ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ, ಮಠದಲ್ಲಿ'ಕರ್ಕಾಟಕ ಮಾಸದ ಔಷಧ ಗಂಜಿ'ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು. ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸತ್ಕಾರ್ಯ ಮಾಡುವುದರೊಂದಿಗೆ, ಭಗವಂತ ನೀಡಿದ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ನಾವೆಲ್ಲರು ಕೈಜೋಡಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ಮನೆ ಹಿತ್ತಿಲಲ್ಲಿ ಕನಿಷ್ಟ ಒಂದು ಔಷಧಿ ಗಿಡ ಬೆಳೆಸೋಣ ಎಂದು ತಿಳಿಸಿದರು.
ಮಠದ ವಿಶ್ವಸ್ಥ ಕೆ. ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಆಯುರ್ವೇದಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪಿ. ಸತ್ಯನಾರಾಯಣ ಭಟ್ ಅವರು ಆಯುರ್ವೇದದ ಮಹತ್ವವನ್ನು ತಿಳಿಸಿ, ನಮ್ಮ ಪರಿಸರದಲ್ಲೇ ಬೆಳೆಯುವ ಗಿಡಮರಗಳ ಬಳಕೆಯಿಂದ ಉತ್ತಮ ಆರೋಗ್ಯ ಪಡೆಯಬಹುದು. ಹಾಲೆಮರದ ಕೆತ್ತೆ ಕಷಾಯದಲ್ಲಿ ಕೊರೊನದಂತಹ ಮಾರಕ ರೋಗಗಳನ್ನು ಗುಣಪಡಿಸುವ ಔಷಧದ ಗುಣವಿದೆ ಎಂದು ತಿಳಿಸಿದರು. ಪಡನ್ನಕ್ಕಾಡ್ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಶ್ವನಾಥನ್, ವಿಶ್ವಹಿಂದು ಪರಿಷತ್ತಿನ ಕೇಂದ್ರೀಯ ಸಮಿತಿ ಸದಸ್ಯ ಪ್ರೇಮಾನಂದ ಶೆಟ್ಟಿ ಕುಂದಾಪುರ, ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ಜಯದೇವನ್ ಕಣ್ಣೂರು, ಡಾ. ಸಜೀವನ್ ಪಾಲಕ್ಕಾಡ್, ಶಶಿಧರ ಶೆಟ್ಟಿ, ನ್ಯಾಯವಾದಿ ಕೆ. ಶ್ರೀಕಾಂತ್ ಕಾಸರಗೋಡು ಉಪಸ್ಥಿತರಿದ್ದರು. ಈ ಸಂದರ್ಭ ಗಿಡಮೂಲಿಕೆಗಳನ್ನು ಬೆಳೆಸಿ ಆಯುರ್ವೇದ ಕಾರ್ಯ ಮಾಡುತ್ತಿರುವ ನಾಟಿ ವೈದ್ಯ ಕಾನಾಯಿ ನಾರಾಯಣನ್ ವೈದ್ಯರ್ ಅವರನ್ನು ಸನ್ಮಾನಿಸಲಾಯಿತು. ಕರ್ಕಾಟಕ ಮಾಸದ ಔಷಧ ಗಂಜಿ ವಿತರಿಸಲಾಯಿತು.