HEALTH TIPS

ದುರಸ್ತಿ ಕಾಣದ ಕುಂಟಾರು-ಅತ್ತನಾಡಿ ರಸ್ತೆ; ಹಣ ಮಂಜೂರಾದರೂ ಕಾಮಗಾರಿ ನಡೆಯಲಿಲ್ಲ

      ಮುಳ್ಳೇರಿಯ: ಮಳೆಗಾಲ ಬಂದರೂ ಕುಂಟಾರು-ಅತ್ತನಾಡಿ ರಸ್ತೆಯ ಮರೀಚಿಕೆಯಾಗಿಯೇ ಉಳಿದಿದೆ. ತೀರಾ ಹದಗೆಟ್ಟಿರುವ ಈ ರಸ್ತೆಯ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿ ನಿಧಿಯು ಮಂಜೂರಾಗಿದ್ದರೂ ಕಾಮಗಾರಿ ನಡೆಸದೆ ಕರಾರುದಾರ ತೆಪ್ಪಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
       ಕಾಸರಗೋಡು-ಸುಳ್ಯ ರಾಜ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯು ಹಲವು ವರ್ಷಗಳಿಂದ ದುರಸ್ತಿ ಕಾಣದೆ ವಾಹನ ಸಂಚಾರ ಸಮಸ್ಯೆಯಾಗುತ್ತಲೇ ಇದೆ. ಕಾರಡ್ಕ ಗ್ರಾಮ ಪಂಚಾಯಿತಿಗೆ ಸೇರಿದ ಕುಂಟಾರಿನಿಂದ ಅತ್ತನಾಡಿಗೆ ಸಾಗಲು ಅತೀ ನಿಕಟವಾದ ಈ ರಸ್ತೆಯ ಒಂದು ಕಿ.ಮೀ. ಭಾಗವನ್ನು ಡಾಮರೀಕರಿಸಿ ಕೆಲವು ವರ್ಷಗಳು ಕಳೆಯಿತು. ಪರಿಣಾಮವಾಗಿ ಬಹುಪಾಲು ರಸ್ತೆಯು ಹೊಂಡಮಯವಾಗಿಯೇ ಉಳಿದು ವಾಹನಗಳು ಸಂಚರಿಸದ ಸ್ಥಿತಿ ಎದುರಾಗಿದೆ. ನಡುಬಯಲು ಪ್ರದೇಶದ ಮೂಲಕ ಹಾದು ಹೋಗುವ ಈ ರಸ್ತೆಯ ಅಲ್ಲಲ್ಲಿ ವಾಹನ ಚಾಲನೆಗೆ ಅಸಾಧ್ಯವಾಗುವ ರೀತಿಯಲ್ಲಿ ಕಿತ್ತುಹೋಗಿದೆ. ದೊಡ್ಡ ಹಳ್ಳಗಳೇ ನಿರ್ಮಾಣವಾಗಿವೆ. ಇದರ ದುರಸ್ತಿಗಾಗಿ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದ್ದರೂ ದುರಸ್ತಿ ಮರೀಚಿಕೆಯಾಗಿದೆ.
      ಸ್ಥಳೀಯರ ಬೇಡಿಕೆಯ ಪರಿಣಾಮವಾಗಿ ಈ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ನಿಧಿಯನ್ನು ವಿನಿಯೋಗಿಸಿ ದುರಸ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮಾರ್ಚ್ ಮುಂಚಿತವಾಗಿ ಕಾಮಗಾರಿ ನಡೆಸಬೇಕಾಗಿತ್ತು. ಆದರೆ ಜೂನ್ ತಿಂಗಳು ಬಂದರೂ ಹಣ ಮಂಜೂರಾದ  ರಸ್ತೆಯ ದುರಸ್ತಿಯನ್ನು ಮಾಡದೆ ಗುತ್ತಿಗೆ ಪಡೆದ ವ್ಯಕ್ತಿ ತೆಪ್ಪಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹದಗೆಟ್ಟ ಸ್ಥಳದಲ್ಲಿ ಕಾಂಕ್ರೀಟು ಹಾಕುವುದಾಗಿ ಸಮಜಾಯಿಕೆಯ ಉತ್ತರ ನೀಡುತ್ತಿರುವುದಾಗಿ ಹೇಳಲಾಗಿದೆ. ಈಗ ವಿಳಂಬಕ್ಕೆ ಕೊರೊನಾ ರೋಗವನ್ನು ಕಾರಣವಾಗಿಸಲಾಗುತ್ತಿದೆ. ಒಂದಷ್ಟು ಜಲ್ಲಿಯನ್ನು ರಸ್ತೆಯಲ್ಲಿ ರಾಶಿ ಹಾಕಿ ಹಲವು ತಿಂಗಳುಗಳೇ ಕಳೆಯಿತು. ಇದರಿಂದಾಗಿ ವಾಹನ ಸಂಚಾರವೂ ಅಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಕಾಲ್ನಡಿಗೆಯೂ ಕಷ್ಟವಾಗಿದೆ. ಶಾಲಾ ವಾಹನಗಳು ಸಹಿತ ಸಾಕಷ್ಟು ವಾಹನಗಳು ಈ ಮೂಲಕ ಸಾಗುತ್ತಿವೆ. ಅಟೋ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಾಗಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ಹಳ್ಳವೇ ನಿರ್ಮಾಣವಾಗುತ್ತಿರುವ ಕಾರಣ ಇದನ್ನು ದಾಟಿ ಸಾಗುವುದೂ ಸಾಹಸವೇ ಆಗಿದೆ.
