ಕಾಸರಗೋಡು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಸುಗಳಿಗೆ ಪ್ರತ್ಯೇಕವಾದ ವೈರಸ್ ಬಾಧೆಯೊಂದು ಭೀತಿಕರವಾಗಿ ಹರಡುತ್ತಿರವುದು ಆತಂಕಕ್ಕೆ ಕಾರಣವಾಗಿದೆ. ವ್ಯಾಕ್ಸ್ ರೋಗಗಳನ್ನು ಹರಡುವ ವೈರಸ್ ಗಳಂತೆಯೇ ಇರುವ ವೈರಸ್ ಗಳಿಂದ ಜಾನುವಾರುಗಳಿಗೆ ಇದು ಹರಡುತ್ತವೆ. ಇದು ದನಗಳ ಚರ್ಮದ ಮೇಲೆ ಸಣ್ಣ ಗೆಡ್ಡೆಗಳು ರೂಪುಗೊಳ್ಳುವ ಕಾಯಿಲೆಯಾಗಿದೆ. ಮೂರು ತಿಂಗಳ ಹಿಂದೆ ಜಿಲ್ಲೆಯ ತಚ್ಚಂಗಾಡ್ ಪ್ರದೇಶದಲ್ಲಿ ಈ ರೋಗವನ್ನು ಮೊದಲು ಗುರುತಿಸಲಾಯಿತು. ಬಳಿಕ ಇದೀಗ ಚೆಂಗಳ, ಪಾಡಿ ಮತ್ತು ಮಧೂರು ವ್ಯಾಪ್ತಿಯಲ್ಲಿ ಹಲವೆಡೆ ಹಬ್ಬಿರುವುದನ್ನು ಪತ್ತೆಹಚ್ಚಲಾಗಿದೆ.
ಮುಖ್ಯವಾಗಿ ಸೊಳ್ಳೆಗಳಿಂದ ಈ ಸೋಂಕು ಹಬ್ಬುತ್ತಿದೆ. ಇತರ ಕೀಟಗಳಿಂದಲೂ ಈ ರೋಗ ಹರಡುತ್ತಿರುವುದು ಗಮನಕ್ಕೆ ಬಂದಿವೆ. ಈ ಸೋಂಕು ಮುಖ್ಯವಾಗಿ ಕರುಗಳ ಮೇಲೆ ಪರಿಣಾಮ ಬೀರುತ್ತದೆ. ಜ್ವರ, ಹಸಿವಿನ ಕೊರತೆ ಮತ್ತು ಮೂಗು ಸ್ರವಿಸುವಿಕೆಯು ಸೋಂಕಿತ ಪ್ರಾಣಿಗಳ ಲಕ್ಷಣಗಳಾಗಿವೆ. ಬಳಿಕ ಮೈಪೂರ್ತಿ ಗೆಡ್ಡೆಗಳು ಎದ್ದು ಅದು ಒಡೆದು ದ್ರವವೊಂದು ಹೊರಬರುತ್ತವೆ. ಮತ್ತು ಆ ಬಳಿಕ ಇದು ಗಾಯಗಳಿಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಇದ್ದಲ್ಲಿ ಗಾಯಗಳು ದೊಡ್ಡದಾಗಬಹುದು ಮತ್ತು ನೊಣಗಳು ಮೊಟ್ಟೆಗಳನ್ನು ಇರಿಸಿ ಹುಳುಗಳ ಉತ್ಪಾದನೆಗೆ ಕಾರಣವಾಗುತ್ತದೆ.
