ಕಾಸರಗೋಡು: ಕರ್ನಾಟಕ ಸರ್ಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ, ಐಎಎಸ್, ಅವರು ಕಾಸರಗೋಡು ಪಿಲಿಕುಂಜೆಯಲ್ಲಿರುವ ಯಕ್ಷಪುತ್ಥಳಿ ಬೊಂಬೆಮನೆಗೆ ಬುಧವಾರ ಭೇಟಿ ನೀಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಪಡೆದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.) ಕಾಸರಗೋಡು ಇದರ ನೇತೃತ್ವದಲ್ಲಿ ಯಕ್ಷಗಾನ ಬೊಂಬೆಯಾಟ ಮ್ಯೂಸಿಯಂ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಭೇಟಿ ಆಯೋಜಿಸಲಾಗಿತ್ತು. ಯಕ್ಷಗಾನ ಬೊಂಬೆಯಾಟ ಸಂಘದ ಸಾಧನೆಯನ್ನು ಶ್ಲಾಘಿಸಿದ ಅವರು, ಯಕ್ಷಪುತ್ಥಳಿಬೊಂಬೆಮನೆಯಲ್ಲಿ ನಿರ್ಮಾಣವಾಗುತ್ತಿರುವ ಬೊಂಬೆಗಳನ್ನು ವೀಕ್ಷಿಸಿ ಹರ್ಷವ್ಯಕ್ತಪಡಿಸಿದರು. ಯಕ್ಷಪುತ್ಥಳಿ ಬೊಂಬೆ ಮನೆಯ ರಮೇಶ್ ಕೆ.ವಿ ಅವರು ಬೊಂಬೆ ಮನೆಯಲ್ಲಿ ಯಕ್ಷಗಾನಬೊಂಬೆಗಳ ಮ್ಯೂಸಿಯಂ ನಿರ್ಮಾಣದ ಬಗ್ಗೆ ಹಾಗೂ ಬೊಂಬೆಗಳ ತಯಾರಿಗೆ ತಗಲುವ ವೆಚ್ಚಗಳ ಬಗ್ಗೆ ಸಿ. ಸೋಮಶೇಖರ್ ಅವರಿಗೆ ಮನವರಿಕೆ ಮಾಡಿದರು. ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಈ ಸಂದರ್ಭ ಉಪಸ್ಥಿತರಿದ್ದರು.
ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದ ಯಕ್ಷಪುತ್ಥಳಿ ಬೊಂಬೆ ಮನೆ ಭೇಟಿ
0
February 22, 2023
Tags