ಅಯೋಧ್ಯೆ: ನವೀಕೃತ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಶನಿವಾರ ಅಯೋಧ್ಯೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿವಿಧ ಕಲಾವಿದರ ತಂಡಗಳು ಬರಮಾಡಿಕೊಳ್ಳಲಿವೆ.
ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗಿನ ರಾಮಪಥದಲ್ಲಿ ನಿರ್ಮಿಸಲಾಗಿರುವ 40 ವೇದಿಕೆಗಳಲ್ಲಿ 1,400 ಕಲಾವಿದರು ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ತಿಳಿಸಿದೆ.
ಹೇಳಿಕೆಯ ಪ್ರಕಾರ, ಕಲಾವಿದ ವೈಭವ್ ಮಿಶ್ರಾ ಅವರು ಶಂಖಗಳನ್ನು ಊದುವ ಮೂಲಕ ರಾಮಲಲ್ಲಾ ಭೂಮಿಯಲ್ಲಿ ಪ್ರಧಾನಿಯನ್ನು ಸ್ವಾಗತಿಸುತ್ತಾರೆ ಮತ್ತು ಕಾಶಿಯ್ಲಿ ಮೋಹಿತ್ ಮಿಶ್ರಾ ಅವರು ಢಮರು ಬಾರಿಸುತ್ತಾರೆ.
ನೋಯ್ಡಾದ ರಾಗಿಣಿ ಮಿತ್ರಾ ಮತ್ತು ಸುಲ್ತಾನ್ಪುರದ ಬ್ರಜೇಶ್ ಪಾಂಡೆ ಅವಧಿ ಜಾನಪದ ನೃತ್ಯವನ್ನು ಪ್ರಸ್ತುತಪಡಿಸಿದರೆ, ಗೋರಖ್ಪುರದ ಸಹಜ್ ಸಿಂಗ್ ಶೇಖಾವತ್ ವಂಟಂಗಿಯ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 11.15ರ ಸುಮಾರಿಗೆ ಅಯೋಧ್ಯೆ ರೈಲು ನಿಲ್ದಾಣವನ್ನು ಮತ್ತು ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 12.15ರ ಸುಮಾರಿಗೆ ಉದ್ಘಾಟಿಸಲಿದ್ದಾರೆ.
ಇದಾದ ಬಳಿಕ, ₹15,700 ಕೋಟಿಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.