ಮಂಜೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ನಗರ ಮತ್ತು ಗ್ರಾಮಾಂತರ ತಾಲೂಕು ಸಂಘ ಚಾಲಕರಾಗಿದ್ದ ದಿನೇಶ್ ಮಡಪ್ಪುರ ಅವರ ನಿಧನಕ್ಕೆ ದೇಶೀಯ ಅಧ್ಯಾಪಕ ಪರಿಷತ್(ಎನ್ ಟಿ ಯು) ಮಂಜೇಶ್ವರ ಉಪಜಿಲ್ಲಾ ಸಮಿತಿ ಗಾಢ ಸಂತಾಪ ಸೂಚಿಸಿತು.
ಸಂಘ ಮತ್ತು ಸಂಘ ಪರಿವಾರದ ಚಟುವಟಿಕೆಗಳಲ್ಲಿ ತನ್ನ ಜೀವನವನ್ನೇ ಸಮರ್ಪಿಸಿದ ಯುವ ಪೀಳಿಗೆಗೆ ಆದರ್ಶ ಪ್ರಾಯರಾಗಿದ್ದ ದಿನೇಶ್ ಅವರ ನಿಧನ ತುಂಬಲಾರದ ನಷ್ಟ ಎಂದು ಪರಿಷತ್ ಅಭಿಪ್ರಾಯ ಪಟ್ಟಿದೆ. ಹಿರಿಯರಾದ ವಿಘ್ನೇಶ್ವರ ಕೆದುಕೋಡಿ ಅವರು ಮೀಯಪದವಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಂತಾಪ ಸೂಚಕ ನಿಳುವಳಿ ಮಂಡಿಸಿ ದಿನೇಶ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಮೃತರ ಆತ್ಮ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ದೇಶ ಪೂರ್ವಕವಾಗಿ ಮುದ್ರಿಸದಿರುವ ಮೂಲಕ ಕೇರಳದ ಪಿಣರಾಯಿ ಸರಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಲ್ಪತನವನ್ನು ಅನಾವರಣಗೊಳಿಸಿದೆ ಎಂದು ಕಳವಳ ವ್ಯಕ್ತಪಡಿಸಿರುವ ದೇಶೀಯ ಅಧ್ಯಾಪಕ ಪರಿಷತ್ತಿನ ಮಂಜೇಶ್ವರ ಉಪಜಿಲ್ಲಾ ಸಮಿತಿ ಸರಕಾರದ ತುಷ್ಟೀಕರಣ ನೀತಿಯನ್ನು ತೀವ್ರವಾಗಿ ಖಂಡಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸತತ ಪರಿಶ್ರಮದಿಂದ ಇಡೀ ಜಗತ್ತು ಇಂದು ಯೋಗವನ್ನು ಜೀವನ ಪದ್ಧತಿಯಾಗಿ ಅಂಗೀಕರಿಸಿದೆ. ಆದರೆ ಕೇರಳ ಸರಕಾರ ಮಾತ್ರ ಮೋದಿ ವಿರೋಧಿ ನಿಲುವನ್ನು ಅನಾವರಣಗೊಳಿಸುವುದಕ್ಕೆ ಯೋಗವನ್ನು ಅವಮಾನಿಸಿದೆ ಎಂದು ದೇಶೀಯ ಅಧ್ಯಾಪಕ ಪರಿಷತ್ತು ಕಳವಳ ವ್ಯಕ್ತಪಡಿಸಿದೆ. ಸಭೆಯಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಉಪಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುವೀರ್, ನೇತಾರರಾದ ಈಶ್ವರ ಕಿದೂರು, ಚಂದ್ರಿಕ ಟೀಚರ್, ಶಶಿಕಲಾ ಟೀಚರ್, ರೂಪೇಶ್, ದೇವಿದಾಸ್, ಕಿಶೋರ್, ಸಂತೋಷ್, ಶಿವಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು. ಉಪಜಿಲ್ಲಾ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ವಂದಿಸಿದರು.


