ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗ ಶೈಕ್ಷಣಿಕ ಜಿಲ್ಲಾ ಅಧಿಕಾರಿಯನ್ನು ವರ್ಗಾವಣೆಗೊಳಿಸಿ, ಸರ್ಕಾರ ಮಲಯಾಳಿ ಅಧಿಕಾರಿಯನ್ನು ನೇಮಕಮಾಡುವ ಮೂಲಕ ಕನ್ನಡಿಗರಿಗೆ ಮತ್ತೊಂದು ಪ್ರಹಾರ ನೀಡಿದೆ. ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ವ್ಯಾಪ್ತಿಯನ್ನು ಒಳಗೊಂಡ ಕಾಸರಗೋಡು ಶೈಕ್ಷಣಿಕ ಜಿಲ್ಲೆಗೆ ಸಂವಿಧಾನಾತ್ಮಕವಾಘಿ ಕನ್ನಡಿಗ ಅಧಿಕಾರಿಯನ್ನೇ ನೇಮಿಸಬೇಕು ಎಂಬ ಆದೇಶ ಉಲ್ಲಂಘಿಸಿ ಇಲ್ಲಿ ಮಲಯಾಳಿ ಅಧಿಕಾರಿಯನ್ನು ನೇಮಕಗೊಳಿಸಲಾಗಿದೆ. ಈಗಾಗಲೇ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಶಿಕ್ಷಕರನ್ನು ನೇಮಕಗೊಳಿಸಿ ಆದೇಶ ಹೊರಡಿಸಿರುವ ಬೆನ್ನಿಗೆ ಜಿಲ್ಲಾ ಶಿಕ್ಷಣಾಧಿಕಾರಿ ಸ್ಥಾನಕ್ಕೂ ಮಲಯಾಳಿ ಅಧಿಕಾರಿಯನ್ನು ನೇಮಿಸಿ ಆದೇಶಿಸುವ ಮೂಲಕ ಕಾಸರಗೋಡಿನಲ್ಲಿ ಕನ್ನಡವನ್ನು ದಮನಿಸುವ ಕೆಲಸವನ್ನು ಖುದ್ದು ಸರ್ಕಾರವೇ ನಡೆಸಲು ಮುಂದಾಘಿರುವುದಾಗಿ ಕನ್ನಡಪರ ಸಂಸ್ಥೆಗಳು ತಿಳಿಸಿದೆ.
ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶೀಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದ ಸರ್ಕಾರ, ಪ್ರಸಕ್ತ ಸಂವಿಧಾನಾತ್ಮಕವಾಗಿ ಕನ್ನಡಿಗರು ಇರಬೇಕಾದ ಅಧಿಕಾರಿಯ ಹುದ್ದೆಯನ್ನೂ ಕಸಿದುಕೊಳ್ಳಲು ಮುಂದಾಗಿದೆ. ಈಗಾಗಲೇ ಕಂದಾಯ, ಸರ್ಕಾರಿ ಆಸ್ಪತ್ರೆ, ತಾಲೂಕು ಕಚೇರಿ, ಗ್ರಾಮಾಧಿಕಾರಿ ಕಚೇರಿ, ಕೃಷಿ ಇಲಾಖೆ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಮಲಯಾಳಿ ನೌಕರರನ್ನು ನೇಮಿಸುವ ಮೂಲಕ ಬಲವಂತವಾಗಿ ಮಲಯಾಳ ಹೇರುವ ಕೆಲಸವನ್ನು ಪರೋಕ್ಷವಾಗಿ ನಡೆಸಲಾಗುತ್ತಿದೆ. ಈ ಮಧ್ಯೆ ಕನ್ನಡಿಗರಿಗಾಗಿ ಮೀಸಲಿರಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೂ ಮಲಯಾಳಿ ಅಧಿಕಾರಿಯನ್ನು ನೇಮಿಸುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದೆ. ಕಾಸರಗೋಡಿನಲ್ಲಿ ಕನ್ನಡದ ದಮನಕ್ಕೆ ಹಲವು ಸಮಯದಿಂದ ಶ್ರಮ ನಡೆಯುತ್ತಿದೆ. ಕನ್ನಡಿಗರಿಗೆ ಸಂವಿಧಾನಾತ್ಮಕವಾಗಿ ಲಭಿಸಬೇಕಾದ ಹಕ್ಕನ್ನು ಸರ್ಕಾರ ಕಸಿದುಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ತಿಳಿಸಿದ್ದಾರೆ.
ಕಾಸರಗೋಡು, ಕುಂಬಳೆ, ಮಂಜೇಶ್ವರ ಶೈಕ್ಷಣಿಕ ಉಪ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು ಹಾಗೂ ಈ ಉಒಜಿಲ್ಲೆಗಳನ್ನು ಒಳಗೊಂಡ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಕನ್ನಡಿಗರನ್ನೇ ನೇಮಿಸಬೇಕೆಂಬ ಆದೇಶ ಉಲ್ಲಂಘಿಸಿ ಮಲಯಾಳಿ ಅಧಿಕಾರಿಯನ್ನು ನೇಮಿಸಿರುವುದು ಖಂಡನೀಯ. ಈ ನೇಮಕಾತಿ ತಕ್ಷಣ ರದ್ದುಗೊಳಿಸಿ ಕನ್ನಡಿಗ ಅಧಿಕಾರಿಯನ್ನು ನೇಮಿಸದಿದ್ದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು.
ಶ್ರೀನಿವಾಸ ರಾವ್, ಅಧ್ಯಕ್ಷ
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕಾಸರಗೋಡು ಜಿಲ್ಲೆ