ಮುಳ್ಳೇರಿಯ : ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಇತ್ತೀಚೆಗೆ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ನಡೆಯಿತು. ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ಸತ್ಯಪ್ರೇಮ ಭಾರಿತ್ತಾಯ ಹಾಗೂ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಪ್ರಕಾಶ ಪಾಂಙಣ್ಣಾಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಆಷಾಢ ಮಾಸದಲ್ಲಿ ಶಿವಳ್ಳಿ ಬ್ರಾಹ್ಮಣರ ಮನೆಯಲ್ಲಿ ಪ್ರತಿದಿನ ಕುಟುಂಬಿಕರೆಲ್ಲ ಸೇರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಸಾಚರಣೆ ಹಾಗೂ ವಿವಿಧ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಸಪ್ತಾಹ ನಡೆಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಶುಸಂಗೋಪನ ಕೇಂದ್ರದ ಹಿರಿಯ ಅಧಿಕಾರಿ ಡಾ. ಪಿ ನಾಗರಾಜ್ ಕಲ್ಲೂರಾಯ ಅವರು ಮಳೆಗಾಲದಲ್ಲಿ ದನಗಳ ಆರೈಕೆ ಮತ್ತು ಹೈನುಗಾರರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಡಿಸೆಂಬರ್ 14ರಿಂದ 2 ದಿನ ಉಡುಪಿಯ ಕನಕಮಂಟಪದಲ್ಲಿ ನಡೆಯುವ ತೌಳವ-ತುಳು ಶಿವಳ್ಳಿ ಬ್ರಾಹ್ಮಣರ ವಿಶ್ವ ಸಮ್ಮೇಳನದ ಪೂರ್ವಭಾವಿ ಸಿದ್ಧತಾ ಸಭೆಯು ಆ.4ರಂದು ನಡೆಯಲಿದ್ದು, ಈ ಸಭೆಯಲ್ಲಿ ಹಾಗೂ ಸಮ್ಮೇಳನದಲ್ಲಿ ಮುಳ್ಳೇರಿಯ ವಲಯದಿಂದ ಅನೇಕ ಮಂದಿ ಭಾಗವಹಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಶ್ರೀಪತಿ ಎಂ, ಉದಯ ಕುಮಾರ ಸರಳಾಯ, ಆದ್ಯಂತ್ ಅಡೂರು, ದಿನೇಶ್ ಕುಮಾರ್ ಅಡಿಗ, ಶ್ರೀವತ್ಸ, ಶ್ರೀಪ್ರಸಾದ್ ಎ, ಜಯಲಕ್ಷ್ಮಿ, ಸಜಿತ ಪಿ ಭಟ್, ರಾಜಾರಾಮ ಎ, ಚಂಚಲಾ ಎಸ್ ಎಸ್, ಮಹಾದೇವ ಕಲ್ಲೂರಾಯ ಮೊದಲಾದವರು ಭಾಗವಹಿಸಿದ್ದರು. ಪ್ರಶಾಂತ ರಾಜ ವಿ ತಂತ್ರಿ ಸ್ವಾಗತಿಸಿದರು. ಮಾಲೆಂಕಿ ಅನಂತರಾಮ್ ವಂದಿಸಿದರು. ಮುಂದಿನ ಸಭೆಯನ್ನು ಆಗಸ್ಟ್ 11ರಂದು ಅಡೂರಿನ ದೇರಳ ರಮೇಶ್ ಭಾರಿತ್ತಾಯರ ಮನೆಯಲ್ಲಿ ಅಪರಾಹ್ನ 2 ಗಂಟೆಯಿಂದ ನಡೆಸಲು ನಿರ್ಧರಿಸಲಾಯಿತು.


