ನವದೆಹಲಿ: ಆಸಿಯಾನ್ ರಾಷ್ಟ್ರಗಳ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಭಾರತ-ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ (ಐಪಿಒಐ) ಮತ್ತು ಇಂಡೋ-ಪೆಸಿಫಿಕ್ಗಾಗಿ ಆಸಿಯಾನ್ನ ಔಟ್ಲುಕ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅವರ ಹಂಚಿಕೆಯ ದೃಷ್ಟಿ ಮತ್ತು ಪರಸ್ಪರ ಸಹಕಾರದ ಚೌಕಟ್ಟಾಗಿದೆ ಎಂದರು.
ಭಾರತ-ಆಸಿಯಾನ್ ಸಹಭಾಗಿತ್ವ ಮುಂದಿನ ವರ್ಷಕ್ಕೆ 30 ವರ್ಷಗಳನ್ನು ಪೂರೈಸುತ್ತಿದ್ದು, ಮಹತ್ವದ ಮೈಲಿಗಲ್ಲನ್ನು 'ಆಸಿಯಾನ್-ಭಾರತ ಸ್ನೇಹ ವರ್ಷ' ಎಂದು ಆಚರಿಸಲಾಗುವುದು. ಕೋವಿಡ್ ಸಂಕಷ್ಟ ಸಮಯದಲ್ಲಿ ಪರಸ್ಪರ ಸಹಕಾರ ಭಾರತ-ಆಸಿಯಾನ್ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲವರ್ಧನೆ ಮಾಡುತ್ತದೆ ಎಂದರು.
ಕೋವಿಡ್ ಕಾರಣದಿಂದಾಗಿ, ನಾವೆಲ್ಲರೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು, ಈ ಸವಾಲಿನ ಸಮಯವು ಭಾರತ-ಆಸಿಯಾನ್ ಸ್ನೇಹದ ಪರೀಕ್ಷೆಯಾಗಿತ್ತು. ಕೋವಿಡ್ ಯುಗದಲ್ಲಿ ನಮ್ಮ ಪರಸ್ಪರ ಸಹಕಾರವು ಭವಿಷ್ಯದಲ್ಲಿ ನಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ. ನಮ್ಮ ಜನರೊಂದಿಗೆ ಸೌಹಾರ್ದತೆಯ ನೆಲೆಯನ್ನು ರೂಪಿಸುತ್ತದೆ ಎಂದರು.

