ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದ 2019-20 ಶೈಕ್ಷಣಿಕ ವರ್ಷದ ಪದವಿ ಫಲಿತಾಂಶ ಪ್ರಕಟವಾಗಿದ್ದು, ಕಾಸರಗೋಡು ಸರ್ಕಾರಿ ಕಾಲೇಜು ವಿವಿಧ ವಿಷಯಗಳಲ್ಲಿ ಒಟ್ಟು 10 ರ್ಯಾಂಕ್ ಗಳನ್ನು ಪಡೆದಿದ್ದು, ಈ ಮೂಲಕ ಕಾಲೇಜಿಗೆ ಉತ್ತಮ ಹೆಸರು ಪ್ರಾಪ್ತಿಯಾಗಿದೆ.
ಬಿ.ಎ ಕನ್ನಡ ಪ್ರಥಮ ರ್ಯಾಂಕ್ ಗಿರೀಶ್ ಕೃಷ್ಣ ಕೆ, ದ್ವಿತೀಯ ರ್ಯಾಂಕ್ ಕೃತಿ ಸಿ. ಎಚ್, ಬಿ.ಎ ಅರಬಿಕ್ ಎರಡನೆಯ ರ್ಯಾಂಕ್ ಖದೀಜತ್ ಮಶುನ, ದ್ವಿತೀಯ ರ್ಯಾಂಕ್ ಆಯಿಷತ್ ಶಿಫಾನ, ಬಿ.ಎ ಇತಿಹಾಸದಲ್ಲಿ ದ್ವಿತೀಯ ರ್ಯಾಂಕ್ ಆತ್ಮಜ ಪಿ.ವಿನ್, ಬಿ.ಎಸ್.ಸಿ ಸಸ್ಯಶಾಸ್ತ್ರದಲ್ಲಿ ದ್ವಿತೀಯ ರ್ಯಾಂಕ್ ಆದ್ಯಾ ರಾಂ ಕೆ, ಭೂಗರ್ಭಶಾಸ್ತ್ರ ವಿಷಯದಲ್ಲಿ ಪ್ರಥಮ ಶ್ರೀಮೋಳ್ ಎಸ್ ನಾಯರ್, ತೃತೀಯ ರ್ಯಾಂಕ್ ವಿಷ್ಣುರಾಜ್ ಕೆ, ಪ್ರಾಣಿಶಾಸ್ತ್ರ ವಿಷಯದಲ್ಲಿ ದ್ವಿತೀಯ ರ್ಯಾಂಕನ್ನು ನೂರ್ ಜಹಾನ್ ಎ. ಯು ಹಾಗೂ ಬಿ.ಎಸ್ಸಿ ಕಂಪ್ಯೂಟರ್ ಸಯನ್ಸ್ ನಲ್ಲಿ ಮರಿಯಾಮ್ ಇರ್ಶಾದ ಮೂರನೆಯ ರ್ಯಾಂಕ್ ಪಡೆದಿದ್ದಾರೆ.
ಸುಮಾರು 1600 ರಷ್ಟು ವಿದ್ಯಾರ್ಥಿಗಳು ಕಲಿಯುತ್ತಿರುವ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ, 14 ಪದವಿ ವಿಷಯಗಳು, 7 ಸ್ನಾತಕೋತ್ತರ ಪದವಿ ಹಾಗೂ 7 ಸಂಶೋಧನ ವಿಭಾಗಗಳು ಇವೆ. ನೂರರಷ್ಟು ಶಿಕ್ಷಕರು, 50ರಷ್ಟು ಶಿಕ್ಷಕೇತರ ಸಿಬ್ಬಂದಿಗಳು ದುಡಿಯುತ್ತಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶೈಕ್ಷಣಿಕ ಶ್ರೇಣಿಕರಣ ವ್ಯವಸ್ಥೆಯಾದ ನ್ಯಾಶನಲ್ ಇನ್ಸ್ ಟಿಟ್ಯೂಟ್ ರ್ಯಾಂಕಿಂಗ್ ಫ್ರೇಂ ವರ್ಕ್ ನಲ್ಲಿ, ದೇಶದಲ್ಲಿ 83 ನೆಯ ಸ್ಥಾನವನ್ನು ಕಾಸರಗೋಡು ಸರ್ಕಾರಿ ಕಾಲೇಜು ಪಡೆದುಕೊಂಡಿದೆ. ನ್ಯಾಕ್ ಮೂಲಕ ಎ ಗ್ರೇಡ್ ನ್ನು ಪಡೆದಿರುವ ಈ ಕಾಲೇಜು ಈಗ ಲಭಿಸಿದ ಅಂಗೀಕಾರದ ಮೂಲಕ ಜಿಲ್ಲೆಗೆ ಮತ್ತೊಮ್ಮೆ ಹೆಮ್ಮೆಯನ್ನು ತಂದಿತ್ತಿದೆ.
2019-2020 ಕೇರಳ ಸರ್ಕಾರವು ಎರಡು ಕೋಟಿಯಷ್ಟು ಹಣವನ್ನು ಕಾಲೇಜಿನ ಅಭಿವೃದ್ಧಿಗಾಗಿ ಮಂಜೂರು ಮಾಡಿದ್ದು, ಇದನ್ನು ಫಲಪ್ರದವಾಗಿ ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕೇರಳ ಸರ್ಕಾರದ ಸೆಂಟರ್ ಆಫ್ ಎಕ್ಸಲೆನ್ಸ್ ಯೋಜನೆಯಡಿ ಲಭಿಸಿದ ಐದು ಕೋಟಿ ರೂಪಾಯಿಯಲ್ಲಿ ಒಂದೂವರೆ ಕೋಟಿ ಯನ್ನು ಕಾಲೇಜಿನ ದುರಸ್ತಿಕಾರ್ಯಗಳು, ಕಟ್ಟಡ ನಿರ್ಮಾಣ, ನೂತನ ಲ್ಯಾಬ್ ಸಾಮಗ್ರಿಗಳ ಖರೀದಿ ಇತ್ಯಾದಿಗಳಿಗೆ ವಿನಿಯೋಗಿಸಲಾಗಿದೆ. ಮೂರೂವರೆ ಕೋಟಿ ಖರ್ಚು ಮಾಡಿ ನಿರ್ಮಿಸುತ್ತಿರುವ 'ಸ್ನಾತಕೋತ್ತರ ಅಕಾಡೆಮಿಕ್ ಬ್ಲಾಕ್' ಕಟ್ಟಡದ ಕೆಲಸಕಾರ್ಯಗಳು ಅಂತಿಮ ಹಂತದಲ್ಲಿದೆ.
ರೂಸ ಮೊದಲ ಕಂತಿನ ರೂಪದಲ್ಲಿ ನೀಡಿದ ಎರಡು ಕೋಟಿ ರೂಪಾಯಿಗಳನ್ನು ಕಾಲೇಜಿನ ಹಲವು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ವಿವಿಧ ಸಯನ್ಸ್ ಲ್ಯಾಬ್ಗಳನ್ನು ಆಧುನಿಕರಣಗೊಳಿಸಲಾಗಿದೆ. ತೆರೆದ ಬಯಲು ಮಂದಿರ, ವಿದ್ಯಾರ್ಥಿಗಳಿಗಾಗಿ ಶುಚಿಕೊಠಡಿ, ಗ್ರೀನ್ ಹೌಸ್ ಈ ಮುಂತಾದ ಕಾರ್ಯಗಳಿಗೆ ರೂಸ ನೀಡಿದ ಧನವನ್ನು ವಿನಿಯೋಗಿಸಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಲಭ್ಯವಾದ ಎರಡು ಕೋಟಿ ರೂಪಾಯಿಗಳನ್ನು ಉಪಯೋಗಿಸಿ ನಿರ್ಮಿಸಲಾಗುತ್ತಿರುವ ಕ್ಯಾಂಟೀನ್, ಲೇಡೀಸ್ ಅಮಿನಿಟಿ ಸೆಂಟರ್ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ.
ಕಿಫ್ ಬಿ ಮೂಲಕ ಕಾಲೇಜಿನ ಸಮಗ್ರ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಅಂಗೀಕರಿಸಲ್ಪಟ್ಟಿದ್ದು, ಅದರ ಮೊದಲ ಭಾಗವಾಗಿ ನೂತನ ಅಕಾಡೆಮಿಕ್ ಬ್ಲಾಕ್ ನಿರ್ಮಾಣಕ್ಕೆ 8 ಕೋಟಿ ರೂಪಾಯಿಗಳ ಅನುದಾನಕ್ಕೆ ಚಾಲನೆ ದೊರಕಿದೆ.
