ಪತ್ತನಂತಿಟ್ಟ: ಕೇರಳದಲ್ಲಿ ಈ ಬಾರಿ ಕಮಲ ಅರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಲೋಕಸಭೆಯಲ್ಲಿ ಎನ್ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಅನಿಲ್ ಆಂಟೋನಿ ಅವರ ಚುನಾವಣಾ ಪ್ರಚಾರಕ್ಕಾಗಿ ನರೇಂದ್ರ ಮೋದಿ ಅವರು ಇಂದು ಪತ್ತನಂತಿಟ್ಟಕ್ಕೆ ಬಂದಿದ್ದರು.
ಬಿಜೆಪಿ ಗೆದ್ದರೆ ಕೇರಳದಲ್ಲಿ ಅಭಿವೃದ್ಧಿ ಖಚಿತ ಎಂದ ಅವರು, ಕೇರಳದ ಭ್ರಷ್ಟ ಸರ್ಕಾರಗಳಿಂದಾಗಿ ಜನರು ತಮ್ಮ ಮನಸ್ಸನ್ನು ಬದಲಾಯಿಸಬೇಕೆಂದು ಪ್ರಧಾನಿ ಕೇಳಿಕೊಂಡರು. ಒಮ್ಮೆ ಕಾಂಗ್ರೆಸ್ ಮತ್ತು ಒಮ್ಮೆ ಎಲ್ ಡಿಎಫ್ ಎಂಬ ಮಾದರಿ ಬದಲಾಗಬೇಕು. ಆಗ ಮಾತ್ರ ಕೇರಳಕ್ಕೆ ನ್ಯಾಯ ಸಿಗುತ್ತದೆ. ಇಲ್ಲಿ ಎಡ ಮತ್ತು ಬಲ ರಂಗಗಳು ಪರಸ್ಪರ ಹೊಡೆದಾಡುತ್ತಿವೆ. ಆದರೆ ದೆಹಲಿಯಲ್ಲಿ ಅವರು ಸಂಬಂಧಿಕರು. ಒಬ್ಬರನ್ನೊಬ್ಬರು ಭ್ರಷ್ಟರೆಂದು ಕರೆದುಕೊಳ್ಳುವವರು ದೆಹಲಿಯಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ.
ಪೂಂಜಾರಿನಲ್ಲಿ ಧರ್ಮಗುರಿವಿನ ಮೇಲೆ ಹಲ್ಲೆ ನಡೆಸಿದ ಘಟನೆಯನ್ನೂ ಪ್ರಸ್ತಾಪಿಸಿದ ನರೇಂದ್ರ ಮೋದಿ, ಎಡ ಮತ್ತು ಕಾಂಗ್ರೆಸ್ ಹಳತಾದ ವಿಚಾರಗಳನ್ನು ಹೊಂದಿವೆ.ಎರಡೂ ಪಕ್ಷಗಳು ಪ್ರಗತಿಪರ ವಿಚಾರಗಳನ್ನು ಸಂಸತ್ತಿನಲ್ಲಿ ವಿರೋಧಿಸುತ್ತಿದ್ದವು. ತ್ರಿವಳಿ ತಲಾಖ್ ಅನ್ನು ವಿರೋಧಿಸಿದ್ದವು ಎಂದೂ ಮೋದಿ ಹೇಳಿದ್ದಾರೆ.
ಎಡಪಂಥೀಯರು ದಶಕಗಳ ಕಾಲ ಆಡಳಿತ ನಡೆಸಿದ ಬಂಗಾಳದಲ್ಲಿ ಅವರಿಗೆ ಇಂದು ಅಧಿಕಾರ ಲಭಿಸುತ್ತಿಲ್ಲ. ದಶಕಗಳ ಕಾಲ ತಾನು ಆಳಿದ ರಾಜ್ಯಗಳಿಂದ ಕಾಂಗ್ರೆಸ್ ಅನ್ನು ಹೊರಹಾಕಲಾಗಿದೆ. ಒಬಿಸಿ ಆಯೋಗವನ್ನು ವಿರೋಧಿಸಿದ್ದಕ್ಕಾಗಿ ಎಲ್ಡಿಎಫ್ ಮತ್ತು ಯುಡಿಎಫ್ ಅನ್ನು ಮೋದಿ ದೂಷಿಸಿದರು.
ಒಮ್ಮೆ ಅಧಿಕಾರ ಕೈತಪ್ಪಿದರೆ ಅವುಗಳು ಮರಳಿ ಅಧಿಕಾರಕ್ಕೆ ಬರುವುದಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಮತ್ತೆ ಬಂದಿಲ್ಲ. ಗುಜರಾತ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಧಿಕಾರ ಕಳೆದುಕೊಂಡರೂ ಮತ್ತೆ ಆಯ್ಕೆಯಾಗಿಲ್ಲ.
ಬಂಗಾಳ ಮತ್ತು ತ್ರಿಪುರಾ ಕಮ್ಯುನಿಸ್ಟ್ ಪಕ್ಷವನ್ನು ಹೊರಹಾಕಿದವು. ಅವರು ಮತ್ತೆ ಅಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.


