ಸವಾಲುಗಳ ಮಧ್ಯೆ ಯಶಸ್ವಿಯಾಗಿ ಚಾಲನೆಗೊಂಡ ಅಣ್ಣ ತಮ್ಮ ಜೋಡುಕೆರೆ ಕಂಬಳ ಸಂಸ್ಕøತಿಯ ಬೇರುಗಳ ಪರಿಚಯಕ್ಕೆ ಕಂಬಳದಂತಹ ಪಾರಂಪರಿಕತೆಯ ಪ್ರಯೋಗ ಅಗತ್ಯ-ಒಡಿಯೂರು ಶ್ರೀ
0
ಡಿಸೆಂಬರ್ 15, 2018
ಉಪ್ಪಳ: ತುಳುನಾಡಿನ ಸಂಸ್ಕøತಿ ಅನನ್ಯವಾದುದು. ತುಳುವರ ಪ್ರಕೃತಿ ಸನಿಹತೆಯ ಆಚರಣೆ, ಸಂಪ್ರದಾಯಗಳು ಎಲ್ಲರಿಗೂ ಮಾದರಿಯಾಗಿದ್ದು, ಇದನ್ನು ಉಳಿಸಿ ಬೆಳೆಸಿ ಮುನ್ನಡೆಯುವ ಕಾರ್ಯವಾಗಬೇಕಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅಣ್ಣ ತಮ್ಮ ಜೋಡುಕರೆ ಸಮಿತಿ ಬೋಳಂಗಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ವತಿಯಿಂದ ಆರಂಭಗೊಂಡ 2018-19 ನೇ ಸಾಲಿನ ಪೈವಳಿಕೆ ಸಮೀಪದ ಬೋಳಂಗಳದಲ್ಲಿ ಶನಿವಾರ ಆಯೋಜಿಸಲಾದ ಕಂಬಳದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.
ಪ್ರಕೃತಿ ಸಮನ್ವಯತೆ ಸಾಧಿಸಿರುವ ತುಳುವರ ಆಚರಣೆ ಸಂಪ್ರದಾಯಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಕೃಷಿ ಪೂರಕ ಆಚರಣೆಯಿಂದ ಬಂದಂತಹ ಗ್ರಾಮೀಣ ಕ್ರೀಡೆ ಕಂಬಳವಾಗಿದ್ದು, ಇದರ ಉಳಿಕೆ ಸಹಿತ ಭಾವಿ ಪೀಳಿಗೆಗೆ ಇದರ ಮಹತ್ವ ತಿಳಿಯಪಡಿಸುವ ಕಾರ್ಯವಾಗಬೇಕಿದೆ ಎಂದರು. ಅಣ್ಣ ತಮ್ಮ ಜೋಡುಕರೆ ಕಂಬಳ ಆಯೋಜನೆಯ ಮೂಲಕ ಭಾವಿ ತಲೆಮಾರು ಸಂಸ್ಕøತಿಯ ಬೇರುಗಳನ್ನು ಅರ್ಥೈಸಲು ಸಾಧ್ಯವಾಗಲಿದೆ ಎಂದರು. ಕಂಬಳಕ್ಕೆ ಒಡ್ಡಲ್ಲಪಟ್ಟ ಎಲ್ಲ ಅಡ್ಡಿ ಆತಂಕಗಳು ನಿವಾರಣೆಗೊಂಡು, ಪೈವಳಿಕೆಯ ಮಣ್ಣಿನಲ್ಲಿ ಏರ್ಪಡುತ್ತಿರುವ ಚೊಚ್ಚಲ ಕಂಬಳವು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ತಂತ್ರಿ ವಾಸುದೇವ ನಲ್ಲೂರಾಯ ದೀಪ ಪ್ರಜ್ವಲನೆಗೈದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೈವಳಿಕೆ ಅರಮನೆಯ ರಂಗತ್ರೈಯ ಅರಸರು, ತುಳು ಸಂಸ್ಕøತಿಯ ಭಾಗವಾಗಿರುವ ಜನಪದ ಕ್ರೀಡೆ, ಮೌಖಿಕ ಪಾಡ್ದನಗಳು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕಟಿಬದ್ಧರಾಗಬೇಕೆಂದರು. ಪ್ರಸ್ತುತ ಕಂಬಳ ಆಯೋಜನೆಗೆ ಸವಾಲಾಗಿ ಪರಿಣಮಿಸಿರುವ ಅಡ್ಡಿ ಆತಂಕಗಳು ದೂರವಾಗಿ ತುಳುನಾಡಿನ ಜನಪ್ರಿಯ ಹಾಗೂ ಹೆಮ್ಮೆಯ ಕಂಬಳ ಉಳಿಯುವಂತಾಗಲಿ ಎಂದು ಹಾರೈಸಿದರು.
ಪೈವಳಿಕೆಯ ಗ್ರಾಮೀಣ ಭಾಗವಾದ ಬೋಳಂಗಳದಲ್ಲಿ ಶಾಶ್ವತ ಕಂಬಳ ಓಟದಂಗಣ ಮಾಡಲು ಸಹಾಯಹಸ್ತ ಚಾಚಿ ನಿರಂತರ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳ ಸೇವೆಯನ್ನು ವಿಶೇಷವಾಗಿ ಕೊಂಡಾಡಿದರು. ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಮೀಂಜಾ ಗ್ರಾ.ಪಂ ಅಧ್ಯಕ್ಷೆ ಶಂಶಾದ್ ಶುಕೂರ್, ವಕಾಡಿ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್, ಮಂಜೇಶ್ವರ ಬ್ಲಾ.ಪಂ ಉಪಾಧ್ಯಕ್ಷೆ ಮಮತಾ ದಿವಾಕರ್, ಪೈವಳಿಕೆ ಗ್ರಾ.ಪಂ ಉಪಾಧ್ಯಕ್ಷೆ ಸುನೀತಾ ವಲ್ಟಿ ಡಿ'ಸೋಜಾ, ಪೈವಳಿಕೆ ಗ್ರಾ.ಪಂ ಸದಸ್ಯೆ ರಝಿಯಾ ರಜಾಕ್, ಎಂ.ಕೆ.ಅಮೀರ್ ಮೊದಲಾದವರು ಉಪಸ್ಥಿತರಿದ್ದರು.



