ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕಸಾಯಿಖಾನೆಗೆ ಅನುಮತಿಯನ್ನು ನೀಡಬಾರದು ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿಯ ಬದಿಯಡ್ಕ ಪ್ರಖಂಡದ ವತಿಯಿಂದ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರಿಗೆ ಮನವಿಯನ್ನು ಮಂಗಳವಾರ ನೀಡಿದೆ.
ಬೇಳ ಗ್ರಾಮದ ಖಾಸಗಿ ವ್ಯಕ್ತಿಗಳ ಅಧೀನದಲ್ಲಿರುವ ಸ್ಥಳದಲ್ಲಿ ಕಸಾಯಿಖಾನೆಯನ್ನು ತೆರೆಯುವ ಸಲುವಾಗಿ ಪಂಚಾಯತಿಯ ಪರವಾನಿಗೆಯನ್ನು ಪಡೆಯಲು ಅರ್ಜಿ ದಾಖಲಾದ ಬಗ್ಗೆಯೂ, ಪರವಾನಿಗೆ ಕೊಡುವ ಬಗ್ಗೆ ಆಕ್ಷೇಪಗಳಿದ್ದಲ್ಲಿ ತಿಳಿಯಪಡಿಸಿತಕ್ಕದೆಂದು ಗ್ರಾಮಪಂಚಾಯತಿ ಕಾರ್ಯದರ್ಶಿ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದರು. ಈ ವಿಚಾರದ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿರೋಧವೂ ವ್ಯಕ್ತವಾಗಿತ್ತು. ಗೋವುಗಳನ್ನು ಪೂಜಿಸುವ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ನಿರ್ಧಾರಗಳನ್ನು ಪ್ರಭಲವಾಗಿ ವಿರೋಧಿಸುತ್ತೇವೆ. ಸಮಾಜದ ಸುಸ್ಥಿತಿಯನ್ನು ಕಾಪಾಡಬೇಕಾದ ಅಧಿಕಾರಿ ವರ್ಗವು ಸ್ವಾರ್ಥ ಮನೋಭಾವದಿಂದ ಇತರರನ್ನು ಓಲೈಸಲು ಮತ್ತು ಓಟ್ ಬ್ಯಾಂಕ್ ಅನ್ನು ಮನಸ್ಸಿನಲ್ಲಿಟ್ಟು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಹುನ್ನಾರದಲ್ಲಿದೆ. ಇಂತಹ ಯಾವುದೇ ಕಸಾಯಿಖಾನೆಯನ್ನು ತೆರೆಯುವುದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನೇತಾರರಾದ ಕರಿಂಬಿಲ ಲಕ್ಷ್ಮಣ ಪ್ರಭು, ಸುನಿಲ್ ಕಿನ್ನಿಮಾಣಿ, ಪ್ರಸಾದ್ ಕನಕಪ್ಪಾಡಿ, ಮೈರ್ಕಳ ನಾರಾಯಣ ಭಟ್, ರೂಪೇಶ್ ಶೆಟ್ಟಿ ಬದಿಯಡ್ಕ, ಕೃಷ್ಣ ಮಣಿಯಾಣಿ ಮೊಳೆಯಾರು, ರಕ್ಷಿತ್ ಕೆದಿಲಾಯ ಕೆಡೆಂಜಿ, ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ ಈ ಸಂದರ್ಭದಲ್ಲಿ ಜೊತೆಗಿದ್ದರು.
ಅಭಿಮತ:
ಮನವಿಯನ್ನು ಪರಿಶೀಲಿಸಿ ಅಗತ್ಯವುಳ್ಳ ಕ್ರಮಗಳನ್ನು ಕೈಗೊಳ್ಳಲಾಗುವುದು. ಊರಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಆಡಳಿತ ನಡೆಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಜನತೆಗೆ ತೊಂದರೆಯಾಗುವಂತಹ ಯಾವುದೇ ನಿರ್ಧಾರಗಳಿಗೆ ನಮ್ಮ ಬೆಂಬಲವಿಲ್ಲ.
- ಕೆ.ಎನ್.ಕೃಷ್ಣ ಭಟ್, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷರು
...............................................
ಬೇಳ ಗ್ರಾಮದಲ್ಲಿ ಕಸಾಯಿಖಾನೆಯನ್ನು ತೆರೆಯುವ ಕುರಿತು ದಿನಪತ್ರಿಕೆಯೊಂದರಲ್ಲಿ ಗ್ರಾಮಪಂಚಾಯತ್ ಪ್ರಕಟಣೆಯನ್ನು ನೋಡಿ ಕಸಾಯಿಖಾನೆಯನ್ನು ತೆರೆಯಬಾರದೆಂದು ಮನವಿಯನ್ನು ನೀಡಲಾಗಿದೆ. ಊರಿನ ನೆಮ್ಮದಿಗೆ ಭಂಗ ತರುವಂತಹ ಯಾವುದೇ ನಿರ್ಧಾರಗಳನ್ನು ಆಡಳಿತ ಸಮಿತಿಯು ಕೈಗೊಳ್ಳಬಾರದು.
- ಕರಿಂಬಿಲ ಲಕ್ಷ್ಮಣ ಪ್ರಭು, ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷರು.

