ಪೆರ್ಲ: ಇಡಿಯಡ್ಕ ಸಮೀಪದ ಕುದ್ವ ಎಂಬಲ್ಲಿನ ಕೆರೆಯೊಂದರಲ್ಲಿ ಯುವಕನೋರ್ವನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ.
ಮೃತ ಯುವಕನನ್ನು ಬಣ್ಪುತ್ತಡ್ಕದ ಉಮೇಶ್ (35) ಎಂದು ಗುರುತಿಸಲಾಗಿದೆ. ಮೂಲತಃ ನಿಡ್ಪಳ್ಳಿ ನಿವಾಸಿಯಾದ ಉಮೇಶ್ ಬಣ್ಪುತ್ತಡ್ಕದಿಂದ ವಿವಾಹವಾಗಿದ್ದು ಬಳಿಕ ಕಳೆದ ಕೆಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದರು. ಬಣ್ಪುತ್ತಡ್ಕದಲ್ಲಿ ನೂತನ ಮನೆಯೊಂದನ್ನು ನಿರ್ಮಿಸಿ ಕಳೆದ 1 ತಿಂಗಳ ಹಿಂದೆ ಆತ್ಮೀಯರನ್ನೆಲ್ಲ ಆಮಂತ್ರಿಸಿ ಸಂಭ್ರಮದಿಂದ ಗೃಹ ಪ್ರವೇಶ ನಡೆಸಿದ್ದರು. ಶೇಂದಿ ಸಂಗ್ರಹ ಕಾಯಕ ಮಾಡುತ್ತಿದ್ದ ಈತ ಈ ಪರಿಸರದ ಹಲವು ತೆಂಗಿನ ಮರವೇರಿ ಶೇಂದಿ ಸಂಗ್ರಹಿಸುತ್ತಿದ್ದು ಇದಕ್ಕಾಗಿ ತೋಟಕ್ಕೆ ಬಂದಿದ್ದು ಕೈಕಾಲು ಮುಖ ತೊಳೆಯಲು ಕೆರೆಯ ಬಳಿ ತಲುಪಿ ಆಯ ತಪ್ಪಿ ಬಿದ್ದಿರಬೇಕೆಂದು ಸ್ಥಳೀಯರು ಸಂಶಯಿಸಿದ್ದಾರೆ.ಬದಿಯಡ್ಕ ಠಾಣಾ ಪೋಲಿಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಮೃತದೇಹ ಮೇಲಕ್ಕೆತ್ತಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಮೃತ ಉಮೇಶ್ ಪತ್ನಿ ನೇತ್ರಾ, ಮಕ್ಕಳಾದ ಚರಣ್ ಹಾಗೂ ಚೇತನ್ ಎಂಬಿವರನ್ನಗಲಿದ್ದಾರೆ.