ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಕ್ಲಬ್ ವಠಾರದಲ್ಲಿ ನಡೆದ ಪುರುಷರ 60 ಕಿ.ಗ್ರಾಂ. ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಶಿವಾಜಿ ಫ್ರೆಂಡ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಹಲೋ ಫ್ರೆಂಡ್ಸ್ ಸಬ್ರಕಜೆ, ತೃತೀಯ ಬಹುಮಾನವನ್ನು ರಾಮ್ಧನುಷ್ ಚೂರಿಪಳ್ಳ ಹಾಗೂ ಚತುರ್ಥ ಬಹುಮಾನವನ್ನು ಆರ್ಎಂಕೆ ಸೇರಾಜೆ ತಂಡ ಪಡೆದುಕೊಂಡಿದೆ.
ಸಬ್ರಕಜೆ ತಂಡದ ಸುರ್ಜಿತ್ ಉತ್ತಮ ದಾಳಿಗಾರ, ಶಿವಾಜಿ ತಂಡದ ಉಣ್ಣಿ ಉತ್ತಮ ಹಿಡಿತಗಾರ ಹಾಗೂ ಶಿವಾಜಿ ತಂಡದ ಅಜೀಜ್ ಸವ್ಯಸಾಚಿ ಬಹುಮಾನ ಗಳಿಸಿದರು. ಸಮಾರೋಪ ಸಮಾರಂಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಉದಯ ಚೆಟ್ಟಿಯಾರ್ ಬಹುಮಾನ ವಿತರಿಸಿದರು. ಕ್ಲಬ್ಬಿನ 31ನೇ ವಾರ್ಷಿಕೋತ್ಸವ ಅಂಗವಾಗಿ ಸಾಧಕರಿಗೆ ಸಮ್ಮಾನ ಮತ್ತು ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿತ್ತು. ಸಮಾರಂಭವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಎಂ.ವಿಷ್ಣು ನಾವಡ ಉದ್ಘಾಟಿಸಿದರು.
ಕ್ಲಬ್ಬಿನ ಗೌರವಾಧ್ಯಕ್ಷ, ಸಿ.ಬಿ.ಐ. ಬೆಂಗಳೂರು ಘಟಕ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಅಭ್ಯುದಯದಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ಯುವಜನತೆ ಸಂಘಟನೆಗಳ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬರಬೇಕು. ಎಳವೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕಾದರೆ, ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಮಾತನಾಡಿ, ಶಿಸ್ತುಬದ್ಧ ಜೀವನ ನಮ್ಮನ್ನು ಜೀವನದಲ್ಲಿ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಸಂಘ ಸಂಸ್ಥೆಗಳಿಂದ ಸಾಮಾಜಿಕ ಅಭಿವೃದ್ಧಿಯ ಜತೆಗೆ ಜೀವನ ನಿರ್ವಹಣೆ ಕಲೆ ಕರಗತಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಉದಯ ಚೆಟ್ಟಿಯಾರ್ ಬಜಕೂಡ್ಲು ಶುಭಾಂಶಂಸನೆಗೈದರು. ಕ್ಲಬ್ ಅಧ್ಯಕ್ಷ ದಾಮೋದರ ಬಜಕೂಡ್ಲು, ಕುಂಞÂರಾಮ ಮಾಸ್ಟರ್ ಪಳ್ಳತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಕ್ಲಬ್ಬಿನ ಹಿರಿಯ ಸದಸ್ಯ, ಮಾಜಿ ಕಬಡ್ಡಿ ಆಟಗಾರ, ಪ್ರಸಿದ್ಧ ದೈವನರ್ತನ ಕಲಾವಿದ ಮೋಹನ ಬಜಕೂಡ್ಲು ಹಾಗೂ ಯಕ್ಷಗಾನ ಕಲಾವಿದ, ಪುಂಡು ವೇಷಧಾರಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಶಿವಾನಂದ ಶೆಟ್ಟಿ ಬಜಕೂಡ್ಲು ಅವರನ್ನು ಸಮ್ಮಾನಿಸಲಾಯಿತು. ದೀಕ್ಷಿತ್ ಶೆಟ್ಟಿ ಬಜಕೂಡ್ಲು ಸಮ್ಮಾನ ಪತ್ರ ವಾಚಿಸಿದರು.
ಸ್ವರ್ಣಲಕ್ಷ್ಮೀ ಜಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ಕ್ಲಬ್ ಕಾರ್ಯದರ್ಶಿ ಸುಜಿತ್ ರೈ ಬಜಕೂಡ್ಲು ಸ್ವಾಗತಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಬಿ. ವಂದಿಸಿದರು.


