ತಿರುವನಂತಪುರ: ಕೋವಿಡ್ ಪರೀಕ್ಷಾ ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳ ಮೂರನೇ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ, ಕೇರಳ ಲಸಿಕೆ ಪರೀಕ್ಷೆಯ ಭಾಗವಾಗಲಿದೆ. ಹೈದರಾಬಾದ್ ಮೂಲದ ಲಸಿಕೆ ತಯಾರಕರ ಮನವಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಅರ್ಜಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದ್ದು, ರಾಜ್ಯದಲ್ಲಿ ಲಸಿಕೆ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜನ್ ಎನ್ ಖೋಬ್ರಗಡೆ ತಿಳಿಸಿದ್ದಾರೆ.
ಮೇಡ್ ಇನ್ ಇಂಡಿಯಾ' ಲಸಿಕೆ ಬರುತ್ತಿದೆ:
ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ಲಸಿಕೆಯಾದ ಕೊವಾಸಿನ್ ತಯಾರಕ ಭಾರತ್ ಬಯೋಟೆಕ್, ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯೊಂದಿಗೆ ರಾಜ್ಯಕ್ಕೆ ಬರುತ್ತಿದೆ. ಲಸಿಕೆಯನ್ನು ಐಸಿಎಂಆರ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ. "ರಾಜ್ಯದಲ್ಲಿ ಲಸಿಕೆ ಪರೀಕ್ಷಿಸಲು ಭಾರತ್ ಬಯೋಟೆಕ್ ನಮ್ಮನ್ನು ಸಂಪರ್ಕಿಸಿದೆ. ನಾವು ಅನುಮತಿ ನೀಡಿದ್ದೇವೆ" ಎಂದು ರಾಜನ್ ಖೋಬ್ರಗಡೆ ಹೇಳಿರುವರು. ವೈಜ್ಞಾನಿಕ ಪ್ರಯೋಗದ ಭಾಗವಾಗಲು ರಾಜ್ಯ ಸರ್ಕಾರ ಬದ್ಧವಾಗಿದೆ ಮತ್ತು ಈ ಸಂದರ್ಭದಲ್ಲಿಯೇ ಲಸಿಕೆ ಅಭಿವೃದ್ಧಿಪಡಿಸುವ ಕಂಪನಿಗಳು ಲಸಿಕೆಯನ್ನು ಪರೀಕ್ಷೆಗೆ ಸಂಪರ್ಕಿಸಿವೆ ಎಂದು ಅವರು ತಿಳಿಸಿರುವರು.
ಕೋವಿಡ್ ಗುಣಮುಖ ಮತ್ತು ರೋಗ ಮುಕ್ತ:
ಇದೇ ವೇಳೆ ರಾಜ್ಯದಲ್ಲಿ ಲಸಿಕೆಯನ್ನು ಪರೀಕ್ಷಿಸಬೇಕೆ ಎಂದು ಕಂಪನಿಗಳು ನಿರ್ಧರಿಸಬೇಕು ಮತ್ತು ಅದಕ್ಕಾಗಿಯೇ ಅವರು ಅನುಮತಿ ಕೋರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. "ಅವರಿಗೆ ಪರೀಕ್ಷಿಸಲು ಜನರು ಬೇಕಾಗಿದ್ದಾರೆ. ಅವರಿಗೆ ಸೋಂಕಿನಿಂದ ಬಳಲುತ್ತಿರುವ ಜನರು ಹಾಗೂ ಕೋವಿಡ್ ಸೋಂಕಿಗೆ ಒಳಗಾದವರು ಬೇಕು. ಅವರು ತಮ್ಮ ವಿಧಾನಕ್ಕೆ ಅನುಗುಣವಾಗಿ ಸೂಚನೆಗಳನ್ನು ನೀಡುತ್ತಾರೆ ಮತ್ತು ನಾವು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ. ಅವರು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ಭಯಪಡಬೇಕಾಗಿಲ್ಲ. ಅದಕ್ಕಾಗಿಯೇ ನಾವು ಅರ್ಜಿಗೆ ತಕ್ಷಣ ಪ್ರತಿಕ್ರಿಯಿಸಿದ್ದೇವೆ." ಎಂದು ಅವರು ಹೇಳಿದರು. ಆದರೆ, ರಾಜ್ಯದಲ್ಲಿ ಲಸಿಕೆ ಪರೀಕ್ಷೆ ನಡೆಸಲಾಗುವುದೇ ಎಂದು ಕಂಪನಿಯು ಇನ್ನೂ ರಾಜ್ಯ ಸರ್ಕಾರಕ್ಕೆ ತಿಳಿಸಿಲ್ಲ ಎಂದು ಅವರು ಹೇಳಿದರು.
ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಈಗ ನಡೆಯುತ್ತಿವೆ:
ಭಾರತದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಯ ಕೊವಾಕ್ಸ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಡಿಜಿಸಿಐ ಮಂಗಳವಾರ ಅನುಮೋದನೆ ನೀಡಿದೆ. ಪುಣೆ ಮೂಲದ ಭಾರತ್ ಬಯೋಟೆಕ್ ಲಸಿಕೆಯನ್ನು ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಯೋಗದ ಮೊದಲ ಎರಡು ಹಂತಗಳ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದ ನಂತರ ತಜ್ಞರ ಸಮಿತಿಯು ಯೋಜನೆಯನ್ನು ಅನುಮೋದಿಸಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ಜನರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?:
ಈ ಹಿಂದೆ ಮಾಧ್ಯಮಗಳು ದೇಶದ 12 ನಗರಗಳಲ್ಲಿ ಕೋವಾಕ್ಸಿನ್ ಪ್ರಾಯೋಗಿಕ ಪರೀಕ್ಷೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಪ್ರಕಟಿಸಿದ್ದವು. ಸಂಬಂಧಿತ ಸಹಾಯವಾಣಿ ಸಂಖ್ಯೆಗಳನ್ನು ಅಥವಾ ವೆಬ್ಸೈಟ್ ಅನ್ನು ಸಂಪರ್ಕಿಸುವ ಮೂಲಕ ನೋಂದಾಯಿಸಿಕೊಳ್ಳುವವರನ್ನು ಪರೀಕ್ಷೆಗೆ ಪರಿಗಣಿಸಲಾಗುತ್ತದೆ. ಕೆಲವು ಮಾನದಂಡಗಳನ್ನು ಪೂರೈಸುವವರನ್ನು ಮಾತ್ರ ಸ್ವಯಂಸೇವಕರಾಗಿ ಆಯ್ಕೆ ಮಾಡಲಾಗುತ್ತದೆ. ಅವರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ನಂತರ ಸ್ವಯಂಸೇವಕರ ಆರೋಗ್ಯವನ್ನು ವಾರಗಳವರೆಗೆ ನಿರೀಕ್ಷಣೆ ಮಾಡಲಾಗುತ್ತದೆ. ಆದರೆ, ಲಸಿಕೆ ಪರೀಕ್ಷಾ ಕೇಂದ್ರಗಳನ್ನು ಗುರುತಿಸದ ಕಾರಣ ಕೇರಳದಲ್ಲಿ ಔಷಧ ಪರೀಕ್ಷೆಗೆ ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿಲ್ಲ.
ಮತ್ತೆ ಪ್ರಯೋಗದೊಂದಿಗೆ ಸೀರಮ್ ಸಂಸ್ಥೆ:
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆ ಕೋವಿಶೀಲ್ಡ್ ಸಹ ಭಾರತದಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಗಾಗುತ್ತಿದೆ. ಲಸಿಕೆಯನ್ನು ಪುಣೆ ಮೂಲದ ಸೀರಮ್ ಸಂಸ್ಥೆ ತಯಾರಿಸಿದೆ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜನ್ ಖೋಬ್ರಗಡೆ ಮಾತನಾಡಿ, ಈ ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲೂ ಭಾಗವಹಿಸಲು ಕೇರಳ ಸರ್ಕಾರ ಆಸಕ್ತಿ ಹೊಂದಿದೆ ಎಂದಿರುವರು.