ಮಲಪ್ಪುರಂ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ.
ನಗರ ಸ್ವಚ್ಛಗೊಳಿಸುವ 11 ಮಹಿಳೆಯರ ಪೌರಕಾರ್ಮಿಕ ಗುಂಪೊಂದು ₹10 ಕೋಟಿ ಲಾಟರಿ ಹಣ ಗೆದ್ದಿದೆ. ಕೇರಳ ರಾಜ್ಯ ಸರ್ಕಾರದ ಲಾಟರಿ ವಿಭಾಗ ಮಾನ್ಸೂನ್ ಬಂಪರ್ ಆಪರ್ ವಿಜೇತರನ್ನು ಘೋಷಣೆ ಮಾಡಿದ್ದು 11 ಮಹಿಳೆಯರು ವಿಜೇತರಾಗಿದ್ದಾರೆ.
ಪರಪ್ಪಂನಂಗಡಿ ನಗರಸಭೆಯ 'ಹರಿತ ಕರ್ಮ ಸೇನೆ'ಯ 11 ಮಹಿಳೆಯರು ತಲಾ ₹25 ಷೇರು ಹಾಕಿ ವಾರದ ಹಿಂದೆ ₹250ನ ಲಾಟರಿ ಟಿಕೇಟ್ ಖರೀದಿಸಿದ್ದರು. ಇದೀಗ ಅವರು ಕೋಟಿ ಕೋಟಿ ಹಣ ಗೆದ್ದಿದ್ದಾರೆ.
'ನಾವು ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೇಟ್ ಖರೀದಿಸಿದ್ದೇವು, ಈಗ ಬಹುಮಾನ ಗೆದ್ದಿರುವುದು ಖುಷಿ ಹೆಚ್ಚಿಸಿದೆ' ಎನ್ನುತ್ತಾರೆ ಲಾಟರಿ ಹಣ ವಿಜೇತೆ ರಾಧಾ ಎನ್ನುವ ಮಹಿಳೆ.
'ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ' ಎನ್ನುತ್ತಾರೆ ಇನ್ನೊಬ್ಬ ಮಹಿಳೆ.
ಯಾರು ಆ ಅದೃಷ್ಟವಂತರು?
ಒಟ್ಟು 11 ಮಂದಿ ಪೌರ ಕಾರ್ಮಿಕರು ಸೇರಿ MB 200261 ನಂಬರಿನ ಲಾಟರಿಯನ್ನು ಪಲಕ್ಕಾಡ್ ನ್ಯೂ ಸ್ಟಾರ್ ಏಜೆನ್ಸಿ ಬಳಿ ಖರೀದಿ ಮಾಡಿದ್ದರು. ಪಲಕ್ಕಾಡ್ ಏಜೆನ್ಸಿಯಿಂದ ಪರಪ್ಪನಂಗಡಿಗೆ ಬಂದಿದ್ದ ವ್ಯಕ್ತಿಯಿಂದ ಲಾಟರಿ ಖರೀದಿಸಿದ್ದರು. ಪಿ. ಲಕ್ಷ್ಮೀ, ಕೆ. ಲೀಲಾ, ಎಂ. ಪಿ. ರಾಧಾ, ಎಂ ಶೀಜಾ, ಚಂದ್ರಿಕಾ ಥುದಿಸ್ಸೆರಿ, ಬಿಂದು ಕೊಹುಮ್ಮಾಲ್, ಕಾರ್ತ್ಯಾಯನಿ ಪಟ್ಟಣನಾಥ್, ಶೋಭಾ ಕುರುಲಿಲ್, ಕುಟ್ಟುಮಲು ಚೆರುಕುಟ್ಟಿಯಿಲ್, ಬೇಬಿ ಚೆರುಮನ್ನಿಲ್ ಮತ್ತು ರಾಧಾ ಮುಂದುಪಲಥಿಲ್ ಹೆಸರಿನ ಪೌರ ಕಾರ್ಮಿಕರು 250 ರೂ. ಬೆಲೆಯ ಲಾಟರಿ ಟಿಕೆಟ್ ಅನ್ನು ಒಟ್ಟಿಗೆ ಖರೀದಿ ಮಾಡಿದ್ದರು. ರಾಧಾ ಎಲ್ಲರನ್ನು ಒತ್ತಾಯಿಸಿ ಮಾಡಿ ಟಿಕೆಟ್ ಖರೀದಿಸಿದ್ದರು. ಇದೀಗ ಈ ಟಿಕೆಟ್ಗೆ 10 ಕೋಟಿ ರೂ. ಬಂಪರ್ ಲಾಟರಿ ಬಹುಮಾನ ಬಂದಿದ್ದು, ಟಿಕೆಟ್ ಅನ್ನು ಪರಪ್ಪನಂಗಡಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಲ್ಲಿಸಿದ್ದಾರೆ. ಎಲ್ಲರು ಸೇರಿ ಒಟ್ಟು ನಾಲ್ಕು ಬಾರಿ ಟಿಕೆಟ್ ಖರೀದಿ ಮಾಡಿದ್ದರು. ಕಳೆದ ಬಾರಿ 1000 ರೂಪಾಯಿ ಓಣಂ ಬಂಪರ್ ಲಾಟರಿ ಬಹುಮಾನ ಗೆದ್ದಿದ್ದರು.
