(ನಿನ್ನೆಯಿಂದ ಮುಂದುವರಿದುದು.)
19ನೆಯ ಶತಮಾನದ ಅಂತಿಮ ಚರಣದಲ್ಲಿ ಮೈಸೂರು ಭಾಗದ ಪತ್ರಿಕೋದ್ಯಮದ ನಾಯಕತ್ವ ವಹಿಸಿದವರು ಎಂ. ವೆಂಕಟಕೃಷ್ಣಯ್ಯ (ನೋಡಿ). ಇವರ ಸಾರ್ವಜನಿಕ ಸೇವೆಯ ಹಲವು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದಾಗಿತ್ತು. ತಾತಯ್ಯ ಎಂದೇ ಖ್ಯಾತರಾಗಿದ್ದ ಇವರು ಒಂದು ಸಂಸ್ಥೆಯ ರೀತಿ ಬೆಳೆದು ಹಲವು ಪತ್ರಿಕೆಗಳ ಸ್ಥಾಪಕರಾಗಿ, ಮೈಸೂರಿನ ಸಾರ್ವಜನಿಕ ಜೀವನಕ್ಕೆ ಹೇಗೋ ಪತ್ರಿಕೋದ್ಯ ಮಕ್ಕೂ ಆಧಾರಸ್ತಂಭ ವಾಗಿದ್ದರು.
ಹಿತಬೋಧಿನಿ ಮಾಸಪತ್ರಿಕೆಯ ಮೂಲಕ ಇವರು ಪತ್ರಿಕಾರಂಗ ಪ್ರವೇಶಿಸಿದರು. ಹಿತಬೋಧಿನಿ 1883ರಲ್ಲಿ ಆರಂಭಗೊಂಡು 1890ರ ವರೆಗೆ ನಡೆದು ಬಂತು. ಈ ಪತ್ರಿಕೆ ಆ ಕಾಲದಲ್ಲಿ ಅಪಾರ ಜನಮನ್ನೆಣೆ ಗಳಿಸಿತ್ತು ಎನ್ನಲಾಗಿದೆ. ವೃತ್ತಾಂತ ಚಿಂತಾಮಣಿ (1885) ಇವರ ಇನ್ನೊಂದು ಜನಪ್ರಿಯ ಪತ್ರಿಕೆ. ತೀಕ್ಷ್ಣ ಸಂಪಾದಕೀಯಗಳಿಂದ ಆಡಳಿತಗಾರರಿಗೆ ಈ ಪತ್ರಿಕೆ ಚುರುಕು ಮುಟ್ಟಿಸುತ್ತಿತ್ತು. ಮೈಸೂರು ಹೆರಾಲ್ಡ್ ಎಂಬ ಪತ್ರಿಕೆಯನ್ನು 1886ರಲ್ಲೂ ವೆಲ್ತ್ ಆಫ್ ಮೈಸೂರು ಎಂಬುದನ್ನು 1912ರಲ್ಲೂ ಸಂಪಾದಿಸಿ ಪ್ರಕಟಿಸಿದ ಖ್ಯಾತಿ ತಾತಯ್ಯ ನವರದು. ಇದಲ್ಲದೆ ಇವರ ಪತ್ರಿಕಾ ಸಾಹಸದ ಸಾಲಿಗೆ ಸೇರಬೇಕಾದ ಇತರ ಪತ್ರಿಕೆಗಳೆಂದರೆ ಸಂಪದಭ್ಯುದಯ (ಕನ್ನಡ ದಿನಪತ್ರಿಕೆ 1912), ನೇಚರ್ ಕ್ಯೂರ್ (ಇಂಗ್ಲಿಷ್ ದಿನಪತ್ರಿಕೆ) ಮತ್ತು ಸಾಧ್ವಿ (1899). ಸಾಧ್ವಿ (ನೋಡಿ) ಮೊದಲು ವಾರಪತ್ರಿಕೆಯಾಗಿ ಆರಂಭಗೊಂಡು ಅನಂತರ ದಿನಪತ್ರಿಕೆಯಾಗಿ ಬೆಳೆದು ಬಂದು, ವೆಂಕಟಕೃಷ್ಣಯ್ಯನವರ ಶಿಷ್ಯ ಅಗರಂರಂಗಯ್ಯನವರ ಸಂಪಾದಕತ್ವದಲ್ಲಿ ಈ ಪತ್ರಿಕೆ ಶತಮಾನದ ಸನಿಹ ಬದುಕಿತು. ಒಂದು ಕಾಲದಲ್ಲಿ ಮೈಸೂರಿನ ಜನಪ್ರಿಯ ಪತ್ರಿಕೆ ಗಳಲ್ಲೊಂದಾಗಿತ್ತು. ಅಗರಂ ರಂಗಯ್ಯನವರ ಕಾಲಾನಂತರ ಕೆಲಕಾಲ ನಿಂತುಹೋಗಿದ್ದ ಸಾಧ್ವಿ ಈಗ ಹೊಸ ಮಾಲೀಕತ್ವದಲ್ಲಿ ಮುಂದುವರಿದಿದೆ.
ಕನ್ನಡದಲ್ಲಿ ಪತ್ರಿಕಾ ಚಟುವಟಿಕೆಗಳು ಗರಿ ಕೆದರಿದಂತೆಲ್ಲ ಮೂರು ಮುಖ್ಯ ಪ್ರಾದೇಶಿಕ ಕೇಂದ್ರಗಳು ಪತ್ರಿಕೆಯ ದೃಷ್ಟಿಯಿಂದ ಹುಟ್ಟಿಕೊಂಡುವು. ಇವನ್ನು ಮಂಗಳೂರು, ಮೈಸೂರು ಹಾಗೂ ಧಾರಾವಾಡ ವಿಭಾಗಗಳೆಂದು ಪರಿಗಣಿಸಬಹುದು. ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದು ಕರ್ನಾಟಕ ಭಾಗದಲ್ಲಿ ಕನ್ನಡ ಪತ್ರಿಕಾ ಚಟುವಟಿಕೆಗಳಿಗೆ ಪ್ರೋತ್ಸಾಹವಿರ ಲಿಲ್ಲ. ಕರ್ಕಿ ಸೂರಿ ವೆಂಕಟರಮಣಶಾಸ್ತ್ರಿ (ನೋಡಿ) ಆ ಕಾಲದಲ್ಲೇ ಮುಂಬಯಿಗೆ ತೆರಳಿ 1885ರಲ್ಲಿ ಹವ್ಯಕ ಕಾರವಾರ ಚಂದ್ರಿಕ ಎಂಬ ಸಾಪ್ತಾಹಿಕವನ್ನು ಆರಂಭಿಸಿದ್ದು ಹಾಗೂ ಅದು ಆಗ ಮುಂಬಯಿ ಪ್ರಾಂತ್ಯಕ್ಕೆ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲೂ ಜನಪ್ರಿಯವಾಗಿದ್ದು ಉಲ್ಲೇಖನೀಯ. ಈ ಪತ್ರಿಕೆ ನಾಲ್ಕು ವರ್ಷ ಬಾಳಿತು. ಹಿತೋಪದೇಶ ಎಂಬ ಮಾಸಿಕವನ್ನೂ ಇವರು ಕೆಲಕಾಲ ನಡೆಸಿದರು. ಮಕ್ಕಳಿಗಾಗಿಯೂ ವಿಶೇಷ ಪತ್ರಿಕೆ ನಡೆಸಿದರು.
(ನಾಳೆಗೆ ಮುಂದುವರಿಯುವುದು......)