ಮೂರು ಟಿಪ್ಪಣಿಗಳು ಇಲ್ಲಿವೆ.
೧. ತಪ್ಪಂತೆ ಸರಿಯಂತೆ ಏಕೆ ಹೀಗಂತೆ... ನನ್ನ ನಾನೇ ಕೇಳಿಕೊಂಡೆ ಬೇಕೇ ಈ ಚಿಂತೆ?
ಮುದ್ರಿತ ಪತ್ರಿಕೆಗಳಲ್ಲಿ ಮತ್ತು ಫೇಸ್ಬುಕ್ ಗೋಡೆ ಬರಹಗಳಲ್ಲಿ ಕಂಡುಬಂದ ಕೆಲವು ವಾಕ್ಯಗಳಿವು. ಮೇಲ್ನೋಟಕ್ಕೆ ಎಲ್ಲ ಸರಿಯಾಗಿಯೇ ಇದ್ದಹಾಗಿವೆ, ಆದರೆ ಗಮನವಿಟ್ಟು ಓದಿದರೆ ತಪ್ಪುಗಳಿವೆ. ಸ್ವಚ್ಛ ಭಾಷೆ ಅಭಿಯಾನದಲ್ಲಿ ನಾವು ಇಂಥವನ್ನು ಸಹ ಝಾಡಿಸಿ ( = ಗುಡಿಸಿ) ಸ್ವಚ್ಛಗೊಳಿಸುವುದನ್ನು ಕಲಿಯಬೇಕು. :-)
ಅ. “ಅವಘಡದ ಬಳಿಕ ತಾವು ಕ್ಷೇಮವಿರುವುದಾಗಿ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದು ಸ್ನೇಹಿತರು ಸಂಬಂಧಿಕರು ಇದರಿಂದ ತುಸು ನಿರಾಶರಾಗಿದ್ದಾರೆ."
- ಕೊಡಗಿನ ಪ್ರಾದೇಶಿಕ ಪತ್ರಿಕೆಯೊಂದರಲ್ಲಿ ಪ್ರಕಟಿತ ಸುದ್ದಿ. ಅಂತಾರಾಷ್ಟ್ರೀಯ ಕ್ರೀಡಾಪಟು, ಕೊಡಗಿನ ಅರ್ಜುನ್ ದೇವಯ್ಯ “ಅವಘಡದಿಂದ ಪ್ರಾಣ ಹೋಗಿಲ್ಲ. ಕ್ಷೇಮವಾಗಿ ಇದ್ದೇನೆ" ಅಂತ ತಿಳಿಸಿದರೂ ಸಂಬಂಧಿಕರಿಗೆ ನಿರಾಶೆ! ವರದಿಗಾರ ಬಹುಶಃ ‘ನಿರಾಳರಾಗಿದ್ದಾರೆ’ ಎಂದು ಸರಿಯಾಗಿಯೇ ಬರೆದುಕಳುಹಿಸಿದ್ದಿರಬಹುದು. ಕೈಬರಹದಲ್ಲಿ ‘ಳ’ ಅಕ್ಷರವು ’ಶ’ದಂತೆ ಕಾಣಿಸುತ್ತಿತ್ತೋ ಏನೋ, ಡೆಸ್ಕ್ ಪತ್ರಕರ್ತ ‘ನಿರಾಶರಾಗಿದ್ದಾರೆ’ ಎಂದು ಟೈಪ್ ಮಾಡಿದ್ದಾರೆ. ನಿರಾಳ ಎಂಬ ಪದ ಕೇಳಿ/ಓದಿ/ಬರೆದು ಗೊತ್ತೇ ಇಲ್ಲದಿದ್ದರೆ ಇದೇ ಅವಸ್ಥೆ, ಇದೇ ಆಭಾಸ!
ಆ. “ಸೀತಾರಾಮ್ ಅವರ ಮಗಳು ಜಾನಕಿ ಅಂತ ಒಂದು ಸೀರಿಯಲ್ ಬರ್ತಿದೆ. ನಿನ್ನೆ ಅದರ ಒಂದು ಎಪಿಸೋಡ್ ನೋಡಿದೆ."
- ಮೊದಲೇ ಚಳಿಗಾಲ. ‘ಮಗಳು ಜಾನಕಿ’ ಗೆ ಕೋಟು ತೊಡಿಸಿದರೆ ಒಳ್ಳೆಯದಲ್ವಾ? ಉದ್ಧರಣ (single quote) ಚಿಹ್ನೆ ಬಳಸದಿರುವುದರಿಂದ ‘ಸೀತಾರಾಮ್ ಅವರ ಮಗಳು ಜಾನಕಿ’ ಅಂತ ಸೀರಿಯಲ್ನ ಹೆಸರಿರಬಹುದು (‘ಸೀತಾರಾಮಯ್ಯಗಾರಿ ಮನವರಾಲು’, ‘ಸೀತಾರತ್ಮಂಗಾರಿ ಅಬ್ಬಾಯಿ’ ಅಂತೆಲ್ಲ ತೆಲುಗು ಸಿನಿಮಾ ಹೆಸರುಗಳಿದ್ದಂತೆ) ಅಂದುಕೊಳ್ಳುತ್ತದೆ ನಮ್ಮ ಮಿದುಳು, ಈ ವಾಕ್ಯದ ಒಂದೊಂದೇ ಪದ ಓದುತ್ತ ಅರ್ಥವನ್ನು ಕಟ್ಟುತ್ತ ಹೋದಾಗ.
