ಕಾಸರಗೋಡು: ವಿಶಾಲವಾದ ಬಂಡೆಗಳ ಮೇಲೆ ಚಿನ್ನದ ತಂತಿಗಳಂತಹ ಹೊಳೆಯುವ ಹುಲ್ಲುಗಳು. ಶೀತ ಹಿಮದಿಂದ ತುಂಬಿದ ಮುಂಜಾನೆಗಳು. ಮುಳುಗುವ ಸೂರ್ಯನ ಚಿನ್ನದ ಬೆಳಕನ್ನು ಚೆಲ್ಲುವ ಸಂಜೆಗಳು. ಇಲ್ಲಿಗೆ ಬಂದರೆ, ಯಾರ ಮನಸ್ಸನ್ನೂ ತಂಪಾಗಿಸುವ ಈ ಸುಂದರ ದೃಶ್ಯಗಳನ್ನು ಆಸ್ವಾದಿಸದವರೇ ಇಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಅವೈಜ್ಞಾನಿಕ ಅಗೆತದಿಂದ ನಾಶವಾದ ವೀರಮಲೆಯ ಮೇಲ್ಭಾಗದ ಸೌಂದರ್ಯ ಇದು.
ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದುಹೋಗುವ ಯಾರ ಮನಸ್ಸಿನಲ್ಲಿಯೂ ಈಗ ತೀವ್ರ ನೋವಿನ ಭಾವ ವೀರಮಲೆಯ ಗತಿಯಿಂದ ಉಂಟಾಗದಿರದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಧಿ ಬಳಸಿ ರಾಷ್ಟ್ರೀಯ ಹೆದ್ದಾರಿಯ ಹೊಸ ರಚೆನೆಗೆ ಈಗ ಗುಡ್ಡದ ತಳ ಅಗೆಯಲಾಗಿದೆ. ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡನ್ನು ಗುರುತಿಸಲು ಪ್ರವಾಸೋದ್ಯಮ ವಲಯದಲ್ಲಿ ಇಲ್ಲಿ ಒಂದು ಪಾರಂಪರಿಕ ಗ್ರಾಮ ಇದೆ. ಐತಿಹಾಸಿಕ ದಾಖಲೆಗಳಲ್ಲಿ ಉಲ್ಲೇಖಿಸಲಾದ ಡಚ್ ಕೋಟೆಯ ಅವಶೇಷಗಳು ಇನ್ನೂ ಬೆಟ್ಟದ ತಪ್ಪಲಲ್ಲಿ ಅಳಿದುಳಿದುಕೊಂಡಿದೆ.
ವೀರಮಲೆಯ ಮೇಲಿನ ಭಾಗದಿಂದ ವೀಕ್ಷಿಸಬಹುದಾದ ಸುಂದರವಾದ ಪರಿಸರದ ದೃಶ್ಯಗಳು ನೋಟಕರನ್ನು ದೀರ್ಘಕಾಲ ಹಿಡಿದಿಡುವಂತದ್ದು. ಆದರೆ ಇದಿನ್ನು ಇತಿಹಾಸದ ಪುಟ ಸೇರಲಿವೆಯೇ ಎಂಬ ಬಗ್ಗೆಯೂ ಕಳವಳವಿದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಾಗಿ ಬೆಟ್ಟದ ತಳಭಾಗವನ್ನು ಈಗ ನೆಲಸಮ ಮಾಡಲಾಗುತ್ತಿದೆ. ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿದ್ದ ಪರ್ವತದ ಸೌಂದರ್ಯ ನಾಶವಾಗಿದೆ. ಉಳಿದಿರುವುದು ಸುಂದರವಾದ ಮೇಲ್ಭಾಗ ಮಾತ್ರ.
ಕುಂಬಳೆ ಕೋಟೆಗೂ ತಪ್ಪಿಲ್ಲ ಕಂಟಕ:
ರಾ.ಹೆದಾರಿ ಹಾದುಹೋಗುವ ಕುಂಬಳೆ ನದಿಯ ಸಮೀಪದ ಆರಿಕ್ಕಾಡಿ ಕೋಟೆಯ ಬಹುಪಾಲು ಇದೀಗ ಹೆದಾರಿ ನುಂಗಿದೆ. ಕೋಟೆಯ ಒಂದಷ್ಟು ಭಾಗ ಈ ಹಿಂದೆಯೇ ಹೆದಾರಿಗೆ ಸೇರ್ಪಡೆಗೊಂಡಿದ್ದರೆ ಮಿಕ್ಕುಳಿದಿರುವುದು ಈಗ ಆಪೋಷನಗೊಂಡಿದೆ. ಕೋಟೆಯ ಬುರುಜು ಮಾತ್ರ ಈಗ ವೀಕ್ಷಕರಿಗೆ ಕಾಣಿಸುತ್ತಿದೆ.
ಅಭಿಮತ:
ವೀರಮಲೆಯ ಸೌಂದರ್ಯ, ಪರಂಪರೆಯನ್ನು ಹಾನಿಗೊಳಿಸುವ ಯಾವುದೇ ಕ್ರಮಕ್ಕೆ ಅವಕಾಶ ನೀಡಬಾರದು. ರಸ್ತೆ ಸಹಿತ ವಿವಿಧ ವಲಯಗಳ ಅಭಿವೃದ್ಧಿ ಹೆಸರಲ್ಲಿ ಪಾರಂಪರಿಕ ತಾಣಗಳನ್ನು ಅಲಕ್ಷ್ಯಿಸುವುದು ಅಪರಾಧ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೂ ಮೌನವಾಗಿರುವುದು ಅಚ್ಚರಿ ಮೂಡಿಸಿದೆ. ಸ್ಥಳೀಯ ಜನರನ್ನು ಒಗ್ಗೂಡಿಸಿ ಇನ್ನಾದರೂ ವೀರಮಲೆಯ ಪರಂಪರೆಗೆ ಧಕ್ಕೆ ತರುವ ವ್ಯವಸ್ಥೆಗಳನ್ನು ವಿರೋಧಿಸಬೇಕು.
-ನಾಝರ್ ಕಾಞಂಗಾಡ್
ಚೈಲ್ಡ್ ರೈಟ್ ಪ್ರೊಟೆಕ್ಷನ್ ಆಂಡ್ ಲೀಗಲ್ ಹೆಲ್ಪ್ ತಂಡದ ಸಂಯೋಜಕ
ಕಾಞಂಗಾಡ್.




.jpg)
.jpg)