ಸ್ನಾತಕೋತ್ತರ ಅಕಾಡೆಮಿಕ್ ಬ್ಲಾಕ್, ರೂಸ ಯೋಜನೆಗಳು, ಕಾಲೇಜು ಕ್ಯಾಂಟೀನ್, ಲೇಡಿಸ್ ಅಮಿನಿಟಿ ಸೆಂಟರ್ ಈ ಮುಂತಾದುವು ಈ ಶೈಕ್ಷಣಿಕ ವರುಷದಲ್ಲೇ ಉದ್ಘಾಟನೆಯಾಗಬಹುದೆಂಬ ನಿರೀಕ್ಷೆಯಿರಿಸಲಾಗಿದೆ. ಕಾಸರಗೋಡು ಜಿಲ್ಲೆಯ ಪ್ರಮುಖ ಕಾಲೇಜು ಎಂಬ ನೆಲೆಯಲ್ಲಿ ಎಂಎಸ್ಸಿ ಸಂಖ್ಯಾಶಾಸ್ತ್ರ, ಎಂ.ಎ ಚರಿತ್ರೆ, ಎಂಎಸ್ಸಿ ಪ್ರಾಣಿಶಾಸ್ತ್ರ, ಎಂಎಸ್ಸಿ ಭೌತಶಾಸ್ತ್ರ, ಎಂ.ಎಸ್ಸಿ ಸಸ್ಯಶಾಸ್ತ್ರ, ಎಂ.ಎ ಮಲೆಯಾಳ, ಬಿ.ಎ ರಾಜ್ಯಶಾಸ್ತ್ರ ಇತ್ಯಾದಿ ನೂತನ ಎಂಟು ಕೋರ್ಸುಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ 2019 ರಲ್ಲಿ ಕಾರ್ಯಸೂಚಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಕೋವಿಡ್ ಕಾರಣದಿಂದ ಪ್ರಸ್ತುತ ಇಂಟರ್ ನೆಟ್ ಸೌಲಭ್ಯಗಳನ್ನುಪಯೋಗಿಸಿಕೊಂಡು ಓನ್ಲೈನ್ ತರಗತಿಗಳು ನಡೆಯುತ್ತಿವೆ. ಕೇರಳ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯಗಳ ಆದೇಶಗಳನ್ನು ಈ ಹಿನ್ನೆಲೆಯಲ್ಲಿ ಪಾಲಿಸಲಾಗುತ್ತಿದೆ.
ರಾಜ್ಯ ಶಿಕ್ಷಣ ಸಚಿವ ಡಾ.ಕೆಟಿ ಜಲೀಲ್ ಅವರ ಆದೇಶ ಪ್ರಕಾರ, ಕಾಲೇಜು ಶಿಕ್ಷಣ ಇಲಾಖೆಯು ಕೇಂದ್ರೀಕೃತ ಲೇನಿರ್ಂಗ್ ಮ್ಯಾನೆಂಜ್ ಮೆಂಟ್ ಸಿಸ್ಟಮ್ ನ್ನು ಈಗ ಸಿದ್ಧಪಡಿಸಿದೆ. ಇದನ್ನು ವಿದ್ಯಾರ್ಥಿಗಳು ಫಲಪ್ರದವಾಗಿ ಉಪಯೋಗಿಸಲು ಅನುಕೂಲವಾಗುವಂತೆ ಪೂರಕ ವ್ಯವಸ್ಥೆಗಳನ್ನು ಕಾಲೇಜು ಆಡಳಿತ ಕಲ್ಪಿಸಿದೆ.
ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ಡಾ. ಎ.ಎಲ್ ಅನಂತಪದ್ಮನಾಭ, ರಕ್ಷಕ ಶಿಕ್ಷಕ ಸಮಿತಿ ಉಪಾಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್, ಕಾಲೇಜು ಸೀನಿಯರ್ ಸುಪರಿಡೆಂಟೆಂಟ್ ಸಜಿತ್ ಧನಪಾಲ್ ಭಾಗವಹಿಸಿ ಮಾಹಿತಿ ನೀಡಿದರು.