ಇ. “ಗುಂಪಿಗೆ ಸಂಬಂಧಿಸದ ಬರಹಗಳನ್ನಾಗಲೀ ವಿಡಿಯೋಗಳನ್ನಾಗಲೀ ಯಾವ ಎಚ್ಚರಿಕೆ ಇಲ್ಲದೆ ತೆಗೆಯಲಾಗುವುದು."
- ‘ಯಾವುದೇ ಎಚ್ಚರಿಕೆ ಇಲ್ಲದೆ ತೆಗೆಯಲಾಗುವುದು’, ಅಥವಾ, ‘ಯಾವ ಎಚ್ಚರಿಕೆಯೂ ಇಲ್ಲದೆ ತೆಗೆಯಲಾಗುವುದು’, ಅಥವಾ, ‘ಯಾವ ಎಚ್ಚರಿಕೆಯನ್ನೂ ನೀಡದೆ ತೆಗೆಯಲಾಗುವುದು’ ಎಂದು ಬರೆದಿದ್ದರೆ ವಾಕ್ಯ ಅರ್ಥಬದ್ಧವಾಗುತ್ತಿತ್ತು. ಈಗಿರುವಂತೆ ಬರೆದರೆ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಕಳೆದುಕೊಂಡ ಪ್ರಶ್ನಾರ್ಥಕ (interrogative) ವಾಕ್ಯದಂತೆ ಕಾಣುತ್ತದೆ.
ಈ. “ಪ್ರತಿಯೊಂದು ತಪ್ಪುಗಳನ್ನು ಅದನ್ನು ಮಾಡಿದವರ ತಲೆಗೆ ಕಟ್ಟುವ ಪದ್ಧತಿ ಜಾರಿಗೆ ಬಂದಿತು."
- ಪ್ರತಿಯೊಂದು ಎಂಬ ಪದದ ಬಳಿಕ ಬಳಕೆಯಾಗುವ ನಾಮಪದವು ಏಕವಚನದಲ್ಲಿ ಇರಬೇಕು ಎಂದು ಈಹಿಂದೆ (ಕಲಿಕೆ-೮ರಲ್ಲಿ) ಕಲಿತಿದ್ದೆವು. ಈ ವಾಕ್ಯವು ‘ಪ್ರತಿಯೊಂದು ತಪ್ಪನ್ನು ಅದನ್ನು ಮಾಡಿದವರ ತಲೆಗೆ ಕಟ್ಟುವ ಪದ್ಧತಿ ಜಾರಿಗೆ ಬಂದಿತು.’ ಎಂದಾಗಬೇಕಿತ್ತು. ಸ್ವಾರಸ್ಯವೆಂದರೆ ಈ ತಪ್ಪು ಪ್ರಕಟವಾಗಿರುವುದು ವಿಶ್ವೇಶ್ವರ ಭಟ್ಟರ ‘ಇದೇ ಅಂತರಂಗ ಸುದ್ದಿ’ ಅಂಕಣಬರಹದಲ್ಲಿ, ‘ಪತ್ರಕರ್ತನ ತಪ್ಪುಗಳೆಲ್ಲ ಓದುಗರ ಮುಂದೆ ಬೆತ್ತಲು’ ಶೀರ್ಷಿಕೆಯ ಲೇಖನದಲ್ಲಿ! ಅದರಲ್ಲೇ ಮುಂದೆ ‘ಹಲವು ತಪ್ಪಿಗೆ ತಲೆಕೆಡಿಸಿಕೊಳ್ಳದವರು’ ಎಂಬ ಉಪಶೀರ್ಷಿಕೆ ಬರುತ್ತದೆ. ಅದು, ‘ಹಲವು ತಪ್ಪುಗಳಿಗೆ ತಲೆಕೆಡಿಸಿಕೊಳ್ಳದವರು’ ಎಂದಾಗಬೇಕಿತ್ತು. ‘ಹಲವು’ ಪದದ ಬಳಿಕ ಬರುವ ನಾಮಪದ ಬಹುವಚನದಲ್ಲಿರಬೇಕು.
ಉ. “ಸಂಗೀತದಲ್ಲಿ ಪದ-ಜಾವಳಿ ಎಂಬ ಹೆಸರುಗಳು ಒಟ್ಟೊಟ್ಟಿಗೆ ನೀವು ಕೇಳಿರಬಹುದು. ಕನ್ನಡದ ಹರಿದಾಸರು ಹೆಚ್ಚಿನ ಹಾಡುಗಳು ಪದ ಎನ್ನುವ ಪ್ರಕಾರದವೇ."
- ಇದನ್ನು ಬರೆದವರಿಗೆ ಪ್ರಥಮಾ ವಿಭಕ್ತಿ ವ್ಯಾಮೋಹ ಹೆಚ್ಚಾಗಿದೆ. ‘ಹೆಸರುಗಳನ್ನು’ ಎಂದು ದ್ವಿತೀಯಾ ವಿಭಕ್ತಿ ರೂಪ ಇರಬೇಕಿತ್ತು. ಮುಂದಿನ ವಾಕ್ಯದಲ್ಲಿ ಒಂದೋ ‘ಹರಿದಾಸರ’ ಎಂದು ಷಷ್ಠೀ ವಿಭಕ್ತಿ ರೂಪ ಇರಬೇಕಿತ್ತು. ಅಥವಾ, ‘ಹರಿದಾಸರು ರಚಿಸಿದ’ ಎಂದು ಬರೆಯಬೇಕಿತ್ತು.
ಬರಹ-ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.



