ಕುಂಬಳೆ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಪೊಸಡಿಗುಂಪೆಯ ತಪ್ಪಲಿನಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ಅವ್ಯಾಹತವಾಗಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪುತ್ತಿಗೆ ಪಂಚಾಯತಿ ಒಂದನೇ ವಾರ್ಡ್ಗೆ ಒಳಪಡುವ ಚೆನ್ನಿಕೋಡಿ, ಅಜ್ಜಿಕುಮೇರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಂಪುಕಲ್ಲು ಮಾಫಿಯಾ ಮೆರೆಯುತ್ತಿದ್ದು, ಇಲ್ಲಿಂದ ಗಣಿಗಾರಿಕೆ ಮಾಡಿದ ಕಲ್ಲುಗಳನ್ನು ನಿಯಮ ಬಾಹಿರವಾಗಿ ಗಡಿ ದಾಟಿಸಿ ವ್ಯಾಪಕವಾಗಿ ಕರ್ನಾಟಕಕ್ಕೆ ಸಾಗಿಸಲಾಗುತ್ತಿದೆ.
ಪ್ರವಾಸಿ ತಾಣ ಹಾಗೂ ಪರಿಸರದ ಮೇಲೆ ಪ್ರಹಾರ:
ಜಿಲ್ಲೆಯ ಪ್ರವಾಸೋದ್ಯಮ ಭೂಪಟದಲ್ಲಿ ಅತಿಮುಖ್ಯ ಸ್ಥಾನ ಹೊಂದಿರುವ ಪೊಸಡಿಗುಂಪೆಯು ನೈಸರ್ಗಿಕ ಸೌಂದರ್ಯ ಮತ್ತು ಜೀವವೈವಿಧ್ಯವು ಈ ಅಕ್ರಮ ಚಟುವಟಿಕೆಯಿಂದಾಗಿ ವಿನಾಶದ ಭೀತಿಯಲ್ಲಿದೆ. ಕಿಲೋಮೀಟರ್ಗಳ ವ್ಯಾಪ್ತಿಯಲ್ಲಿ ಕೆಂಪುಕಲ್ಲಿನ ಧೂಳು ಹರಡುತ್ತಿದ್ದು, ಇದು ಸ್ಥಳೀಯರ ಕೃಷಿಯ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತಿದೆ. ಗಣಿಗಾರಿಕೆಯಿಂದಾಗಿ ಈ ಭಾಗದ ಕುಡಿಯುವ ನೀರಿನ ಮೂಲಗಳು ಬತ್ತಿಹೋಗುವ ಅಪಾಯವಿದೆ. ಜಲಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ದುಸ್ತರವಾದ ಜನಜೀವನ:
ಅತಿಯಾದ ಧೂಳು ಮತ್ತು ಯಂತ್ರಗಳ ಸತತ ಕರ್ಕಶ ಶಬ್ದದಿಂದಾಗಿ ಜನವಸತಿ ಪ್ರದೇಶಗಳು ವಾಸಯೋಗ್ಯವಲ್ಲದಂತಾಗಿವೆ. ಧೂಳಿನ ಹಾವಳಿಯಿಂದ ಮನೆಗಳು, ವಾಹನಗಳು ಸೇರಿದಂತೆ ಸುತ್ತಮುತ್ತಲಿನ ಆರಾಧನಾಲಯಗಳು ಮತ್ತು ಮದರಸಗಳಲ್ಲಿ ಧೂಳು ಆವರಿಸಿದೆ. ಇದರಿಂದಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಉಸಿರಾಟದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಶಬ್ದ ಮಾಲಿನ್ಯ: ಯಂತ್ರೋಪಕರಣಗಳ ನಿರಂತರ ಶಬ್ದದಿಂದಾಗಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಮತ್ತು ಹಿರಿಯರಿಗೆ ನೆಮ್ಮದಿಯಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಲಾಗಿದೆ.
ಅಧಿಕಾರಿಗಳ ಅನಾಸ್ಥೆ ಹಾಗೂ ಮಾಫಿಯಾ ಅಟ್ಟಹಾಸ:
ಈ ವ್ಯವಸ್ಥಿತ ಪರಿಸರ ಲೂಟಿಯ ಕುರಿತು ಇದೀಗ ಮುಖ್ಯಮಂತ್ರಿಗಳು, ಪ್ರವಾಸೋದ್ಯಮ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಪರಿಸರ ಸಂರಕ್ಷಣಾ ಮಂಡಳಿಗೆ ಸವಿಸ್ತಾರವಾದ ದೂರುಗಳನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಈ ಹಿಂದೆಯೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತು.
ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ಈ ನಿಗೂಢ ಮೌನವು ಗಣಿಗಾರಿಕೆ ಮಾಫಿಯಾದೊಂದಿಗೆ ಅವರಿಗಿರುವ ಅಪವಿತ್ರ ಮೈತ್ರಿಯನ್ನು ಎತ್ತಿ ತೋರಿಸುತ್ತಿದೆ. ನಿಯಮದ ಪ್ರಕಾರ ಸೂರ್ಯಾಸ್ತದ ನಂತರ ಗಣಿಗಾರಿಕೆ ನಡೆಸುವಂತಿಲ್ಲದಿದ್ದರೂ, ಇಲ್ಲಿ ರಾತ್ರಿ ವೇಳೆಯೂ ಕಾನೂನುಬಾಹಿರವಾಗಿ ಕಲ್ಲು ಸಾಗಾಟ ಅವಿರತವಾಗಿ ಸಾಗುತ್ತಿದೆ. ಮಾಫಿಯಾ ಗುಂಪುಗಳು ದೂರುದಾರರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಕಾನೂನು ರಕ್ಷಕರು ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಜನಸಾಮಾನ್ಯರ ಸುರಕ್ಷತೆಯನ್ನು ಪ್ರಶ್ನಿಸುವಂತಿದೆ.
'ಪರಿಸರ ಸಂರಕ್ಷಣಾ ಸಮಿತಿ' ರಚನೆಗೆ ಸಿದ್ಧತೆ:
ಅಧಿಕಾರಿಗಳು ಕೂಡಲೇ ಈ ಅಕ್ರಮವನ್ನು ನಿಲ್ಲಿಸಿ ಪ್ರಕೃತಿಯನ್ನು ರಕ್ಷಿಸಲು ಮುಂದಾಗದಿದ್ದರೆ ಶೀಘ್ರದಲ್ಲೇ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಗ್ರಾಮಸ್ಥರೆಲ್ಲರೂ ಒಗ್ಗೂಡುವುದು ಅನಿವಾರ್ಯ.ಈ ಬಗ್ಗೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತ್ಯಕ್ಷ ಹೋರಾಟಕ್ಕೆ ಇಳಿಯುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಆಡಳಿತ ವ್ಯವಸ್ಥೆಯ ಈ ನಿರ್ಲಕ್ಷ್ಯ ಧೋರಣೆಯು ಮುಂದಿನ ಪೀಳಿಗೆಗೆ ಮಾಡುವ ದ್ರೋಹ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಭಿಮತ:
-ಈ ಬಗ್ಗೆ ಈಗಾಗಲೇ ತನಗೆ ದೂರುಗಳು ಬಂದಿವೆ. ಆದರೆ ಇನ್ನೂ ಆ ಪ್ರದೇಶವನ್ನು ಸಂದರ್ಶಿಸಿಲ್ಲ. ಶೀಘ್ರ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆಗಳು ಇವೆ ಎಂದಾದರೆ ಕ್ರಮ ಕೈಗೊಳ್ಳಲಾಗುವುದು.
-ಪುಷ್ಪಲತಾ
ಪುತ್ತಿಗೆ ಗ್ರಾ.ಪಂ.ಸದಸ್ಯೆ.

.jpg)
.jpg)
.jpg)
.jpg)