ಪೌರ ಕಾರ್ಮಿಕ ಕೆಲಸ ಮುಂದುವರಿಸುತ್ತೇವೆ
ಹಣವಿಲ್ಲದ ಕಾರಣ ಲಾಟರಿ ತೆಗೆದುಕೊಳ್ಳಬೇಕೇ ಎಂದು ಒಂದು ಕ್ಷಣ ಎಲ್ಲರು ಯೋಚನೆ ಮಾಡಿದ್ದರು. ಆದರೂ ಚಿಕಿತ್ಸೆ, ಸಾಲ ಸೇರಿದಂತೆ ಮನೆಯಲ್ಲಿನ ಹಲವು ಸಮಸ್ಯೆಗಳ ಕಾರಣದಿಂದ ಎಲ್ಲರೂ ಅದೃಷ್ಟದ ಮೇಲೆ ಭಾರ ಹಾಕಿ, ಲಾಟರಿ ಖರೀದಿ ಮಾಡುವ ತಮ್ಮ ನಿಲುವನ್ನು ಬದಲಿಸಲಿಲ್ಲ. ಎಂದಿನಂತೆಯೇ ಈ ಬಾರಿಯೂ ಲಾಟರಿ ಖರೀದಿ ಮಾಡಿದ್ದರು. ಇದೀಗ 11 ಮಂದಿಯನ್ನು ಅದೃಷ್ಟ ಕೈಹಿಡಿದಿದ್ದು, ಒಂದೇ ಬಾರಿ ತಮ್ಮ ಕಷ್ಟಗಳೆಲ್ಲ ಮಾಯವಾಗಿ, ಸಂತಸದ ಕ್ಷಣಗಳು ಎದುರಾಗಿವೆ. ಇದೀಗ 11 ಮಂದಿಯೂ ಲಕ್ಷಾಧಿಪತಿಗಳಾಗಿದ್ದರೂ ತಮ್ಮ ಪೌರ ಕಾರ್ಮಿಕ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಮಗಳನ್ನು ನೆನೆದು ಶೋಭಾ ಕಣ್ಣೀರು
ಲಾಟರಿ ಬಹುಮಾನ ಬಂದಿದೆ ಎಂಬುದನ್ನು ಕೇಳಿದ ಕೂಡಲೇ ಶೋಭಾಳ ಕಣ್ಣಲ್ಲಿ ನೀರುವ ತುಂಬಿಕೊಂಡಿತು. ಈ ಸಂತಸ ಸುದ್ದಿಯನ್ನು ಹೇಳಿಕೊಳ್ಳಲು ತನ್ನ ಮಗಳು ಇಲ್ವಲ್ಲಾ ಎಂದು ಕಣ್ಣೀರಿಡುತ್ತಾ ಕ್ಯಾಮೆರಾಗಳನ್ನು ತಪ್ಪಿಸಿ ತನ್ನ ಕಣ್ಣೀರನ್ನು ಒರೆಸಿಕೊಂಡರು. ಶೋಭಾಳ ಮಗಳು ರವೀನಾ ಮಹಾರಾಜ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿನಿಯಾಗಿದ್ದಳು. ಓದಿನಲ್ಲೂ ಮುಂಚೂಣಿಯಲ್ಲಿದ್ದಳು. ಮನೆಯಲ್ಲಿ ಏನೇ ಕಷ್ಟಗಳಿದ್ದರೂ ಅದನ್ನು ಮಗಳ ಜತೆ ತೋರಿಸಿಕೊಳ್ಳದೆ ಶೋಭಾ, ತನ್ನ ಮಗಳಿಗೆ ಎಲ್ಲವನ್ನು ಒದಗಿಸಿಕೊಟ್ಟಿದ್ದಳು. ಆದರೆ, ಖಿನ್ನತೆಯಿಂದ ಬಳಲುತ್ತಿದ್ದ ರವಿನಾ ಆತ್ಮಹತ್ಯೆಗೆ ಶರಣಾದಳು. ಮೂರು ವರ್ಷಗಳ ಹಿಂದೆ ಶೋಭಾ ಪತಿಯು ಕೂಡ ಹೃದಯಾಘಾದಿಂದ ಮೃತಪಟ್ಟಿದ್ದಾರೆ. ಆಕೆಯ ಮಗ ವಿಪಿನ್ ಮೀನುಗಾರನಾಗಿದ್ದಾನೆ.
11 ಪೌರ ಕಾರ್ಮಿಕರದ್ದು ಒಂದೊಂದು ಕತೆಯಾಗಿದ್ದು, ಇದೀಗ ಲಾಟರಿ ಬಹುಮಾನ ಅವರ ಕಷ್ಟಗಳನ್ನು ದೂರ ಮಾಡಿದೆ.