ಕಾಸರಗೋಡು: ಜಿಲ್ಲೆಯ ನೂತನ ಪೋಲೀಸ್ ವರಿಷ್ಠರಾಗಿ ಅಧಿಕಾರ ಸ್ವೀಕರಿಸಿದ ಕನ್ನಡತಿ ಡಿ.ಶಿಲ್ಪಾ ಅವರು ಮೊದಲ ಮಹತ್ವದ ಪ್ರಕರಣವೊಂದನ್ನು ಸುಖಾಂತ್ಯಗೊಳಿಸುವ ಯತ್ನದ ಮೂಲಕ ಗಮನ ಸೆಳೆದರು. ಉಡುಪಿಯಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಕಾಸರಗೋಡಿನ ವ್ಯಕ್ತಿಯೋರ್ವರಿಗೆ ಮತ್ತೆ ಅವರ ಕುಟುಂಬ ಸದಸ್ಯರ ಸಂಪರ್ಕ ಮಾಡಿಸುವ ಎಸ್ ಪಿ ಅವರ ಯತ್ನವು ಇದೀಗ ಕರ್ತವ್ಯದ ಸ್ತುತ್ಯರ್ಹ ಸೇವೆಗೆ ಸಾಕ್ಷಿಯಾಗುತ್ತಿದೆ. ತಮ್ಮ ಕುಟುಂಬದ ಸದಸ್ಯರೊಂದಿಗೆ 25 ವರ್ಷಘಗಳ ಹಿಂದೆ ಬೇರ್ಪಟ್ಟಿದ್ದ ಅಶ್ರಫ್ ಎಂಬವರು ಬುದ್ದಿ ಸ್ಥಿಮಿತ ಕಳಕೊಂಡು ಕೊನೆಗೆ ಉಡುಪಿಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗೆ ಬಂದು ಸೇರಿದ್ದರು.
ಲಾಕ್ ಡೌನ್ ಆರಂಭಗೊಳ್ಳುತ್ತಿರುವಂತೆ ತನ್ನ ಸಂಬಂಧಿಕರನ್ನು ನೋಡಬೇಕೆಂಬ ಬಯಕೆಯನ್ನು ಹಾಸ್ಟೆಲ್ ಅಧಿಕೃತರಲ್ಲಿ ಅಶ್ರಫ್ ವ್ಯಕ್ತಪಡಿಸಿದ್ದ. ಅಶ್ರಫ್ಗೆ ತನ್ನ ಹೆಂಡತಿ ಮತ್ತು ಮಕ್ಕಳ ಹೆಸರು ತಿಳಿದಿದ್ದರೂ ಅವರು ಎಲ್ಲಿದ್ದಾರೆಂಬ ಬಗ್ಗೆ ನೆನಪಿರಲಿಲ್ಲ. ಆದರೆ ಕುಟುಂಬದವರು ಜೀವಂತವಾಗಿದ್ದಾರೆ ಎಂಬ ಉತ್ಕಟ ಭರವಸೆಯಿಂದ ಅಶ್ರಫ್ ಉಡುಪಿಯಲ್ಲಿ ವಾಸಿಸುತ್ತಿದ್ದರು. ಕಾಸರಗೋಡು ಮಲೆಯಾಳ ಭಾಷೆಯನ್ನು ಮಾತನಾಡಬಲ್ಲವನಾಗಿದ್ದು ಕಾಸರಗೋಡಿನ ಕಳನಾಡು, ತಳಂಗರೆ ತನ್ನ ಊರು ಎಂದಷ್ಟೇ ಅಸ್ಪಷ್ಟವಾಗಿ ಅಶ್ರಫ್ ನೆನಪಿಸುತ್ತಿದ್ದ. ಮಕ್ಕಳು ಲತೀಫ್, ನಾಸರ್ ಮತ್ತು ಅವರ ಪತ್ನಿ ಜಮೀಲಾ ಎಂದು ನೆನಪಿಸಿದ್ದರು. ಆದರೆ ಮಿಕ್ಕೆಲ್ಲ ಅಸ್ಪಸ್ಟವಾಗಿ ಗುರುತುಪತ್ತೆಗೆ ಸಾಧ್ಯವಾಗಿಲ್ಲ.
ತನ್ನ ಪುತ್ರ ಕಾಸರಗೋಡು ಪಟ್ಟಣದಲ್ಲಿ ಆಟೋ ಚಾಲಕ ಎಂದು ಅಶ್ರಫ್ ಒಮ್ಮೆ ತಿಳಿಸಿದ್ದರೆಂದು ಹಾಸ್ಟೆಲ್ ಅಧಿಕೃತರು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮುದ್ರಿಕೆಯೊಂದು ಹರಿದಾಡಿದ್ದು ಬಳಿಕ ಅದು ವೈರಲ್ ಆಯಿತು. ಈ ಬಗ್ಗೆ ಮಾಹಿತಿ ತಿಳಿದ ಪೋಲೀಸ್ ವರಿಷ್ಠೆ ಡಿ.ಶಿಲ್ಪಾ ಅವರು ಅಶ್ರಫ್ ಅವರನ್ನು ವಾಪಸ್ ಕರೆತರಲು ನಿರ್ಧರಿಸಿದರು. ಬಳಿಕ ಅಶ್ರಫ್ ಅವರನ್ನು ಡಿವೈಎಸ್ಪಿ ಬಾಲಕೃಷ್ಣನ್ ಮತ್ತು ಮೆಲ್ಪರಂಬ ಠಾಣಾ ಸಿಐ ಬೆನ್ನಿಲಾಲ್ ಅವರ ನೇತೃತ್ವದಲ್ಲಿ ಉಡುಪಿಯಿಂದ ಆಂಬ್ಯುಲೆನ್ಸ್ ಮೂಲಕ ದೇಳಿ ಎಚ್ಎನ್ಸಿ ಆಸ್ಪತ್ರೆಗೆ ಕರೆತರಲಾಗಿದೆ. ಪ್ರಸ್ತುತ ಕೋವಿಡ್ ಕಾರಣ ಕ್ವಾರಂಟೈನ್ ಗೊಳಪಡಿಸಲಾಗಿದೆ.
ಕೋವಿಡ್ ಪರೀಕ್ಷೆ ನಡೆಸಿದ ಬಳಿಕ ಅಶ್ರಫ್ ನ ಸಂಬಂಧಿಕರನ್ನು ಪತ್ತೆಹಚ್ಚಲಾಗುವುದು. ಅಲ್ಲಿಯ ವರೆಗೆ ಪರವನಡ್ಕದ ಸರ್ಕಾರಿ ಅನಾಥಾಶ್ರಮದಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗುವುದೆಂದು ಡಿ.ಶಿಲ್ಪಾ ತಿಳಿಸಿದ್ದಾರೆ. ಅಶ್ರಫ್ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ಸಿಐ ಅಥವಾ ಮೊ.ಸಂ. 9497947276.ಸಂಪರ್ಕಿಸಲು ತಿಳಿಸಲಾಗಿದೆ.


