ಬದಿಯಡ್ಕ: ಗುರುಪೀಠದ ನೇರ ಪ್ರತಿನಿಧಿಗಳಾಗಿ ಗುರಿಕ್ಕಾರರು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಶ್ರೀಪೀಠಕ್ಕೂ ಸಮಾಜಕ್ಕೂ ಪ್ರಧಾನ ಕೊಂಡಿಯಾಗಿ ಗುರಿಕ್ಕಾರರಿದ್ದಾರೆ. ಸಮಾಜದ ಸಮಗ್ರ ವಿಕಾಸಕ್ಕೆ ಗುರಿಕ್ಕಾರರ ನೇತೃತ್ವ ಕಾರಣವಾಗಬೇಕಿದೆ ಎಂದು ಕೆ.ಟಿ.ವೆಂಕಟೇಶ್ವರ ನೂಜಿ ಅಭಿಪ್ರಾಯಪಟ್ಟರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶ್ರೀರಾಮಚಂದ್ರಾಪುರಮಠದ ಮುಳ್ಳೇರ್ಯ ಹವ್ಯಕ ಮಂಡಲ ಗುರಿಕ್ಕಾರರ ಗುರುಮಾರ್ಗ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾರ್ಗದರ್ಶನವನ್ನು ನೀಡಿದರು.
ಸಂಭಾಷಣಾ ರೂಪದಲ್ಲಿ ಗುರಿಕ್ಕಾರರ ಸ್ಥಾನಮಾನ, ಕರ್ತವ್ಯ ಬದ್ಧತೆ, ಜವಾಬ್ದಾರಿ ಕಾರ್ಯವೈಖರಿ, ಶಿಷ್ಯರೊಂದಿಗಿರುವ ಸಹೃದಯ ಬಂಧ, ಸಾಮಾಜಿಕ ಕಳಕಳಿ ಎಂಬ ವಿಷಯದಲ್ಲಿ ಸಂಭಾಷಣಾ ರೂಪದಲ್ಲಿ ಕಾರ್ಯಾಗಾರವನ್ನು ಅವರುನಡೆಸಿಕೊಟ್ಟರು. ಮುಳ್ಳೇರ್ಯ ಹವ್ಯಕ ಮಂಡಲ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಪ್ರಸ್ತಾವನೆ ಮಾಡಿ ಕಾರ್ಯಾಗಾರದ ಉದ್ದೇಶದ ಬಗ್ಗೆ ಮಾಹಿತಿಗಳನ್ನಿತ್ತರು. ಧರ್ಮಕರ್ಮ ವಿಭಾಗದ ವೇ ಮೂ ಕೇಶವ ಪ್ರಸಾದ ಕೂಟೇಲು ಅವರು ವೈದಿಕ ವಿಭಾಗದ ಕುರಿತು ಸಮಗ್ರ ಮಾಹಿತಿಗಳನ್ನಿತ್ತರು. ಮಹಾಮಂಡಲ ಜೀವಿಕಾ ವಿಭಾಗ ಪ್ರಮುಖರಾದ ಬಾಲಸುಬ್ರಹ್ಮಣ್ಯ ಭಟ್ ಸಮಾಜದ ಸರ್ವತೋನ್ಮುಖವಾದ ಅಭಿವೃದ್ಧಿಗಾಗಿ ಶ್ರೀ ಸಂಸ್ಥಾನದವರ ಮಾರ್ಗದರ್ಶನದಲ್ಲಿ ಶ್ರೀ ಮಠದಿಂದ ಜರಗುತ್ತಾ ಇರುವ ಕಾರ್ಯಯೋಜನೆಗಳ ಸಮಗ್ರ ಮಾಹಿತಿಯನ್ನು ನೀಡಿ ದಿಶಾದರ್ಶಿ ವಿಭಾಗದ ಮೂಲಕ ಉದ್ಯೋಗ ಮಾಹಿತಿ, ವಿದ್ಯಾರ್ಥಿಗಳಿಗೆ ಲಭಿಸಿದ ಸೂಕ್ತವಾದ ಔದ್ಯೋಗಿಕ ಪ್ರಯೋಜನಗಳು, ಉದ್ಯೋಗ ಲಭ್ಯತೆ ಇವುಗಳ ಕುರಿತು ಸಭೆಗೆ ತಿಳಿಸಿದರು.
ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ :
ಗೋಕರ್ಣದ ಅಶೋಕೆಯಲ್ಲಿ ಸ್ಧಾಪನೆಗೊಳ್ಳಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಮಹತ್ಕಾರ್ಯಕ್ಕೆ ಸರ್ವರ ಸರ್ವವಿಧ ಸಹಕಾರ ಅಗತ್ಯ ಎಂಬುದಾಗಿ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಸಮಗ್ರ ಮಾಹಿತಿಗಳನ್ನು ನೀಡಿ ಮಾತನಾಡಿದರು.
ಮುಳ್ಳೇರಿಯ ಮಂಡಲಾಧ್ಯಕ್ಷ ಪೆÇ್ರ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗುರಿಕ್ಕಾರರ ಸಮಾವೇಶಕ್ಕೆ ಶ್ರೀ ಸಂಸ್ಥಾನದವರು ನೀಡಿರುವ ಸಂದೇಶವನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ಮರಣಿಕೆಯನ್ನಿತ್ತು ಅಭಿನಂದಿಸಲಾಯಿತು. ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ, ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ಸೇವಾ ವಿಭಾಗ ಪ್ರಧಾನ ಬಾಲಸುಬ್ರಹಣ್ಯ ಭಟ್ ಪರಪ್ಪೆ, ವಲಯ ಪ್ರಧಾನರು ಗುರಿಕ್ಕಾರರು ಉಪಸ್ಥಿತರಿದ್ದರು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ಕೊನೆಯಲ್ಲಿ ರಾಮತಾರಕ ಮಂತ್ರ, ಶಾಂತಿ ಮಂತ್ರ ಪಠಿಸಿ ಧ್ವಜಾವರೋಹಣಗೈಯಲಾಯಿತು.


