ನವದೆಹಲಿ:2022ರ ಫೆಬ್ರವರಿ ತಿಂಗಳವರೆಗೆ ಕಳೆದ ಏಳು ವರ್ಷಗಳಲ್ಲಿ ನಿರಾಶ್ರಿತ ಕಾಶ್ಮೀರಿ ಪಂಡಿತರ ವಾಸ್ತವ್ಯಕ್ಕಾಗಿ ನಿರ್ಮಿಸಲು ಉದ್ದೇಶಿಸಲಾದ ಮನೆಗಳ ಪೈಕಿ ಕೇವಲ ಶೇ.17ರಷ್ಟು ಅಂದರೆ ಸುಮಾರು 1025 ಮನೆಗಳ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ ಎಂದು 'ದಿ ಹಿಂದೂ' ಆಂಗ್ಲ ದೈನಿಕವು, ಕೇಂದ್ರ ಗೃಹ ಸಚಿವಾಲಯದ ದತ್ತಾಂಶಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ನಿರಾಶ್ರಿತ ಕಾಶ್ಮೀರಿ ಪಂಡಿತರಿಗಾಗಿ ನಿರ್ಮಿಸಲಾಗುತ್ತಿರುವ ವಸತಿಗಳ ಕಾಮಗಾರಿ ನಿಧಾನವಾಗಿ ಸಾಗುತ್ತಿದೆಯೆಂದು ಕಳೆದ ವರ್ಷದ ಡಿಸೆಂಬರ್ನಲ್ಲಿ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಗಮನಸೆಳೆದಿದೆ. ಆವರೆಗೆ ಕಾಶ್ಮೀರಿ ಪಂಡಿತರಿಗಾಗಿ 849 ವಸತಿ ಘಟಕಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಲ್ಲಿ 176 ವಸತಿ ಘಟಕಗಳು ಮಾತ್ರವೇ ಪೂರ್ಣಗೊಂಡಿವೆ ಎಂದರು. ಆದಾಗ್ಯೂ ಶೇ.50ರಷ್ಟು ಮನೆಗಳ ನಿರ್ಮಾಣ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ದತ್ತಾಂಶಗಳು ತೋರಿಸುತ್ತವೆ. ಮಾರ್ಚ್ 9ರಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಅವರು ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಅವರಿಗೆ ಪತ್ರ ಬರೆದು, 2023ರಂಒಳಗೆ ಎಲ್ಲಾ ವಸತಿ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆಯೆಂದು ತಿಳಿಸಿದರು.
1488 ವಸತಿ ಘಟಕಗಳು ನಿರ್ಮಾಣದ ವಿವಿಧ ಹಂತಗಳಲ್ಲಿರುವುದಾಗಿ ರಾಯ್ ತಿಳಿಸಿದರು. 2,744 ಘಟಕಗಳ ಟೆಂಡರ್ಗಳನ್ನು ಅಂತಿಮಗೊಳಿಸಲಾಗಿದೆ ಹಾಗೂ ಉಳಿದ ಘಟಕಗಳ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದರು. ಖಾಸಗಿ ಜಮೀನುಗಳ ಸ್ವಾಧೀನಪಡಿಸಿಕೊಳ್ಳುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಸತಿಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಲು 2019ರಲ್ಲಿ ಜಮ್ಮುಕಾಶ್ಮೀರ ಕೇಂದ್ರಾಡಳಿತವು ಸರಕಾರಿ ಜಮೀನನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಿತು ಎಂದರು.
ಈ ವಸತಿ ಘಟಕಗಳ ಸ್ಥಾಪನೆಯ ಜೊತೆಗೆ ಕೇಂದ್ರ ಸರಕಾರವು ಜಮ್ಮಕಾಶ್ಮೀರ ವಲಸಿಗರಿಗಾಗಿ 3 ಸಾವಿರ ಸರಕಾರಿ ಉದ್ಯೋಗಗಳನ್ನು ಸೃಷ್ಟಿಸಿತು. ಆದರೆ ಈವರೆಗೆ ಕೇವಲ 1739 ವಲಸಿಗರ ನೇಮಕಾತಿಯಾಗಿದೆ. ಇತರ 1098 ಮಂದಿಯನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಗಿದ್ದರೂ, ಅವರ ನೇಮಕಾತಿ ಆಗಿಲ್ಲ.
2008ರಲ್ಲಿ ಆಗಿನ ಕಾಂಗ್ರೆಸ್ ಸರಕಾರವು ಕಾಶ್ಮೀರಿ ವಲಸಿಗರಿಗಾಗಿ ಉದ್ಯೋಗ ಪ್ಯಾಕೇಜ್ ಘೋಷಿಸಿದ್ದು, ಅದರಡಿಯಲ್ಲಿ ಅನುಮೋದಿಸಲಾದ 3 ಸಾವಿರ ಉದ್ಯೋಗಳ ಪೈಕಿ 2905 ಉದ್ಯೋಗಳನ್ನು ಭರ್ತಿ ಮಾಡಲಾಗಿದೆ. ಹಲವಾರು ಕಾಶ್ಮೀರಿ ವಲಸಿಗರು ಪ್ರಸಕ್ತ ಜಮ್ಮು ಹಾಗೂ ಹೊಸದಿಲ್ಲಿಯಲ್ಲಿರುವ ಶಿಬಿರಗಳಲ್ಲದೆ, ಕಾಶ್ಮೀರಿ ಕಣಿವೆಯಲ್ಲಿರುವ ಕುಲಗಾಮ್ ಜಿಲ್ಲೆಯ ವೆಸ್ಸು, ಆನಂತನಾಗ್ ಜಿಲ್ಲೆಯ ಮಟ್ಟಾನ್, ಪುಲ್ವಾಮಾದ ಹಾವಲ್, ಕುಪ್ವಾರದ ನಟ್ನುಸಾ, ಬಡಗಾಮ್ನ ಶೇಖ್ಪೊರಾ ಹಾಗೂ ಬಾರಾಮಲ್ಲಾ ವಿರ್ವಾನ್ನಲ್ಲಿರುವ ವರ್ಗಾವಣೆ (ಟ್ರಾನ್ಸಿಟ್)ಶಿಬಿರಗಳಲ್ಲಿ ನೆಲೆಸಿದ್ದಾರೆ.