ಕಾಸರಗೋಡು: ಫೆ.27ರಂದು ಕೊಟ್ಟಚ್ಚೇರಿ ರೈಲ್ವೆ ಮೇಲ್ಸೇತುವೆಯನ್ನು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ.ಎ.ಮೊಹಮ್ಮದ್ ರಿಯಾಝ್ ಉದ್ಘಾಟಿಸುವುದರೊಂದಿಗೆ ಕಾಞಂಗಾಡು ನಗರಸಭೆಯ ಸಮಗ್ರ ಅಭಿವೃದ್ಧಿಗೆ ವೇಗ ದೊರೆಯಲಿದೆ. ಜಿಲ್ಲೆಯಲ್ಲಿ ಐದನೇ ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ನಗರಸಭೆಯ ಪಶ್ಚಿಮ ಭಾಗಕ್ಕೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಲೆವೆಲ್ ಕ್ರಾಸಿಂಗ್ನಲ್ಲಿ ಸಮಯವನ್ನು ವ್ಯರ್ಥ ಮಾಡದೆ ಸುಲಭವಾಗಿ ಪ್ರಯಾಣಿಸಬಹುದು. 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯು ಕಾಞಂಗಾಡ್ ನಗರದಿಂದ ಕರಾವಳಿ ಪ್ರದೇಶಕ್ಕೆ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಕಾಞಂಗಾಡ್ ಟ್ರಾಫಿಕ್ ಸಿಗ್ನಲ್ ಬಳಿಯಿಂದ ಆರಂಭವಾಗಿ ಆವಿಕ್ಕರದಲ್ಲಿ ಕೊನೆಗೊಳ್ಳುವ ಫ್ಲೈಓವರ್ ಮೇಲೆ ಎರಡು ಪಥಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸೇತುವೆಯು 730 ಮೀಟರ್ ಉದ್ದ ಮತ್ತು 10.15 ಮೀಟರ್ ಅಗಲವನ್ನು ಹೊಂದಿದೆ ಮತ್ತು ಪಾದಚಾರಿಗಳಿಗೆ 1.5 ಮೀಟರ್ ಅಗಲದ ಕಾಲ್ನಡೆ ಹಾದಿ ಹೊಂದಿದೆ. ರೈಲ್ವೆ ಸ್ಪ್ಯಾನ್ ನಿರ್ಮಾಣ ಸೇರಿದಂತೆ ನಿರ್ಮಾಣ ವೆಚ್ಚ 15 ಕೋಟಿ ರೂ. ಜೊತೆಗೆ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ `21.71 ಕೋಟಿ ಮಂಜೂರು ಮಾಡಿತ್ತು.
ಸೇತುವೆಯ ನಿರ್ಮಾಣವು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭವಾಯಿತು. ಕೋವಿಡ್ ಲಾಕ್ ಡೌನ್ ಬಿಕ್ಕಟ್ಟಿನಿಂದಾಗಿ ಸೇತುವೆ ನಿರ್ಮಾಣ ಕಾಮಗಾರಿ ಕುಂಠಿತವಾಗಿತ್ತು. ಕಾಞಂಗಾಡ್ ಕೊಟ್ಟಚೇರಿ ರೈಲ್ವೆ ಮೇಲ್ಸೇತುವೆಯು ಕೇರಳದ ರಸ್ತೆಗಳು ಮತ್ತು ಸೇತುವೆಗಳ ಅಭಿವೃದ್ಧಿ ನಿಗಮದಿಂದ ಪೂರ್ಣಗೊಂಡ 42 ನೇ ರೈಲ್ವೆ ಮೇಲ್ಸೇತುವೆಯಾಗಲಿದೆ.



