ನವದೆಹಲಿ :ಅಕ್ರಮ ಹಾಗೂ ಲೆಕ್ಕಕ್ಕಿಲ್ಲದ ನಗದು ವಹಿವಾಟುಗಳಿಗೆ ಕಡಿವಾಣ ಹಾಕುವ ಕ್ರಮವಾಗಿ ಸರಕಾರವು ಈ ವರ್ಷದ ಆರಂಭದಲ್ಲಿ ನಗದು ಮಿತಿ ನಿಯಮಗಳಿಗೆ ತಿದ್ದುಪಡಿಗಳನ್ನು ತಂದಿತ್ತು. ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಪಾವತಿಸಿದರೆ ಅಥವಾ ಸ್ವೀಕರಿಸಿದರೆ ಹಾಗೆ ಪಾವತಿಸಿದ ಅಥವಾ ಸ್ವೀಕರಿಸಿದ ಹಣದ ಶೇ.100ರಷ್ಟು ದಂಡವನ್ನು ತೆರಬೇಕಿತ್ತು.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಈಗ ತಂದಿರುವ ನೂತನ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಒಂದು ವರ್ಷದಲ್ಲಿ 20 ಲ.ರೂ.ಗಿಂತ ಅಧಿಕ ಮೊತ್ತವನ್ನು ಠೇವಣಿ ಮಾಡಲು ಬಯಸುವ ವ್ಯಕ್ತಿಗಳು ತಮ್ಮ ಪಾನ್ ವಿವರಗಳು ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಈ ಮೊದಲು ದಿನವೊಂದಕ್ಕೆ 50,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ತಮ್ಮ ಪಾನ್ ವಿವರಗಳನ್ನು ಸಲ್ಲಿಸಬೇಕಿತ್ತು ಮತ್ತು ಆದಾಯ ತೆರಿಗೆ ಇಲಾಖೆಯು ವಾರ್ಷಿಕ ಮಿತಿಯನ್ನು ನಿಗದಿಗೊಳಿಸಿರಲಿಲ್ಲ. ಆದರೆ ನೂತನ ನಿಯಮಗಳಡಿ ಒಂದು ಅಥವಾ ಹೆಚ್ಚಿನ ಬ್ಯಾಂಕುಗಳಲ್ಲಿ ಒಂದು ವರ್ಷದಲ್ಲಿ ಭಾರೀ ಮೊತ್ತದ ನಗದು ಹಿಂಪಡೆಯುವಿಕೆ ಮತ್ತು ಠೇವಣಿಗಳಿಗೆ ಪಾನ್ ಮತ್ತು ಆಧಾರ್ ವಿವರಗಳನ್ನು ಸಲ್ಲಿಸುವುದು ಅಗತ್ಯವಾಗುತ್ತದೆ.
ಪಾನ್ ಹೊಂದಿರದ ವ್ಯಕ್ತಿಗಳು ದಿನವೊಂದಕ್ಕೆ 50,000 ರೂ.ಗೂ ಅಧಿಕ ಅಥವಾ ಹಣಕಾಸು ವರ್ಷದಲ್ಲಿ 20 ಲ.ರೂ.ಗೂ ಅಧಿಕ ನಗದು ವಹಿವಾಟನ್ನು ನಡೆಸುವ ಕನಿಷ್ಠ ಏಳು ದಿನಗಳ ಮೊದಲು ಪಾನ್ ಕಾರ್ಡ್ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯು ಇತರ ಕೇಂದ್ರ ಸರಕಾರಿ ಇಲಾಖೆಗಳೊಂದಿಗೆ ಸೇರಿಕೊಂಡು ಕಳೆದ ಕೆಲವು ವರ್ಷಗಳಿದ ಹಣಕಾಸು ವಂಚನೆ,ಅಕ್ರಮ ಹಣದ ವಹಿವಾಟು ಮತ್ತು ಇತರ ಆರ್ಥಿಕ ಅಪರಾಧಗಳ ಅಪಾಯವನ್ನು ತಗ್ಗಿಸಲು ನಿಯಮಗಳನ್ನು ಪರಿಷ್ಕರಿಸುತ್ತಿದೆ ಮತ್ತು ತಿದ್ದುಪಡಿಗೊಳಿಸುತ್ತಿದೆ.