ನವದೆಹಲಿ :ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಆರ್ಥಿಕ ಉದಾರೀಕರಣ ಜಾರಿಯಾದ ನಂತರ ವಿದ್ಯಾರ್ಥಿ ಸಮುದಾಯದಿಂದ ಯಾವುದೇ ದೊಡ್ಡ ವಿದ್ಯಾರ್ಥಿ ನಾಯಕ ಹೊರಹೊಮ್ಮಿಲ್ಲ, ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವಿಕೆಯ ಕಾರ್ಯವನ್ನು ಪ್ರತಿಕೂಲವಾಗಿ ಬಾಧಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ನ್ಯಾಷನಲ್ ಲಾ ಯುನಿವರ್ಸಿಟಿ ಇದರ ಘಟಿಕೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು. "ಯಾವುದೇ ದೊಡ್ಡ ವಿದ್ಯಾರ್ಥಿ ನಾಯಕ ಹೊರಹೊಮ್ಮದೇ ಇರುವುದು ವಿದ್ಯಾರ್ಥಿಗಳ ಸಾಮಾಜಿಕ ಉದ್ದೇಶಗಳಲ್ಲಿ ಭಾಗವಹಿಸುವಿಕೆ ಕಡಿಮೆಯಾಗಿರುವುದನ್ನು ತೋರಿಸುತ್ತದೆ" ಎಂದು ಸಿಜೆಐ ಹೇಳಿದರು.
"ನಿಮ್ಮಂತಹ ಪ್ರಗತಿಪರ ಮನೋಭಾವದ, ನೇರ ನಡೆನುಡಿಯ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸಾರ್ವಜನಿಕ ಜೀವನ ಪ್ರವೇಶಿಸಬೇಕು, ನೀವು ನಾಯಕರಾಗಿ ಹೊರಹೊಮ್ಮಬೇಕು. ರಾಜಕೀಯ ಜಾಗೃತಿ ಮತ್ತು ಉತ್ತಮ ಚರ್ಚೆಗಳು ನಮ್ಮ ಸಂವಿಧಾನದ ಆಶಯದಂತೆ ದೇಶವನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯುವುದು. ಸ್ಪಂದನಾತ್ಮಕ ಯುವಜನತೆ ದೇಶದ ಪ್ರಜಾಪ್ರಭುತ್ವದ ಬಲವರ್ಧನೆಗೆ ಅತಿಮುಖ್ಯ" ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.