ಕಾಸರಗೋಡು: ದೇವ ನಿರ್ಮಿತವೆಂದು ತಲೆತಲಾಂತರಗಳಿಂದ ನಾವು ನಂಬಿರುವ ಭೂಮಿಯಲ್ಲಿ ಸಂವಹನ ಮತ್ತು ಅತಿ ಹೆಚ್ಚಿನ ಬುದ್ದಿ ಸಾಮಥ್ರ್ಯವಿರುವ ಮನುಷ್ಯನು ಬದುಕಿದಂತೆ ಇತರ ಜೀವಜಾಲಗಳಿಗೂ ಬದುಕುವ ಸಂಪೂರ್ಣ ಸ್ವಾತಂತ್ರ್ಯ ಇದೆ. ಆದರೂ ಇಂದದು ಮಾನವನ ತೀವ್ರ ಸ್ವಾರ್ಥ ಲಾಲಸೆಗಳಿಂದ ಇತರ ಜೀವಜಾಲಗಳಿಗೆ ಮುಳುವಾಗುತ್ತಿರುವುದೂ ಆತಂಕಕಾರಿ.
ಈ ನಿಟ್ಟಿನಲ್ಲಿ ಕಾಡು ಪ್ರಾಣಿಗಳಿಗ ಜೀವ ಹಾನಿಗೆ ಕಾರಣವಾಗುವ ಯಾವುದೇ ಆಹಾರ=ಪದಾರ್ಥ, ಬೇಕರಿ ತಿನಸು, ಉಪ್ಪು, ಪ್ಲಾಸ್ಟಿಕ್ ಮೊದಲಾದವುಗಳನ್ನು ಉಪೇಕ್ಷಿಸಿ, ಪ್ರಾಣಿಗಳ ಪ್ರಜನನ ಸಾಮಥ್ರ್ಯವನ್ನು ಸಂರಕ್ಷಿಸುವ ಎಂಬ ಚಿಂತನೆಯೊಂದಿಗೆ ತೃಕ್ಕರಿಪುರ ಇಡಯಿಲೆಕ್ಕಾಟ್ ಕಾವ್ ಎಂಬಲ್ಲಿ ಬುಧವಾರ ನೂರಾರು ವಾನರ ತಂಡಕ್ಕೆ ಸಾಂಪ್ರದಾಯಿಕ ಔತಣ ಕೂಟ ವಿಶಿಷ್ಟವಾಗಿ ನಡೆಯಿತು.
ಇಡಯಿಲಕ್ಕಾಟ್ ನವೋದಯ ಗ್ರಂಥಾಲಯದ ಬಾಲವೇದಿಕೆಯ ಆಶ್ರಯದಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮವೊಂದು ಕೇರಳದ ನಾಡಹಬ್ಬ ಓಣಂ ಭಾಗವಾಗಿ ರೂಪುನೀಡಲಾಗಿತ್ತು. ಅನ್ನ, ಬಾಳೆಹಣ್ಣು, ಕ್ಯಾರೆಟ್, ಬೀಟ್ರೋಟ್, ಸೌತೆ, ಕುಂಬಳಕಾಯಿ, ಸಿಹಿಕುಂಬಳಕಾಯಿ, ಆಪಲ್, ಪಪ್ಪಾಯಿ ಮೊದಲಾದ ಹಲವು ಹತ್ತು ವೈವಿಧ್ಯ ತಿನಸುಗಳನ್ನು ವಾನರ ಪಡೆಯ ಭೋಜನಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ಭೋಜನ ಬೆಂಚುಗಳನ್ನು ಸಾಲಾಗಿರಿಸಿ, ಬಾಳೆ ಎಲೆ ಹರಡಿ ವಾನರ ಭೋಜನ ವ್ಯವಸ್ಥೆಗೊಳಿಸಲಾಗಿತ್ತು. ಸುಮಧುರ ಸಂಗೀತ ವಾದ್ಯಗಳ ವಿಶಿಷ್ಟ ಅನುಭೂತಿಯ ವಾತಾವರಣದಲ್ಲಿ ಸೇರಿದ ಸ್ಥಳೀಯ ಜನತೆ ಇಂತಹ ವ್ಯವಸ್ಥೆಯ ಮೂಲಕ ಮಾದರಿಯಾದರು. ಬಾಲವೇದಿಕೆಯ ಪುಟಾಣಿಗಳು, ಗ್ರಂಥಾಲಯದ ಹಿರಿಯ ಸದಸ್ಯರು ಸ್ಥಳೀಯರೂ ವಾನರ ಭೋಜನದೊಂದಿಗೆ ತಾವೂ ಆಹಾರ ಸೇವಿಸಿದರು. ಪ್ರಾಣಿಗಳಿಗೆ ವಿಷಕರವಾದ ಉಪ್ಪು ಸಹಿತ ರಾಸಾಯನಿಕ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಇಂತಹ ವಿಶಿಷ್ಟ ಕಾರ್ಯಕ್ರಮ ವೀಕ್ಷಣೆಗೆ ದೂರದೂರುಗಳಿಂದಲೂ ಜನರು ಆಗಮಿಸಿದ್ದರು. ಒಟ್ಟಿನಲ್ಲಿ ಪ್ರಾಣಿ ಸಂರಕ್ಷಣೆಯ ಜಾಗೃತಿ ಮೂಡಿಸಲು ಉದ್ದೇಶಿಸಲಾದ ಇಂತಹ ಕಾರ್ಯಕ್ರಮ ಇನ್ನಷ್ಟು ವ್ಯಾಪಿಸಬೇಕೆಂಬುದು ಸಂಘಟಕರ ಅಂಬೋಣ.


