ಮಂಜೇಶ್ವರ: ಜ್ಞಾನಪೀಠ ಪುರಸ್ಕøತರಾದ ದಿ. ಗಿರೀಶ ಕಾರ್ನಾಡ್ ಅವರು ಪುರಾಣ ಮತ್ತು ಇತಿಹಾಸದ ಪಾತ್ರಗಳನ್ನು ತಮ್ಮ ನಾಟಕಗಳ ಮೂಲಕ ಸಮಕಾಲೀನಗೊಳಿಸಿದ್ದಾರೆ. ಅವರ ನಾಟಕಗಳಲ್ಲಿ ಬರುವ ವಿವಿಧ ಪಾತ್ರಗಳ ವೈವಿಧ್ಯ ಮನೋಧರ್ಮಕ್ಕೆ ಯಾರು ಪ್ರೇರಣೆ ಎನ್ನುವುದನ್ನು ಅವರ ಆತ್ಮಕಥೆಯಾದ "ಆಡಾಡತ ಆಯುಷ್ಯ" ಕೃತಿ ತಿಳಿಸುತ್ತದೆ ಎಂದು ಚಿಂತಕ ಡಾ. ಉದಯ ಮಂಜುನಾಥ್ ಅವರು ವಿಶ್ಲೇಶಿಸಿದರು.
ಪ್ರಾಧ್ಯಾಪಕ ಟಿ.ಎ.ಎನ್ ಖಂಡಿಗೆಯವರ ಸ್ವಗೃಹ ತಲಪಾಡಿ ಬಳಿಯ ಕಣ್ವತೀರ್ಥದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಈ ಹೊತ್ತಿಗೆ ಈ ಹೊತ್ತಗೆ ಸರಣಿ ಕಾರ್ಯಕ್ರಮದ ಹನ್ನೊಂದನೆಯ ಸಮಾರಂಭದಲ್ಲಿ ಡಾ.ಗಿರೀಶ ಕಾರ್ನಾಡ್ ಅವರ ಆತ್ಮಕಥೆ ಆಡಾಡತ ಆಯುಷ್ಯ ಕೃತಿ ಕುರಿತು ಮಾತನಾಡಿದರು.
ನವ್ಯದ ಮನೋಧರ್ಮವಾದ ಸತ್ಯಪ್ರಜ್ಞೆ, ಸಾಮುದಾಯಿಕ ಪ್ರಜ್ಞೆ ಮತ್ತು ಸಮಷ್ಠಿ ಪ್ರಜ್ಞೆಯನ್ನು ಅವರು ಬದುಕಿನಲ್ಲಿ ಪಾಲಿಸಿಕೊಂಡಿದ್ದರು. ತಮ್ಮ ಹುಟ್ಟೂರಾದ ಶಿರಸಿಯಲ್ಲಿ ಬಾಲ್ಯದಿಂದಲೂ ಆಸ್ವಾದಿಸಲು ಸಾಧ್ಯವಾದ ಯಕ್ಷಗಾನ, ನಾಟಕ, ಹರಿಕಥೆಗಳೇ ಮೊದಲಾದವುಗಳು ಸೃಜನಶೀಲತೆಯ ಬೆಳವಣಿಗೆಗೆ ಪೂರಕವಾಯಿತು. ವ್ಯಕ್ತಿತ್ವ ರೂಪಣೆಯಲ್ಲಿ ಮಾತೃಶ್ರೀಯವರ ಪಾತ್ರಹಿರಿದಾಗಿತ್ತು ಎಂದು ತಿಳಿಸಿದ ಅವರು, ಜನಪದ,ಇತಿಹಾಸ,ಪುರಾಣಗಳಿಗೆ ಕಾರ್ನಾಡರು ಹೇಗೆ ಕೊಂಡಿಯಾಗಿದ್ದರೋ, ಜೊತೆಗೆ ಪೂರ್ವ-ಪಶ್ಚಿಮಗಳ ಸಂಸ್ಕøತಿಗಳಿಗೂ ಕೊಂಡಿಯಾಗಿದ್ದರು ಎಂದು ತಿಳಿಸಿದರು. ಶಂಭಾ ಜೋಶಿ, ಬೇಂದ್ರೆ, ಕುರ್ತಕೋಟಿ, ಬಿ.ವಿ.ಕಾರಂತರಂತವರ ಒಡನಾಡಿಯಾಗಿದ್ದ ಕಾರ್ನಾಡರು ಹಿಂದಿಯ ಖ್ಯಾತ ಸಿನಿಮಾ ನಟರಾದ ಓಂಪುರಿ, ಅಮರೇಶ ಪುರಿ ಮೊದಲಾದವರನ್ನು ರಂಗಭೂಮಿಗೆ ಮೊದಲು ಪರಿಚಯಿಸಲು ಕಾರಣಕರ್ತರಾದ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವದವರು ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಟಿ.ಎ.ಎನ್ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ನಾಡರಂತಹ ಸೃಜನಶೀಲತೆ ಮತ್ತು ಸತ್ವಯುತ ಬರಹಗಳು ನಿರಂತರವಾಗಿ ಹುಟ್ಟಬೇಕು. ಜೊತೆಗೆ ಅವುಗಳನ್ನು ಓದುವ, ಬದುಕಿಗೆ ಪ್ರೇರಣೆಯಾಗುವ ಪಥದತ್ತ ಯುವ ಸಮೂಹ ಅಡಿಯಿಡಬೇಕು ಎಂದು ತಿಳಿಸಿ ಸ್ವಾಗತಿಸಿದರು. ಶಿಕ್ಷಕಿ,ಕವಯಿತ್ರಿ ಕವಿತಾ ಕೂಡ್ಲು ವಂದಿಸಿದರು. ಉಪನ್ಯಾಸದ ಬಳಿಕ ಸಾಹಿತ್ಯಾಸಕ್ತರಿಂದ ವಿಸ್ಕøತ ಸಂವಾದ ನಡೆಯಿತು.


