ಮುಳ್ಳೇರಿಯ: ಕೇರಳ ಸರಕಾರದ ಆಧೀದಲ್ಲಿ ಸಾಮಾಜಿಕ ನ್ಯಾಯ ಇಲಾಖೆ (ಸೋಶಿಯಲ್ ಜಸ್ಟಿಸ್ ಡಿಪಾರ್ಟ್ ಮೆಂಟ್), ಸಮಾಜದ ಎಲ್ಲ ವರ್ಗದವರಿಗೆ ನ್ಯಾಯವನ್ನೊದಗಿಸಬೇಕಾದುದು ಕರ್ತವ್ಯವಾಗಿದ್ದು, ಅದೇ ಇಲಾಖೆ ಇದೀಗ ನ್ಯಾಯ ಪರಿಧಿಯನ್ನು ಬಿಟ್ಟು ವತಿಸಿರುವುದು ಕಂಡುಬಂದಿದೆ.
ಮಹಿಳೆಯರು ಹಾಗೂ ಮಕ್ಕಳ ಕ್ಷೇಮ, ಅಂಗನವಾಡಿಗಳ ನಿರ್ವಹಣೆ, ಎಂಡೋಸಲ್ಫಾನ್ ಬಾಧಿತ ಮಕ್ಕಳ ಕಲ್ಯಾಣಕ್ಕಾಗಿ ಬಡ್ಸ್ ಶಾಲೆಗಳ ಸ್ಥಾಪನೆ ಮತ್ತು ನಿರ್ವಹಣೆ ಮೊದಲಾದವುಗಳನ್ನು ಈ ಇಲಾಖೆ ನಿರ್ವಹಿಸುತ್ತದೆ. ಆದರೆ ಸಮಾಜಕ್ಕೆ ನ್ಯಾಯವನ್ನೊದಗಿಸಬೇಕಾದ ಈ ಇಲಾಖೆಯಿಂದಲೇ ಭಾಷಾ ಅಲ್ಪಸಂಖ್ಯಾಕ ಕನ್ನಡ ಮಕ್ಕಳಿಗೆ ಅನ್ಯಾಯವಾಗುತ್ತಿರುವುದು ದಿಗ್ಭ್ರಾಂತಿ ಹುಟ್ಟಿಸಿದೆ. ಅದರಲ್ಲೂ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಶಿಕ್ಷಣದ ವಿಷಯದಲ್ಲಿ ಭಾಷಾ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ನಡೆಸಲಾಗುತ್ತಿದೆ. ಇತ್ತೀಚೆಗೆ ಕನ್ನಡ ಪ್ರದೇಶದ ಬಡ್ಸ್ ಶಾಲೆಗಳಿಗಾಗಿ ಕನ್ನಡದ ಒಂದು ಅಕ್ಷರವೂ ಅರಿಯದ ಸ್ಥಳೀಯ ಭಾಷೆಗಳಾದ ಕನ್ನಡ, ತುಳು ಅರ್ಥವಾಗದ, ಮಾತನಾಡಲು ಓದಲು ಬರೆಯಲು ಬಾರದ ಶಿಕ್ಷಕಿಯರನ್ನು ಹಾಗೂ ಶುಶ್ರೂಷಕಿಯರನ್ನು ಆಯ್ಕೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ.
ಕೇರಳ ಸರಕಾರದ ಸಮಾಜ ಕಲ್ಯಾಣ ಇಲಾಖೆ ದಿನಾಂಕ 2-5-2019 ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಾದ ದೈಹಿಕ ಮತ್ತು ಮಾನಸಿಕ ವೈಕಲ್ಯವುಳ್ಳ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕಾಗಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಲಾಗುವ ಬಡ್ಸ್ ಶಾಲೆಗಳಿಗೆ ತರಬೇತುದಾರನ್ನು (ಶಿಕ್ಷಕಿಯರನ್ನು ಹಾಗೂ ಶುಸ್ರೂಷಕರನ್ನು) ಆಯ್ಕೆ ಮಾಡಲು ದಿನಾಂಕ 15-6-2019ರಂದು ರ್ಯಾಂಕ್ ಪಟ್ಟಿ ಪ್ರಕಟವಾಗಿದ್ದು 27-6-2019ರಂದು ನೇಮಕಾತಿ ಆದೇಶವನ್ನೂ ನೀಡಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಲ್ಲಿ ಹೆಚ್ಚಿನವರ ಮಾತೃ ಭಾಷೆ ಕನ್ನಡ ತುಳು ಆಗಿರುತ್ತದೆ. ರ್ಯಾಂಕ್ ಪಟ್ಟಿಯಲ್ಲಿ ಕನ್ನಡ ಉದ್ಯೋಗಾರ್ಥಿಗಳು ಇದ್ದರೂ ಅವರನ್ನು ಕಡೆಗಣಿಸಿ ಮಲಯಾಳ ಮಾತ್ರ ತಿಳಿದ ಕನ್ನಡ ತುಳು ಅರಿಯದವರನ್ನು ಆರಿಸಿ ನೇಮಕಾತಿ ಆದೇಶ ನೀಡಲಾಗಿದೆ. ಎಂಡೋ ಸಂತ್ರಸ್ತ ಮಕ್ಕಳ ಜೊತೆ ವ್ಯವಹರಿಸಲು, ಅವರಿಗೆ ಶಿಕ್ಷಣವನ್ನು ನೀಡಲು ಪಾಲನೆ ಮಾಡಲು ಶಿಕ್ಷಕಿಯರಿಗೆ ಮಕ್ಕಳ ಮಾತೃ ಭಾಷೆ ತಿಳಿದಿರಬೇಕಾದುದು ಅನಿವಾರ್ಯ. ಆದರೆ ಇದನ್ನು ಕಡೆಗಣಿಸಿ ಕನ್ನಡ ಬಾರದವರನ್ನು ಆರಿಸಿದ್ದರಿಂದ ಎಂಡೋ ಸಂತ್ರಸ್ತ ಮಕ್ಕಳ ಪೆÇೀಷಕರು ಆತಂಕಕ್ಕೀಡಾಗಿದ್ದಾರೆ. ಸರಕಾರ ತಕ್ಷಣ ಮಧ್ಯೆ ಪ್ರವೇಶಿಸಿ ಕನ್ನಡ ಪ್ರದೇಶದ ಬಡ್ಸ್ ಶಾಲೆಗಳಲ್ಲಿ ಕನ್ನಡ ತಿಳಿದ ಶಿಕ್ಷಕಿಯರು ಹಾಗೂ ಶುಶ್ರೂಷಕಿಯರನ್ನೇ ನೇಮಿಸಬೇಕೆಂದು ಒತ್ತಾಯಿಸಿದ್ದಾರೆ.
ಅಂಗನವಾಡಿ ಪಠ್ಯ ಪುಸ್ತಕ ಸಿದ್ಧವಾದರೂ ವಿತರಣೆಯಲ್ಲಿ ವಿಳಂಬ :
ಕನ್ನಡ ಸಂಘಟನೆಗಳ ನಿರಂತರ ಪ್ರಯತ್ನದ ಫಲವಾಗಿ ಕನ್ನಡ ಪ್ರದೇಶದ ಅಂಗನವಾಡಿಗಳಿಗೆ ವಿತರಿಸಲು ಕನ್ನಡ ಪಠ್ಯಪುಸ್ತಕಗಳು ಹಾಗೂ ಕೈಪಿಡಿಗಳು ತಯಾರಾಗಿದ್ದರೂ ಅವುಗಳನ್ನು ವಿತರಿಸದೆ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ನ್ಯಾಯ ಇಲಾಖೆಯ ಕೈಕೆಳಗಿನ ಜಿಲ್ಲಾ ಶಿಶು ಕಲ್ಯಾಣ ವಿಭಾಗದ ಕಚೇರಿಯಲ್ಲಿ ಕನ್ನಡ ಪಠ್ಯಪುಸ್ತಕಗಳು ಕೊಳೆಯುತ್ತಿವೆ. ಅವುಗಳನ್ನು ಅಂಗನವಾಡಿಗಳಿಗೆ ವಿತರಿಸಲು ಇನ್ನೂ ಮುಹೂರ್ತ ಕೂಡಿಬಂದಿಲ್ಲ.
ಅನ್ಯಾಯದ ವಿರುದ್ದ ಅಭಿಮತ:
ಸಂಬಂಧಪಟ್ಟ ಇಲಾಖೆಯ ಕನ್ನಡ ಭಾಷಾ ವಿರೋಧಿ ನಿಲುವು ಖಂಡನೀಯ. ಪದೇಪದೆ ಸರ್ಕಾರದ ಅಧಿಕೃತರಿಗೆ ಭಾಷಾ ಅಲ್ಪಸಂಖ್ಯಾತರ ಬಗ್ಗೆ ಅವರ ಹಕ್ಕು ಸಂರಕ್ಷಣೆಗೆ ಅಗತ್ಯ ಮನವಿ ನೀಡುತ್ತಿದ್ದರೂ, ಅವಕಾಶ ಲಭ್ಯವಾದಲ್ಲೆಲ್ಲ ಕುತ್ಸಿತ ಮನೋಸ್ಥಿತಿ ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವುದಾಗಿ ಅಂದಾಜಿಸಲಾಗಿದೆ. ಇದೀಗ ನಡೆಸಿರುವ ನೇಮಕಾತಿಯ ಬಗ್ಗೆ ಸಂಬಂಧಪಟ್ಟವರಿಗೆ ತಕರಾರು ಅರ್ಜಿ ರವಾನಿಸಿ ಎಚ್ಚರಿಸಲಾಗುವುದು.
ನ್ಯಾಯವಾದಿ.ಮುರಳೀಧರ ಬಳ್ಳಿಕ್ಕುರಾಯ.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷರು. ಕಾಸರಗೋಡು.


