ಮುಳ್ಳೇರಿಯ: ಹಿರಿಯ ಚೇತನ, ಎಡನೀರು ಶ್ರೀ ಮಠದ ಪೂರ್ವ ಪ್ರಬಂಧಕರಾಗಿದ್ದ ದಿ.ಎಡನೀರು ರಾಮಕೃಷ್ಣ ರಾವ್ ಅವರ ಸ್ಮರಣಾರ್ಥ `ನುಡಿ ನಮನ' ಕಾರ್ಯಕ್ರಮ ಸೆ.16 ಸೋಮವಾರ ಬೆಳಿಗ್ಗೆ 11 ರಿಂದ ಬೋವಿಕ್ಕಾನ ಶ್ರೀಪುರಿ ಅಡಿಟೋರಿಯಂನಲ್ಲಿ ನಡೆಯಲಿದೆ. ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ರಾಮಕೃಷ್ಣ ರಾವ್ ಅವರ ಸ್ನೇಹಿತರು, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ರಾಮಕೃಷ್ಣ ರಾವ್ ಅವರು ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದೀರ್ಘಾಕಾಲ ಕಾರ್ಯ ನಿರ್ವಹಿಸಿದ್ದರು. ಚೆಂಗಳ ಪಂಚಾಯತಿಯಲ್ಲಿ ಮೂರು ಬಾರಿ ಅಧ್ಯಕ್ಷರಾಗಿ ಹಲವು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿದ್ದರು. ಮುಟ್ಟತ್ತೋಡಿ ಸಹಕಾರಿ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖರೂ, ಬ್ಯಾಂಕ್ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಎಡನೀರು ಶ್ರೀ ಮಠದ ಪ್ರಬಂಧಕರಾಗಿ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಎಡನೀರು ಹೈಸ್ಕೂಲ್ ಪ್ಲಸ್ ಟು ಶಾಲೆಯಾಗಿ ಭಡ್ತಿಗೊಂಡಿರುವಲ್ಲಿ ರಾಮಕೃಷ್ಣ ರಾವ್ ಅವರ ಪ್ರಯತ್ನ ಪ್ರಮುಖವಾದದ್ದು. ಎಡನೀರು ಸರ್ಕಾರಿ ಹೈಸ್ಕೂಲ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಕಾಸರಗೋಡು ಜಿಲ್ಲಾ ಅಭಿವೃದ್ಧಿ ಕೌನ್ಸಿಲ್ ಸದಸ್ಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ವಲಯಗಳಲ್ಲಿ ಸಕ್ರಿಯರಾಗಿದ್ದ ಅವರು ಪ್ರಸಿದ್ಧರಾಗಿದ್ದರು.
ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ಇತರ ಎಲ್ಲಾ ವಲಯದಲ್ಲೂ ಆಸಕ್ತರಾಗಿದ್ದ ಅವರು, ಸಮಾಜದ ಎಲ್ಲಾ ವಿಭಾಗದ ಜನರ ಪ್ರೀತಿ ಹಾಗೂ ಗೌರವಕ್ಕೆ ಭಾಜನರಾಗಿದ್ದರು. `ರಾವ್ ಜೀ' ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದ ಅವರು, ಹಲವಾರು ರಾಜೀ ಪಂಚಾತಿಕೆಗಳನ್ನು ಮಾಡಿ ಅದೆಷ್ಟೋ ಸಾಮಾಜಿಕ ಕಲಹಗಳನ್ನು, ಭೂವಿವಾದಗಳನ್ನು ಪರಿಹರಿಸುತ್ತಿದ್ದರು. ಅದಲ್ಲದೇ ಎಪ್ಪತ್ತರ ದಶಕದಲ್ಲಿ ಎಡನೀರು ಶ್ರೀ ಮಠದಲ್ಲಿ ನಡೆಯುತ್ತಿದ್ದ ಯಕ್ಷಗಾನಗಳಲ್ಲಿ ಕಲಾವಿದರಾಗಿ ತಾಮ್ರಧ್ವಜ, ಶುಂಭಾಸುರ, ಅರ್ಜುನ, ಮಧುಕೈಟಭ ಮೊದಲಾದ ಹಲವಾರು ವೇಷಗಳಲ್ಲಿ ಮಿಂಚಿದವರು. ಸಾಂಸ್ಕøತಿಕ, ಸಾಹಿತ್ಯಕ ಚಟುವಟಿಕೆಯಲ್ಲಿ ಆಸಕ್ತರಾಗಿದ್ದರು.

