ಬದಿಯಡ್ಕ: ಸೇವೆಯ ಮೂಲಕ ಜನರಲ್ಲಿ ದೇವರನ್ನು ಕಾಣುವ ಬಲು ಅಪರೂಪದ ವ್ಯಕ್ತಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಡೆಯಲು ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಕಣ್ಣೂರು ಜಿಲ್ಲಾ ವಿಶೇಷ ತನಿಖಾ ದಳದ ಡಿವೈಎಸ್ಪಿ ಟಿ.ಪಿ. ಪ್ರೇಮರಾಜ್ ಅಭಿಪ್ರಾಯಪಟ್ಟರು.
ಮಂಗಳವಾರ ಕಿಳಿಂಗಾರು ಸಾಯಿಮಂದಿರದಲ್ಲಿ ಭಗವಾನ್ ಸತ್ಯಸಾಯಿ ಬಾಬಾ ಅವರ 96ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಬಡಜನತೆಗೆ ಕೊಡಮಾಡುವ ಮನೆಗಳಲ್ಲಿ 265ನೇ ಮನೆಯ ಕೀಲಿಕೈಯನ್ನು ಚಂದ್ರಶೇಖರ ಪೆರಡಾಲ ಅವರಿಗೆ ಹಾಗೂ ಸ್ವ ಉದ್ಯೋಗಕ್ಕಾಗಿ ಮೂರುಮಂದಿಗೆ ಹೊಲಿಗೆ ಯಂತ್ರವನ್ನು ನೀಡಲಾಯಿತು. ನಂತರ ಅವರು ಮಾತನಾಡಿ ಎಲ್ಲಾ ವಲಯಗಳಲ್ಲೂ ಪರೋಪಕಾರೀ ಮನೋಭಾವದಿಂದ ಸಮಾಜಕ್ಕೆ ಸರ್ವಸ್ವವನ್ನೂ ತ್ಯಾಗಮಾಡಿ ಜನರಿಗೆ ಅತೀ ಹತ್ತಿರವಾದ ಸಾಯಿರಾಂ ಭಟ್ ಅವರು ನಾಡಿಗೇ ಆದರ್ಶಪ್ರಾಯವಾಗಿದ್ದಾರೆ. ಇಳಿವಯಸ್ಸಿನಲ್ಲೂ ಅವರ ಪರೋಪಕಾರೀ ಮನೋಭಾವ ಕುಗ್ಗದೇ ಇನ್ನೂ ಜೀವಂತವಾಗಿದ್ದು, ಜನಸೇವೆಯೇ ಜನಾರ್ದನ ಸೇವೆಯೆಂಬ ಕುಟುಂಬವನ್ನೇ ನಾಡಿನ ಜನತೆಗೆ ನೀಡಿದ್ದಾರೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಕಿಳಿಂಗಾರು ಸುಬ್ರಾಯ ಭಟ್ ಸಭೆÉಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ., ಉಪಾಧ್ಯಕ್ಷ ಅಬ್ಬಾಸ್ ಎಂ., ಬದಿಯಡ್ಕ ಠಾಣಾಧಿಕಾರಿ ಕೆ.ಪಿ. ವಿನೋದ್ ಕುಮಾರ್, ಜನಪ್ರತಿನಿಧಿಗಳಾದ ಸೌಮ್ಯಾ ಮಹೇಶ್, ಡಿ.ಶಂಕರ, ಅಶ್ವಿನಿ ನೀರ್ಚಾಲು, ಮಹೇಶ್ ವಳಕ್ಕುಂಜ, ಬಾಲಕೃಷ್ಣ ಶೆಟ್ಟಿ ಕಡಾರು, ಈಶ್ವರ ಮಾಸ್ತರ್ ಪೆರಡಾಲ, ಜಯಶ್ರೀ ಮತ್ತಿತರರು ಪಾಲ್ಗೊಂಡಿದ್ದರು. ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ, ಸತ್ಯಸಾಯಿ ಬಳಗದ ಉಪ್ಪಳ ಘಟಕದ ರಾಮಚಂದ್ರ ವಂದಿಸಿದರು. ಸಾಯಿಭಕ್ತರ ಭಜನಾ ಸೇವೆ ಜರಗಿತು. ಮಧ್ಯಾಹ್ನ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.




