ಪೆರ್ಲ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಹಸ್ಥಗಳಿಂದ ಹೊಸನಗರ ಶ್ರೀ ಚಂದ್ರಮೌಳೀಶ್ವರ ದೇವರ ಸನ್ನಿಯಲ್ಲಿ ಫೆ.28ರಂದು ಪ್ರದೋಷ ಕಾಲದಲ್ಲಿ ಜರಗಲಿರುವ ಸೋಮ-ಸಪರ್ಯಾ ಆರಾಧನೆಯ ವಿಶೇಷ ವಿಭೂತಿ ಪೂಜೆಗಾಗಿರುವ ಭಸ್ಮವನ್ನು ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಮಹಾಮಂಡಲ ಧರ್ಮ ಕರ್ಮ ಸಂಯೋಜಕರಾದ ವೇ. ಮೂ. ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಶ್ರೀ ಚಂದ್ರಮೌಳೀಶ್ವರ ದೇವಾಲಯ ಪ್ರಕಲ್ಪದ ಅಧ್ಯಕ್ಷ ಹಾಗೂ ಸೋಮ ಸಪರ್ಯಾ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಅವರಿಗೆ ಹಸ್ತಾಂತರಿಸಲಾಯಿತು.
ಕಳೆದ ಅನೇಕ ದಿನಗಳಿಂದ ಬಜಕೂಡ್ಲು ಗೋಶಾಲೆಯಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಸೇವಾಬಿಂದುಗಳಿಂದ ಧಾರ್ಮಿಕ ವಿಧಿ ವಿಧಾನ ಮತ್ತು ವಿಶೇಷ ಉಪಾಸನೆಗಳೊಂದಿಗೆ ಭಸ್ಮವನ್ನು ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಗೋಶಾಲೆಯಲ್ಲಿ ಕೃಷ್ಣಪಕ್ಷದ ಅಷ್ಟಮೀ ಪ್ರಯುಕ್ತ ಗೋಪಾಲಕೃಷ್ಣ ಪೂಜೆ, ಗೋಪೂಜೆ, ಭಜನೆ ನಡೆಯಿತು. ಸೋಮಸಪರ್ಯಾ ಸಮಿತಿ, ಶಾಸನತಂತ್ರ, ಮುಳ್ಳೇರಿಯಾ ಹವ್ಯಕ ಮಂಡಲ, ಎಣ್ಮಕಜೆ ವಲಯ, ಗೋಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಥಮ ಹಂತದಲ್ಲಿ 60 ಕೆಜಿಗೂ ಅಧಿಕ ವಿಭೂತಿಯನ್ನು ಹಸ್ತಾಂತರಿಸಲಾಯಿತು ಮತ್ತು ಇನ್ನು ಮುಂದೆ ತಯಾರಿಸಲಾಗುತ್ತಿರುವ ವಿಭೂತಿಯನ್ನು ಸೋಮಸಪರ್ಯಾ ದಿನದಂದು ಸಮರ್ಪಿಲಾಗುವುದು ಎಂಬುದಾಗಿ ಪದಾಧಿಕಾರಿಗಳು ತಿಳಿಸಿದರು. ಕಾಸರಗೋಡಿನ ಗೀತಾಜ್ಞಾನಯಜ್ಞ ಸಮಿತಿಯ ಸದಸ್ಯರಿಂದ ಭಗವದ್ಗೀತಾ ಪಾರಾಯಣ ನಡೆಯಿತು.




