ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮೌಸಮ್ ನೂರ್ ಹಾಗೂ ಸಂಸದ ಜವಹರ್ ಸಿರ್ಕಾರ್ ಅವರು ಸೋಮವಾರ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡನೆ ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸದನದ ಕುರಿತು ಮಾಡಿದ ಕಾಮೆಂಟ್ಗಳಿಗಾಗಿ ರಂಜನ್ ಗೊಗೊಯ್ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡನೆ ಮಾಡಿಸಲಾಗಿದೆ. ಮಾತ್ರವಲ್ಲದೆ ವಿಭಿನ್ನ ಪಕ್ಷಗಳ ಇನ್ನೂ ಅನೇಕ ಸಂಸದರು ಇದೇ ನಿಲುವಳಿ ಮಂಡಿಸುವ ನಿರೀಕ್ಷೆಯಿದೆ. ಸಂಸತ್ನಲ್ಲಿನ ಗೊಗೊಯ್ ಅವರ ಹಾಜರಾತಿ ಬಗ್ಗೆ ಕೇಳಿದ ಪ್ರಶ್ನೆಗೆ ಡಿಸೆಂಬರ್ 9 ರಂದು ಎನ್ಡಿಟಿವಿಯೊಂದಿಗೆ ಪ್ರತ್ಯೇಕವಾಗಿ ನ್ಯಾಯಮೂರ್ತಿ ಗೊಗೊಯ್ ಉತ್ತರಿಸಿದ್ದರು. "ನಾನು ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಮಾತನಾಡಬೇಕು ಎಂದು ನನಗೆ ಅನಿಸಿದಾಗ ನಾನು ರಾಜ್ಯಸಭೆಗೆ ಹೋಗುತ್ತೇನೆ. ನಾನು ನಾಮನಿರ್ದೇಶಿತ ಸದಸ್ಯ, ಯಾವುದೇ ಪಕ್ಷದ ವಿಪ್ಗೆ ಅಧೀನಕ್ಕೆ ಒಳಪಟ್ಟಿಲ್ಲ" ಎಂದಿದ್ದರು. ಜೊತೆಗೆ ರಾಜ್ಯಸಭೆಯಲ್ಲಿ ಸಾಮಾಜಿಕ ಅಂತರದ ಕೊರತೆ ಇದೆ. ಸೀಟುಗಳ ವ್ಯವಸ್ಥೆ ತಮಗೆ ತೃಪ್ತಿಯಿಲ್ಲ ಎಂದು ಕೋವಿಡ್ ನಿರ್ಬಂಧಗಳ ಬಗ್ಗೆ ಪ್ರಸ್ತಾಪಿಸಿದ್ದರು. ಹೀಗಾಗಿ ತಾವು ರಾಜ್ಯಸಭೆಗೆ ಹಾಜರಾಗದ ಬಗ್ಗೆ ಹೇಳಿದ್ದರು.ಮೇಲ್ಮನೆಗೆ ಹಾಜರಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೀಡಿದ ಈ ಹೇಳಿಕೆ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡನೆ ಮಾಡಲಾಗಿದೆ. ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಭಾರತದ ಮಾಜಿ ಸಿಜೆಐ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ಅವರ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನಲ್ಲಿ ವಿಶೇಷ ಹಕ್ಕು ನೋಟಿಸ್ಗೆ ಕಾರಣವಾಗಿವೆ."ನ್ಯಾಯಮೂರ್ತಿ ಗೊಗೊಯ್ ಅವರ ಹೇಳಿಕೆಗಳು ರಾಜ್ಯಸಭೆಯನ್ನು ಅವಹೇಳನ ಮಾಡಿವೆ. ಸದನದ ಘನತೆಗೆ ಧಕ್ಕೆ ತರುತ್ತದೆ ಮತ್ತು ವಿಶೇಷ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ನೋಟೀಸ್ ಸಲ್ಲಿಸಿದೆ. ರಂಜನ್ ಗೊಗೊಯ್ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಈ ನೋಟಿಸ್ ಪ್ರಸ್ತಾಪಿಸಿದೆ."ಒಂದು ಅಥವಾ ಎರಡು ಸೆಷನ್ಗಳಿಗೆ ಕೋವಿಡ್ ಕಾರಣದಿಂದಾಗಿ (ವೈದ್ಯಕೀಯ ಸಲಹೆಯ ಆಧಾರದ ಮೇಲೆ) ನಾನು ಅಧಿವೇಶನಕ್ಕೆ ಹಾಜರಾಗಿಲ್ಲ. ಇವತ್ತಿಗೂ ನಾನು ಈ ವಿಚಾರವಾಗಿ ಆರಾಮವಾಗಿ ಇಲ್ಲ ಎನ್ನುತ್ತೇನೆ. ಸಾರ್ವಜನಿಕ ಅಂತರದ ನಿಯಮಗಳನ್ನು ಜಾರಿಗೊಳಿಸಲಾಗಿದೆ, ಆದರೆ ಅವುಗಳನ್ನು ಪಾಲಿಸಲಾಗುತ್ತಿಲ್ಲ. ಕುಳಿತುಕೊಳ್ಳಲು ಮಾಡಲಾಗಿರುವ ವ್ಯವಸ್ಥೆ ನನಗೆ ಆರಾಮದಾಯಕವೆನಿಸುತ್ತಿಲ್ಲ. ಇದನ್ನು ಒತ್ತು ಹೇಳುವುದಾದರೆ ನಾನು ರಾಜ್ಯಸಭಾಕ್ಕೆ ನನಗೆ ಅನಿಸಿದಾಗ ಹೋಗುತ್ತೇನೆ" ಎಂದು ಗೊಗೊಯ್ ಹೇಳಿದ್ದರು.
ಮೌಸಮ್ ನೂರ್ ಮತ್ತು ಜವಹರ್ ಸಿರ್ಕಾರ್ ಅವರು ಮಂಡಿಸಿರುವ ಹಕ್ಕುಚ್ಯುತಿ ನಿಲುವಳಿಯಲ್ಲಿ ರಂಜನ್ ಗೊಗೊಯ್ ಅವರು ನೀಡಿರುವ ಹೇಳಿಕೆಗಳು ಜವಾಬ್ದಾರಿಗಳ ಉಲ್ಲಂಘನೆಯಾಗಿದೆ ಮತ್ತು ಸದನದ ಘನತೆಯನ್ನು ಕಡೆಗಣಿಸಿದಂತೆ ಆಗಿದೆ ಎಂದು ಆರೋಪಿಸಲಾಗಿದೆ. 2020ರ ಮಾರ್ಚ್ನಿಂದ ನಡೆದ ಸದನದ ಎಲ್ಲ ಕಲಾಪಗಳಲ್ಲಿ ಗೊಗೊಯ್ ಅವರ ಹಾಜರಾತಿ ಶೇ 10ಕ್ಕಿಂತಲೂ ಕಡಿಮೆ ಇರುವುದನ್ನು ಸಂಸತ್ತಿನ ದಾಖಲೆಗಳು ತೋರಿಸುತ್ತವೆ. ರಾಜ್ಯಸಭೆ ಅಧ್ಯಕ್ಷರು ಈ ನೋಟಿಸ್ನಲ್ಲಿ ಅರ್ಹತೆಯನ್ನು ಕಂಡುಕೊಂಡರೆ ಅದನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ರವಾನಿಸುತ್ತಾರೆ. ಸಮಿತಿಯ ವರದಿ ಆಧಾರದಲ್ಲಿ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಅಂಗೀಕಾರವಾಗುತ್ತದೆ. ಸದಸ್ಯರು ತಮ್ಮ ರಾಜ್ಯಸಭೆ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.

