂ ಹೇಳಿದರು.

              ಭಾರತದ ಉದಾರವಾದಿ ಪ್ರಜಾಸತ್ತಾತ್ಮಕ ಪರಿಸರ ವನ್ನು ಹಾಳುಗೆಡವಲು ಯತ್ನಿಸುವ ರೀತಿಯಲ್ಲಿ ಪಾಶ್ಚಿ ಮಾತ್ಯ ಸಂಸ್ಥೆಗಳ ಕಾರ್ಯಸೂಚಿ ಪ್ರೇರಿತ ವರದಿಗಳು ಹಾಗೂ ವಿಶ್ಲೇಷಣೆಗಳು ಕಳೆದ ಎರಡು ವರ್ಷಗಳಲ್ಲಿ ಬಿಡುಗಡೆ ಆಗಿರುವುದರ ಮಧ್ಯೆಯೇ ಪ್ರಧಾನಿಯವರ ಹೇಳಿಕೆಗಳು ಹೊರಬಂದಿವೆ. ದುಃಖದ ಸಂಗತಿ ಎಂದರೆ, ಈ ಪೂರ್ವಗ್ರಹಪೀಡಿತ ವರದಿಗಳು, ರಾಷ್ಟ್ರದೊಳಗೆ ಪೂರ್ಣ ಬಯಲಾಗಿ ನಿಂತಿರುವ ಭಾರತೀಯ ಎಡ ಹಾಗೂ ನೆಹರೂವಾದಿ ಬುದ್ಧಿಜೀವಿಗಳಿಂದ ಉದ್ದೀಪನಗೊಂಡಿವೆ. ಇಂತಹ ನಿರುದ್ಯೋಗಿ, ಉದ್ಯೋಗಗಳಿಗೆ ಸೇರಿಸಿಕೊಳ್ಳಲಾಗದ, ಪೈಶಾಚಿಕ ಮನಸ್ಸುಗಳು ಭಾರತದ ಹೊರಗೆ ತಮ್ಮ ಸರಕುಗಳನ್ನು ಮಾರಲು ಹಾಗೂ ಭಾರತವನ್ನು ಶಕ್ತಿಗುಂದಿಸಲು ಹೊಸ ಹುಲ್ಲುಗಾವಲುಗಳಿಗೆ ಹುಡುಕಾಟ ನಡೆಸುತ್ತಿವೆ. ಏಕದೈವಾರಾಧನೆಯ (ಅಬ್ರಹಾಮಿಕ್) ಧರ್ಮಗಳಿಗೆ ಬೆಸೆದುಕೊಂಡ ಸಂಸ್ಥೆಗಳ ಜಾಲವೇ ಈ ಕಾರ್ಯಸೂಚಿ ಯನ್ನು ಮುನ್ನಡೆಸುತ್ತಿದೆ. ಧರ್ಮ, ಸಿದ್ಧಾಂತ ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ದ್ವಂದ್ವ ಮಾತುಗಳನ್ನು ಎದುರಿಸಲು ಭಾರತವನ್ನು ಸಶಕ್ತವಾಗಿಸುವಲ್ಲಿ ಪ್ರಧಾನಿ ಮೋದಿಯವರ ದೃಢ ಸಂಕಲ್ಪವನ್ನು ಗಮನಿಸಬಹುದು.

ಒಂದು ವರ್ಷದ ಹಿಂದೆ ವಿಶ್ವಸಂಸ್ಥೆಯಲ್ಲಿ ಹಿಂದೂ, ಬೌದ್ಧ ಹಾಗೂ ಸಿಖ್ಖರ ವಿರುದ್ಧದ ದ್ವೇಷ ಹಾಗೂ ಹಿಂಸೆಯ ವಿಚಾರವನ್ನು ಭಾರತೀಯ ರಾಜತಾಂತ್ರಿಕರೊಬ್ಬರು ಮೊದಲ ಬಾರಿಗೆ ಎತ್ತಿದರು. ಆ ನಂತರ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೆಲವು ತಿಂಗಳುಗಳ ಹಿಂದೆ, ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಸ್. ಮುರಳೀಧರನ್ ಅವರು ಈ ವಿಚಾರ ಪ್ರಸ್ತಾಪಿಸಿದರು. ಈಗ ತಿರುಮೂರ್ತಿ ಅವರ ಭಾಷಣವು ನಿಜಕ್ಕೂ ಅಂತಿಮ ನಿರ್ಣಾಯಕ ಮಾತಿನಂತಿದೆ. ಭಾರತವು ಈಗ ನಾವು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಖಂಡಿತ ಮೋದಿ ಯುಗಕ್ಕೆ ಕಾಲಿರಿಸಿದಂತಾಗಿದೆ. ನೆಹರೂ ಯುಗದ 'ಹೀಗಾದರೆ-ಹಾಗಾದರೆ' ಎಂಬ ದ್ವಂದ್ವಗಳು ಮುಗಿದಿದ್ದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತೆಗೆದುಕೊಳ್ಳುವ ನಿಲುವುಗಳಲ್ಲಿ ಯಾವುದೇ ಅನಿಶ್ಚಯ ಇಲ್ಲ. 'ನಯಾ ಭಾರತ್'ಗೆ ಅಂತರರಾಷ್ಟ್ರೀಯ ಸಮುದಾಯ ಹೊಂದಿ ಕೊಳ್ಳಬೇಕು. ಬೇರೆ ಆಯ್ಕೆಯೇ ಇಲ್ಲ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries