ಕಾಸರಗೋಡು: ಕೃಷಿ ಬೆಳೆಗಳಿಗೆ ಪೂರ್ಣರೂಪದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸುವ ಬೆಳೆ ವಿಮೆ ಯೋಜನೆಯಲ್ಲಿ ಜಿಲ್ಲೆಯ ಎಲ್ಲ ಕೃಷಿಕರ ಸಂಪೂರ್ಣ ಸಹಭಾಗಿತ್ವ ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿಒ.ಸಜಿತ್ ಬಾಬು ಆಗ್ರಹಿಸಿದರು.
ಬೆಳೆ ವಿಮೆ ಪಕ್ಷಾಚರಣೆ ಅಂಗವಗಿ ಆತ್ಮ ಸಂಗಟನೆಯ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಬ್ಲೋಕ್ ಮಟ್ಟದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೆಂಗು, ಅಡಕೆ, ಬಾಳೆ, ಕರಿಮೆಣಸು, ಭತ್ತ ಎಂಬ 5 ಬೆಳೆಗಳಿಗೆ ಸಂಬಂಧಿಸಿ ಶೇ 100 ಕೃಷಿಕರನ್ನು ಬೆಳೆವಿಮೆಗೆ ಸೇರ್ಪಡೆಗೊಳಿಸಬೇಕು. ಜು.25ರ ಮುಂಚಿತವಾಗಿ ಗುರಿ ಸಾಧಿಸಬೇಕು ಅವರು ತಿಳಿಸಿದರು.
ಪ್ರೀಮಿಯಂ ಬಹಳ ಕಡಿಮೆಯಿರುವ ಈ ಯೋಜನೆಯ ಕುರಿತು ಕೃಷಿಕರಿಗೆ ಜಾಗೃತಿ ಮೂಡಿಸಿ, ಅರ್ಜಿಫಾರಂ ಭರ್ತಿಗೊಳಿಸಲು ಅವರಿಗೆ ಸಹಾಯ ಮಾಡಬೇಕು. ಯಾವ ಕಾರಣಕ್ಕೂ ಸರಕಾರದ ಸೌಲಭ್ಯಗಳು ಅನರ್ಹರ ಕೈಗೆ ಸಿಗದಂತೆ ಖಚಿತಪಡಿಸಿಕೊಂಡು, ಅರ್ಹ ಕೃಷಿಕನಿಗೆ ಸೂಕ್ತ ಅವಧಿಯಲ್ಲಿ ಸೌಲಭ್ಯ ಸಿಗುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ. ಪ್ರಕೃತಿ ವಿಕೋಪ ಮೂಲಕ ಸಂಭವಿಸಬಹುದಾದ ಕೃಷಿನಾಶಕ್ಕೆ ನಷ್ಟಪರಿಹರವೂ ಈ ಯೋಜನೆ ಮೂಲಕ ಲಭಿಸಲಿದೆ ಎಂಬುದು ಗಮನಾರ್ಹವಿಚಾರ ಎಂದು ಸಭೆ ಅಭಿಪ್ರಾಯಪಟ್ಟಿದೆ.
ಪ್ರಧಾನ ಕೃಷಿ ಅಧಿಕಾರಿ ಮಧು ಜೋರ್ಜ್ ಮತ್ತಾಯಿ, ಕೃಷಿ ಡೆಪ್ಯೂಟಿ ಡೈರೆಕ್ಟರ್ ಎಸ್.ಸುಷ್ಮಾ, ಸಹಾಯಕ ಡೈರೆಕ್ಟರ್ ಕೆ.ಆನಂದನ್ ಮೊದಲಾದವರು, ಕಾಸರಗೋಡು ಬ್ಲೋಕ್ ವ್ಯಾಪ್ತಿಯ 6 ಕೃಷಿಭವನಗಳ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.


