'ಬೈಸಾಖಿ' ಸಂಭ್ರಮದಲ್ಲಿದ್ದ ಸಾವಿರಾರು ಭಾರತೀಯರ ಮೇಲೆ 1919ರ ಏಪ್ರಿಲ್ 13ರ ಸಂಜೆ ಡಯರ್ ಎಂಬ ಬ್ರಿಟಿಷ್ ಸೇನಾಧಿಕಾರಿ ಏಕಾಏಕಿ ಗುಂಡಿನ ಮಳೆಗರೆದ. ನಾಲ್ಕು ಸುತ್ತಲೂ ಗೋಡೆಗಳಿಂದಲೇ ತುಂಬಿದ ಜಾಗದಲ್ಲಿ ಸಾವಿರಾರು ಮಂದಿ ಅಸುನೀಗಿದರು.
ಭಾರತೀಯರನ್ನು ದಾಸ್ಯದಲ್ಲಿರಿಸಿದ್ದ ಬ್ರಿಟಿಷರು ಪೊಲೀಸ್ ಕಾಯ್ದೆ ಹೆಸರಿನಲ್ಲಿ ಹೊಸದೊಂದು ಮಿಲಿಟರಿ ಕಾನೂನನ್ನು ಜಾರಿಗೆ ತಂದರು. 1860ರ ಮೊದಲು ಭಾರತದಲ್ಲಿ ಬ್ರಿಟಿಷರ ಪೊಲೀಸ್ ಇರಲಿಲ್ಲ, ಇದ್ದದ್ದು ಅವರ ಸೈನ್ಯವಷ್ಟೇ! ಭಾರತೀಯರನ್ನು ತಮ್ಮ ಕಪಿಮುಷ್ಟಿಯಲ್ಲಿರಿಸಿಕೊಳ್ಳಲು ಬ್ರಿಟಿಷರು ಅನೇಕ ನಿಬಂಧನೆಗಳಿಂದ ಕೂಡಿದ ಬಲವಾದ ಕಾನೂನನ್ನು ಅನುಷ್ಠಾನಗೊಳಿಸಿದರು. ಇದರ ಹೆಸರೇ ಭಾರತೀಯ ಪೊಲೀಸ್ ಕಾಯಿದೆ ಅಥವಾ 'ಇಂಡಿಯನ್ ಪೊಲೀಸ್ ಆಕ್ಟ್'. ವಾಸ್ತವವಾಗಿ ಈ ಕಾನೂನಿಗೆ ಭಾರತೀಯ ಕಾನೂನು ಎಂದು ಹೆಸರಿದ್ದರೂ ಇದು ಸ್ಪಷ್ಟವಾಗಿ ಬ್ರಿಟಿಷರ ಅನುಕೂಲಕ್ಕಾಗಿಯೇ ರೂಪಿಸಲ್ಪಟ್ಟ ಕಾನೂನಾಗಿತ್ತು. ಭಾರತೀಯರನ್ನೂ ಅವರ ಹೋರಾಟವನ್ನೂ ಮೆಟ್ಟಿ ನಿಲ್ಲಲು ಅನುಕೂಲಕರವಾಗಿ ಭಾರತೀಯರನ್ನು ಹೊಡೆದು ಬಡಿಯುವುದಷ್ಟೇ ಅಲ್ಲದೆ ಕೊಲ್ಲುವುದೂ ಕಾನೂನೇ ಆಗಿತ್ತು, ಅದೇ 'ರೈಟ್ ಟು ಅಫೆನ್ಸ್'. ಹೀಗೆ ಬ್ರಿಟಿಷ್ ಅಧಿಕಾರಿಗಳು ಏನೇ ಮಾಡಿದರೂ ಅದು ಶಿಕ್ಷಾರ್ಹವಲ್ಲವೆಂದು ಪರಿಗಣಿಸಲಾಗಿತ್ತು. ಭಾರತೀಯರು ತಮ್ಮನ್ನು ಎಂಥ ಪರಿಸ್ಥಿತಿಯಲ್ಲೂ ರಕ್ಷಿಸಿಕೊಳ್ಳಲಾಗದಂಥ ರೀತಿಯಲ್ಲಿ ಮೊಕದ್ದಮೆ ಹೊರಿಸುವ ಕಾನೂನು ಅದಾಗಿತ್ತು. ಈ ಕಾನೂನನ್ನೇ ಬಳಸಿ ಭಾರತೀಯ ಕ್ರಾಂತಿಕಾರಿಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿತ್ತು.
ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತವನ್ನಾಗಿಸಬೇಕೆಂಬ ಕನಸು ಕಂಡಿದ್ದ ಕ್ರಾಂತಿಕಾರಿ ಹೋರಾಟಗಾರರಿಗೆ ಇದು ಅನ್ಯಾಯವೆಂದು ಅರಿವಾಗಿ ಎಲ್ಲೆಡೆ ಪ್ರತಿಭಟನೆಗಳು ನಡೆದವು. ಹೀಗೆ ಜನರು ದಂಗೆ ಏಳುವಂತಾದದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಪ್ರತಿಯೊಂದು ಸ್ತರದಲ್ಲೂ ಭರಿಸಲಾಗದ ತೆರಿಗೆ ಹೇರಿದ್ದರಿಂದಲೂ ಜನರ ಬದುಕೇ ದುಸ್ತರವೆನಿಸತೊಡಗಿತ್ತು. ಇಂಥ ಹೊತ್ತಲ್ಲೇ ಭಾರತೀಯರನ್ನು ನಿಯಂತ್ರಿಸಲು ಬ್ರಿಟಿಷರು ರೌಲೆಟ್ ಆಕ್ಟ್, 1919 ಜಾರಿಗೆ ತಂದರು.
ಸ್ಮಾರಕ ನಿರ್ಮಾಣ: ಜಲಿಯನ್ವಾಲಾ ಬಾಗ್ನಲ್ಲಿ ಅಪಾರ ಸಂಖ್ಯೆಯಲ್ಲಿ ಸಾವುನೋವಿಗೀಡಾದ ಅಮಾಯಕರ ಕುರುಹಾಗಿ ಸ್ಮಾರಕವನ್ನು ನಿರ್ವಿುಸಲಾಯಿತು. ಅಲ್ಲಿನ ಕಟ್ಟಡಗಳ ಗೋಡೆ ಗೋಡೆಗಳಲ್ಲಿ ನಡೆದ ಗುಂಡಿನ ದಾಳಿಯ ಗುರುತುಗಳಿನ್ನೂ ಹಾಗೆಯೇ ಇವೆ.
ಡಯರ್ ಹತ್ಯೆ: ಇತಿಹಾಸದ ಈ ದುರಂತವನ್ನು ಸ್ವಾಭಿಮಾನಿ ಭಾರತೀಯರು ಮರೆಯಲಿಲ್ಲ. ಚಿಕ್ಕ ವಯಸ್ಸಿನಲ್ಲಿ ನಡೆದ ದುರಂತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ, ಅಂದು 20 ವರ್ಷದ ಯುವಕನಾಗಿದ್ದ ಉಧಮ್ ಸಿಂಗ್ನ ಮನಸಲ್ಲಿದ್ದ ರೋಷದ ಸೇಡಿನ ಕಿಡಿ ಬೆಂಕಿಯಾಯ್ತು. 1940ರ ಮಾರ್ಚ್ 13ರಂದು ಲಂಡನ್ನಿನ ಕಾಕ್ಸ್ಟನ್ ಹಾಲ್ನಲ್ಲಿ ನಡೆಯುತ್ತಿದ್ದ 'ಈಸ್ಟ್ ಇಂಡಿಯಾ ಅಸೋಸಿಯೇಷನ್' ಸಮ್ಮೇಳನ ಮುಗಿದ ನಂತರ ಉಧಮ್ ಸಿಂಗ್ ಅಲ್ಲಿದ್ದ ಡಯರ್ನನ್ನು ತನ್ನಲ್ಲಿದ್ದ ರಿವಾಲ್ವರ್ನಿಂದ ಎರಡು ಬಾರಿ ಗುಂಡು ಹಾರಿಸಿ ಸ್ಥಳದಲ್ಲೇ ಕೊಂದ. 1940ರ ಜುಲೈ 31ರಂದು ಪೆಂಟಾನ್ವಿಲ್ಲೆ ಕಾರಾಗೃಹದಲ್ಲಿ ಶಹೀದ್ ಉಧಮ್ ಸಿಂಗ್ನನ್ನು ಗಲ್ಲಿಗೇರಿಸಲಾಯಿತು.
