ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲ ಸಭೆ ಚಂದ್ರಗಿರಿ ವಲಯದ ಇತ್ತೀಚೆಗೆ ಸಮರಸದಲ್ಲಿ ಜರಗಿತು. ಬೆಳಿಗ್ಗೆ 7.30ಕ್ಕೆ ಗಣಪತಿಹವನ ಮತ್ತು ಶಿವಪೂಜೆ ನೆರವೇರಿತು. ವಿವಿವಿಯ ನಿರ್ಮಿತಿ ಸಮಿತಿಯ ಕೆ.ಯನ್ ಭಟ್ ಮತ್ತು ವಲಯ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟರು ಧ್ವಜಾರೋಹಣಗೈದರು. ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಅಧ್ಯಕ್ಷತೆ ವಹಿಸಿದ್ದರು.
ಶ್ರೀಗಣೇಶ ಪಂಚರತ್ನ ಸ್ತೋತ್ರ ಪಠಿಸಲಾಯಿತು. ಗತಸಭೆ ವರದಿಯನ್ನು ಕಾರ್ಯದರ್ಶಿಗಳು ವಾಚಿಸಿದರು. ಚಾತುರ್ಮಾನ್ಯ ದೇಣಿಗೆ ಸಂಗ್ರಹ ಮತ್ತು ಆಗಸ್ಟ್ ತಿಂಗಳ ಒಟ್ಟು ಸಂಗ್ರಹದ ಮಾಹಿತಿಯನ್ನು ಸಭೆಯ ಮುಂದಿಡಲಾಯಿತು. ಮಂಡಲ ಗುರಿಕಾರ ಸತ್ಯನಾರಾಯಣ ಮೊಗ್ರ ಸಂಘಾಟನಾತ್ಮಕ ಮಾಹಿತಿಗಳನ್ನು ನೀಡಿದರು. ಶ್ರೀಮಠದ ಎಲ್ಲಾ ಯೋಜನೆಗಳಲ್ಲಿ ಪದಾಧಿಕಾರಿಗಳು, ಗುರಿಕ್ಕಾರರು ಪಾಲ್ಗೊಂಡಿರಬೇಕೆಂದರು.
ಮಂಡಲದ ನಿಕಟಪೂರ್ವ ಪದಾಧಿಕಾರಿಗಳು ನಿಯೋಜಿತ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿ ಯನ್ನು ಹಸ್ತಾಂತರಿಸಿದರು. ಮುಂದಿನ ದಿನಗಳಲ್ಲಿ ವಲಯದ ಎಲ್ಲಾ ಮನೆಗಳಿಗೆ ಅಭಿಯಾನ ನಡೆಸಿ ಶ್ರೀಮಠದ ಯೋಜನೆಗಳನ್ನು ತಿಳಿಸಿ ಸಾಕಾರಗೊಳ್ಳುವಂತೆ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಚಂದ್ರಗಿರಿ ವಲಯದ ವ್ಯಾಪ್ತಿಯ ಚಾಲಕ ವೃತ್ತಿಯೊಂದಿಗೆ ಬ್ರಹ್ಮವಾಹಕರಾಗಿ 35 ವರ್ಷಗಳಿಂದ ಸೇವೆಗೈಯ್ಯುತ್ತಿರುವ ಕೃಷ್ಣ ಭಟ್.ಕೆ.ಯಮ್ ಇವರನ್ನು ಗೌರವಿಸಲಾಯಿತು. ವಿಷಜಂತು ಕಡಿತಕ್ಕೆ ಪರಿಣಾಮಕಾರಿ ಚಿಕಿತ್ಸೆ ಮಾಡುವುದರಲ್ಲಿ 15 ವರ್ಷಗಳಿಂದ ಪ್ರಸಿದ್ದರಾಗಿರುವ ಶ್ಯಾಮಲಾ ಯಸ್. ಅವರನ್ನು ಗೌರವಿಸಲಾಯಿತು.
ಮಹಾಮಂಡಲ ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲಾ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಮಾಣಿಮಠದ ಕ್ರಿಯಾ ಸಮಿತಿಯ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಮಾಣಿಮಠದಲ್ಲಿ ಅ. 15 ರಿಂದ 24ರ ವರೆಗೆ ನಡೆಯುವ ನವರಾತ್ರಾ ನಮಸ್ಯಾ ನಮಸ್ಕಾ ಕಾರ್ಯಕ್ರಮದ ಆಮಂತ್ರಣ ನೀಡಿ ಮಾಹಿತಿಗಳನ್ನಿತ್ತರು. ಮುಂದಿನ 12 ತಿಂಗಳಿಗೆ ಮಂಡಲ ಸಭೆ ನಡೆಸಲು ವಲಯಗಳನ್ನು ಹಂಚಲಾಯಿತು. ವಲಯಗಳಿಗೆ ಮುಂದಿನ 6 ತಿಂಗಳಿಗೆ ಸಂಯೋಜಕರನ್ನು ನೇಮಿಸಲಾಯಿತು. ಶ್ರೀರಾಮತಾರಕ ಶಾಂತಿ ಮಂತ್ರ ಶಂಖನಾದ ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.

.jpg)