        ಈ ರಸ್ತೆಯ ಹದಗೆಡಲು ಪ್ರಮುಖ ಕಾರಣ ಸರಿಯಾದ ಚರಂಡಿ ನಿರ್ಮಾಣ ನಡೆಸದಿರುವುದು. ಪರಿಣಾಮವಾಗಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುವ ಕಾರಣ ಬೇಗನೇ ರಸ್ತೆಯು ಕೆಟ್ಟು ಹೋಗುತ್ತಿದೆ. ರಸ್ತೆ ಕಾಮಗಾರಿ ನಡೆಸಿದವರು ಸಾಧಾರಣವಾಗಿ ಚರಂಡಿಯನ್ನು ನಿರ್ಮಿಸಬೇಕಿದ್ದರೂ ಅದನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ರಸ್ತೆ ವರ್ಷಗಳಲ್ಲಿಯೇ ಹೊಂಡಾಗುಂಡಿಯಾಗುತ್ತಿದೆ. ಕೊಣಾಜೆ ನಂದಾರ ಪದವು-ಪಾರಶಾಲಾ ಮಲೆನಾಡು ಹೆದ್ದಾರಿಯನ್ನು ಅತ್ತನಾಡಿಯಲ್ಲಿ ಸಂಪರ್ಕಿಸುವ ಕಾರಣ ಈ ರಸ್ತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ.
    ಹಣ ಮಂಜೂರಾದರೂ ಈ ರೀತಿ ವಂಚಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು  ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೀವ್ರ ಪ್ರತಿಭಟನೆ ನಡೆಸಲು ಸ್ಥಳೀಯರು ಸಿದ್ಧತೆ ನಡೆಸಿದ್ದಾರೆ. ಜನರ ಸಮಸ್ಯೆಯನ್ನು ಮನಗಂಡು ಕೂಡಲೇ ದುರಸ್ತಿಗೆ ಸಂಬಂಧಪಟ್ಟ ಅಧಿಕೃತರು ತುರ್ತು ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
          ಅಭಿಮತ:
   1)ಜಿಲ್ಲಾ ಪಂಚಾಯತಿ ಅನುಮೋದಿಸಿದ 7.90 ಲಕ್ಷ ರೂ ಹಾಗೂ ಗ್ರಾ.ಪಂ. ಮೂಲಕ ಲಭ್ಯವಾದ 2.5 ಲಕ್ಷ ರೂ.ಗಳನ್ನು ಬಳಸಿ ಈ ರಸ್ತೆ ದುರಸ್ಥಿಗೆ ಚಾಲನೆ ನೀಡಲಾಗಿತ್ತಾದರೂ ಹಠಾತ್ ಒಂಟಾದ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ಮುಂದುವರಿಸಲಾಗಿಲ್ಲ. ಪ್ರಸ್ತುತ ಕಾರ್ಮಿಕರೂ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಳೆಗಾಲ ಪೂರ್ಣಗೊಂಡ ಬಳಿಕ ಕಾಮಗಾರಿ ಪೂರ್ತಿಗೊಳಿಸಲಾಗುವುದು. ಪ್ರಸ್ತುತ ಈ ರಸ್ತೆಯ ಮೂಲಕ ಸುಗಮ ಸಂಚಾರಕ್ಕಾಗಿ ದುರಸ್ಥಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
               -ಮೊಹಮ್ಮದ್
                 ಸದಸ್ಯರು ಕಾರಡ್ಕ ಗ್ರಾ.ಪಂ.
............................................................................................................................................................................................
    2)ಕಾಮಗಾರಿ ಕೈಗೆತ್ತಿಕೊಳ್ಳುವ ಹಂತದಲ್ಲಿ ಲಾಕ್ ಡೌನ್ ಹೇರಲ್ಪಟ್ಟ ಕಾರಣ ಕಾಮಗಾರಿ ನಡೆಸಲಾಗಿಲ್ಲ. ಇದೀಗ ಮಳೆಗಾಲ ಆರಂಭಗೊಂಡಿರುವುದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿರುವಂತೆ ಕಾಮಗಾರಿ ಪುನರ್ ಆರಂಭಿಸಲಾಗುವುದು. ತಾತ್ಕಾಲಿಕ ಸುಗಮ ಸಂಚಾರಕ್ಕೆ ದುರಸ್ಥಿ ನಡೆಸಲಾಗುವುದು.
                   -ಬಾತಿಶಾ
                  ರಸ್ತೆ ಕಾಮಗಾರಿ ಜವಾಬ್ದಾರಿ ಹೊತ್ತ ಗುತ್ತಿಗೆದಾರ.
               

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries