ಉಪ್ಪಳ: ಬಾಯಾರು ಬಳಿಯ ವಾಟೆತ್ತಿಲಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದೆ. ಏ.1 ರಿಂದ 6 ವರೆಗೆ ಇಲಿ ಸಡಗರದಿಂದ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಸಿದ್ಧತೆಗಳು ಅಂತಿಮಹಂತದಲ್ಲಿವೆ.
ಈ ಸಂಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆಗೊಂಡು ಕಾರ್ಯೋನ್ಮುಖವಾಗಿದೆ. ಗರ್ಭ ಗುಡಿಯ ಮತ್ತು ನಮಸ್ಕಾರ ಮಮಟಪದ ಮೇಲ್ಛಾವಣಿಗೆ ತಾಮ್ರ ಹಾಸುವ, ಸುತ್ತು ಪೌಳಿ ಗೋಪುರದ ನೆಲ, ಒಳಾಂಗಣಕ್ಕೆ ಗ್ರೆನೈಟ್ ಮತ್ತು ಕಗ್ಗಲ್ಲು ಅಳವಡಿಸುವ, ದೇವಾಲಯವನ್ನು ಒಪ್ಪ ಓರಣಗೊಳಿಸುವ ಕಾಯಕಗಳು ಪೂರ್ಣಗೊಂಡಿವೆ.
ವೇದಮೂರ್ತಿ ಬಳ್ಳಪದವು ಮಾಧವ ಉಪಾಧ್ಯಾಯರು ತಂತ್ರಿಗಳಾಗಿದ್ದಾರೆ. ದೇವಜ್ಞ ವಳಕ್ಕುಜ ವೆಂಕಟ್ರಮಣ ಭಟ್ ಅವರು ಸಲಹೆಯಂತೆ ಜೀರ್ಣೋದ್ಧಾರ ಕಾಯಕಗಳು ನಡೆದುಬರುತ್ತಿವೆ. ಪ್ರಸಾದ್ ಮುನಿಯಂಗಳ ಶಿಲ್ಪಿಯಾಗಿದ್ದಾರೆ. ಸುರೇಶ್ ತ್ರಿಶೂರು ದಾರು ಶಿಲ್ಪಿಯಾಗಿದ್ದಾರೆ. ನಾಗೇಶ್ ಬಟ್ ವಿ. ದೇವಾಲಯದ ಅರ್ಚಕರಾಗಿದ್ದಾರೆ.
ಸಮಿತಿಗಳ ಪದಾಧಿಕಾರಿಗಳು: ಜೀರ್ಣೋದ್ಧಾರ ಸಮಿತಿ : ಅಧ್ಯಕ್ಷರು- ಮಾಧವ ಭಟ್ ವಿ., ಕಾರ್ಯಾಧ್ಯಕ್ಷರು: ಸುಬ್ರಹ್ಮಣ್ಯ ಭಟ್ ಎಸ್., ಕಾರ್ಯದರ್ಶಿ-ಶ್ರೀಕಾಂತ ವಿ., ಕೋಶಾಧಿಕಾರಿ-ಕಿರಣ್ ಕುಮಾರ್ ವಿ., ಬ್ರಹ್ಮಕಲಶೋತ್ಸವ ಸಮಿತಿ-ವಿಘ್ನೇಶ್ವರ ಕೆರುಕೋಡಿ, ಕಾರ್ಯದರ್ಶಿ-ಕೃಷ್ಣಭಟ್ ಸಜಂಕಿಲ, ಕೋಶಾಧಿಕಾರಿ-ಶ್ರೀರಾಮಮೂರ್ತಿ ವಿ., ಸಂಚಾಲಕ-ಎಸ್.ವಿ.ಭಟ್.
ಸರಣಿ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಉದ್ದೀಪನ
ದೇವಾಲಯದಲ್ಲಿ ಜೀರ್ಣೋದ್ಧಾರ ಪೂರ್ವಭಾವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಸರಣಿ ಶ್ರೀ ದುರ್ಗಾ ನಮಸ್ಕಾರ ಪೂಜೆ ಉದ್ದೀಪನಗೊಂಡಿತು. ಪ್ರತಿಷಷ್ಠಿ ಕಳೆದು ಪ್ರಥಮ ಮಂಗಳವಾರದಂದು ಗಣಪತಿ ಹೋಮ, ದುರ್ಗಾ ಪೂಜೆ ನಡೆಸಿಕೊಂಡು ಬರಲಾಗುತ್ತಿತ್ತು. ಸುಮಾರು 60ಕ್ಕೂ ಅಧಿಕ ದುರ್ಗಾ ಪೂಜೆ ಈ ಸಂಬಂಧ ನಡೆದಿದೆ.
ಈ ಸಂಬಂಧ ದೇವಾಲಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಭಟ್ ವಿ. ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಭಟ್ ಗಿರಿ, ವಿಘ್ನೇಶ್ವರ ಕೆದುಕೋಡಿ, ಸುಧಾ ವಿ.ಭಟ್, ಸಂಧ್ಯಾಗೀತಾ ಬಾಯಾರು, ಅರ್ಚಕ ನಾಗೇಶ್ ಭಟ್ ವಿ., ಕೃಷ್ಣ ಭಟ್ ಸಜಂಕಿಲ ಮೊದಲಾದವರು ಇದ್ದರು.
ಪತ್ರಕರ್ತರಾದ ವೀಜಿ ಕಾಸರಗೋಡು ಮತ್ತು ಅಖಿಲೇಶ್ ನಗುಮುಗಂ ಮುಖ್ಯ ಅತಿಥಿಗಳಾಗಿದ್ದರು.