ಸೋಂಕಿತ ಹಸುಗಳಲ್ಲಿ ಹಾಲಿನ ಗಮನಾರ್ಹ ಕೊರತೆಯು ಡೈರಿ ರೈತರಿಗೆ ತೊಂದರೆಯನ್ನುಂಟುಮಾಡುತ್ತಿದೆ. ರೋಗನಿರೋಧಕ ಕೊರತೆಯಿಂದಾಗಿ ಜಾನುವಾರುಗಳು ಇಂತಹ ಸೋಂಕಿಗೆ ಒಳಗಾಗುತ್ತಿರುವುದಾಗಿ ತಜ್ಞರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನೂರಾರು ಕುಟುಂಬಗಳ ಪ್ರಧಾನ ಆದಾಯ ಜಾನುವಾರು ಸಾಕಣೆಯಾಗಿದ್ದು ಹಸುಗಳಿಗೆ ಬಂದಿರುವ ಇಂತಹ ಸೋಂಕಿನಿಂದ ವ್ಯಾಪಕ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಸೋಂಕು ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಗೆಡ್ಡೆಗಳ ಮೇಲೆ ಬೇವಿನ ಎಲೆಗಳು, ಗೋರಂಟಿ ಮತ್ತು ಅರಿಶಿನವನ್ನು ಹಚ್ಚುವುದರಿಂದ ಸೋಂಕಿತ ದನಕರುಗಳಿಗೆ ಪರಿಹಾರ ಸಿಗುತ್ತದೆ. ಆದರೆ ಅವುಗಳನ್ನು ಗುಣಪಡಿಸುವುದಿಲ್ಲ.
ಆಫ್ರಿಕಾ ಮತ್ತು ಇತರೆಡೆಗಳಲ್ಲಿ ಕಂಡುಬರುವ ಡರ್ಮಟೈಟಿಸ್ ಮೂರು ವರ್ಷಗಳ ಹಿಂದೆ ಭಾರತದಲ್ಲಿ ವರದಿಯಾಗಿತ್ತು. ಈ ರೋಗವನ್ನು ಮೊದಲು ಒಡಿಶಾದಲ್ಲಿ ಪತ್ತೆ ಮಾಡಲಾಯಿತು. ಮತ್ತು ನಂತರ ಇತರ ರಾಜ್ಯಗಳಿಗೆ ಹರಡಿತು.
ಸೋಂಕಿತ ಹಸುಗಳ ಹಾಲಿನ ಬಳಕೆಯಲ್ಲಿ ಯಾವುದೇ ವ್ಯೆತಿರಿಕ್ತ ಪರಿಣಾಮಗಳಿಲ್ಲ ಎಂದು ಪಶು ತಜ್ಞರು ತಿಳಿಸಿದ್ದಾರೆ. ಹಾಲನ್ನು ಕುದಿಸಿ ಬಳಸುವುದರಿಂದ ವೈರಸ್ ಮನುಷ್ಯನ ಮೇಲೆ ಪರಿಣಾಮ ಬೀರದು. ಪ್ರಸ್ತುತ ಈ ಸೋಂಕು ಬಂದ ಬಳಿಕ ಜ್ವರ, ನೋವು, ಮತ್ತು ವ್ರಣಗಳಾಗಿ ಕಂಗೆಡುವ ಹಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಎರಡು-ಮೂರು ತಿಂಗಳುಗಳಲ್ಲಿ ವಾಸಿಯಾಗಬಹುದೆಂಬುದು ತಜ್ಞರ ಅಭಿಮತ.
ಅಭಿಮತ:
ಈ ಸೋಂಕು ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಹಸು ಸಾಕಣೆ ಮಾಡುವವರು ಹೆದರುವ ಅಗತ್ಯ ಇಲ್ಲ. ಸೀಮಿತ ಪ್ರಮಾಣದಲ್ಲಿ ಸೋಂಕು ಹರಡದಂತೆ ಬಳಸುವ ಚುಚ್ಚುಮದ್ದು ಲಭ್ಯವಿದ್ದು ಅಗತ್ಯ ಇದ್ದವರಿಗೆ ಆಯಾ ವ್ಯಾಪ್ತಿಯ ಸ್ಥಳೀಯ ಪಶು ಸಂಗೋಪನಾ ಕೇಂದ್ರಗಳ ಮೂಲಕ ವಿತರಿಸಲಾಗುವುದು. ಸೋಂಕು ಒಮ್ಮೆ ಬಾಧಿಸಿದ ಬಳಿಕ ಸೂಕ್ತ ಚಿಕಿತ್ಸೆ ನೀಡಿದಲ್ಲಿ ನಿಧಾನವಾಗಿ ಗುಣಮುಖವಾಗುವುದು.
ಡಾ.ನಾಗರಾಜ್.
ಕಾಸರಗೋಡು ಜಿಲ್ಲಾ ಪಶುಸಂಗೋಪನಾ ಉಪ ನಿರ್ದೇಶಕ.