ಏನಾಯಿತು ಆ ದಿನ?: ರೌಲೆಟ್ ಆಕ್ಟನ್ನು ವಿರೋಧಿಸಲು ಅಮೃತಸರದ ಜಲಿಯನ್ವಾಲಾ ಬಾಗ್ನಲ್ಲಿ ಶಾಂತರೀತಿಯಲ್ಲಿ ಒಂದು ಸಭೆ ಸೇರಿತ್ತು. 1919ರ ಏಪ್ರಿಲ್ 13ರ ಸಂಜೆ 4.30ರ ಸಮಯದಲ್ಲಿ ಆರಂಭವಾದ ಸಭೆಯಲ್ಲಿ 15ರಿಂದ 20 ಸಾವಿರದಷ್ಟು ಜನರು ಯಾವುದೇ ಗೊಂದಲವಿಲ್ಲದೆ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಯೋಚಿಸುತ್ತಿದ್ದರು. ಆ ಸಂಜೆ ಅವರೆಲ್ಲ 'ಬೈಸಾಖಿ' ಹಬ್ಬದ ಸಂಭ್ರಮದಲ್ಲಿದ್ದರು. ಇಂತಹದೊಂದು ಸಭೆ ನಡೆಯುತ್ತಿದ್ದ ಸೂಚನೆ ಪಡೆದು ಅಲ್ಲಿಗೆ ಬಂದಿದ್ದ ಬ್ರಿಗೇಡಿಯರ್ ರೆಜಿನಾಲ್ಡ್ ಮೈಕೆಲ್ ಓ ಡಯರ್. ಆತ ಯಾವುದೇ ಮುನ್ಸೂಚನೆ ನೀಡದೆ ತನ್ನೊಂದಿಗಿದ್ದ 65 ಗೂರ್ಖಾ ಮತ್ತು 25 ಬಲೂಚಿ ಸೈನಿಕರಿಗೆ ಅಲ್ಲಿದ್ದ ಎಲ್ಲರ ಮೇಲೂ ಒಂದೇ ಸಮನೆ ಸತತವಾಗಿ ಗುಂಡಿನ ಮಳೆ ಸುರಿಸುವಂತೆ ಆಜ್ಞೆ ಮಾಡಿದ. ಮಕ್ಕಳು, ಮಹಿಳೆಯರೆಂಬ ಭೇದವಿಲ್ಲದೆ ಆ ದಾಳಿಯಲ್ಲಿ ಸಾವಿರ ಸಂಖ್ಯೆಯಲ್ಲಿ ಸಾವುನೋವುಗಳಾದವು. ಆ ಸ್ಥಳದಲ್ಲಿದ್ದ ಎಲ್ಲ ಪ್ರವೇಶದ್ವಾರಗಳನ್ನೂ ಯಾರೂ ಹೊರ ಹೋಗದಂತೆ ಭದ್ರಪಡಿಸಲಾಗಿತ್ತು. ತಪ್ಪಿಸಿಕೊಳ್ಳಲಾಗದೆ ಅಲ್ಲಿದ್ದ ಗೋಡೆ ಬದಿಯ ಬಾವಿಯೊಂದಕ್ಕೆ ಅನೇಕರು ಧುಮುಕಿದರು. ಘಟನೆಯ ನಂತರದ ದಿನಗಳಲ್ಲಿ ಆ ಬಾವಿಯಿಂದ ಸುಮಾರು 120 ಶವಗಳನ್ನು ಹೊರತೆಗೆಯಲಾಯಿತು. ಕಾಲ್ತುಳಿತಕ್ಕೊಳಗಾಗಿ ಬಿದ್ದ ಜಾಗದಿಂದ ಏಳಲೂ ಆಗದೆ ಅನೇಕರು ಪ್ರಾಣ ಕಳೆದುಕೊಂಡರು. ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ವಿರೋಧಿಸಿ ರವೀಂದ್ರನಾಥ್ ಟ್ಯಾಗೋರರು ತಮಗೆ ದೊರೆತಿದ್ದ 'ನೈಟ್ಹುಡ್' ಪದವಿಯನ್ನು ತಿರಸ್ಕರಿಸಿ ರಾಷ್ಟ್ರಭಕ್ತಿ ಮೆರೆದರು. ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ನಲ್ಲಿ ವಿನ್ಸ್ಟನ್ ರ್ಚಚಿಲ್ ಅವರೊಂದಿಗೆ 247 ಸಂಸದರು ದುರಹಂಕಾರಿ ಡಯರ್ನ ರಾಕ್ಷಸೀ ಕೃತ್ಯವನ್ನು ವಿರೋಧಿಸಿದರು.