HEALTH TIPS

ಗಂಗೆಯನ್ನು ಕಟ್ಟಿನಿಲ್ಲಿಸಿದ ಆಧುನಿಕ ಶಿವಣ್ಣ: ಐದು ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ನೀರಿಗೊಂದು ಗೋಡೆ: ಬಾಕಿಲಪದವಿನಲ್ಲಿ ಸೀರೆ ಹೊಳೆಗೆ ಕಟ್ಟ-ಅಂತರ್ಜಲ ಸಂರಕ್ಷಣೆಯಲ್ಲಿ ಮಹತ್ವ ಸಾರುವ ವೈದಿಕ ಸಾಧಕ


           ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬಾಕಿಲಪದವಿನಲ್ಲಿ ಸೀರೆ ಹೊಳೆಗೆ ಅಡ್ಡ ಕಟ್ಟ ನಿರ್ಮಾಣಗೊಂಡರೆ, ಆಸುಪಾಸಿನ ಸುಮಾರು ಎರಡು ಕಿ.ಮೀ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ತೆರೆದಬಾವಿ, ಕೊಳವೆ ಬಾವಿಗಳಿಗೆ ನೀರಿನ ಕೊರತೆ ಎದುರಾಗದು. ಡಿಸೆಂಬರ್-ಜನವರಿ ತಿಂಗಳಲ್ಲಿ ಪ್ರತಿವರ್ಷ ಇಲ್ಲಿನ ಹೊಳೆಗೆ ಕಟ್ಟ ನಿರ್ಮಿಸಲಾಗುತ್ತಿದ್ದು, ಕೃಷಿಕಾರ್ಯಗಳಿಗೆ ಬಲುದೊಡ್ಡ ಆಸರೆಯಾಗುತ್ತಿರುವುದಾಗಿ ಇಲ್ಲಿನ ಕೃಷಿಕರು ಅಭಿಪ್ರಯಪಡುತ್ತಾರೆ.
            ಶುಳುವಾಲು ಮೂಲೆ ನಿವಾಸಿ, ಖ್ಯಾತ ವೈದಿಕ ಮನೆಯ ಶಿವಸುಬ್ರಹ್ಮಣ್ಯ ಭಟ್ ಅವರು ತಮ್ಮ ಸ್ವಂತ ಖರ್ಚಿನಿಂದ ಇಲ್ಲಿ ಕಳೆದ ಐದು ವರ್ಷಗಳಿಂದ ಕಟ್ಟ ನಿರ್ಮಿಸುತ್ತಿದ್ದಾರೆ. ಬಾಕಿಲಪದವು ಹೊಳೆಗೆ ಅಡ್ಡ ಕಟ್ಟ ನಿರ್ಮಾಣದಿಂದ ಈ ಪ್ರದೇಶದ ಕೃಷಿಕರಿಗೆ ಹೆಚ್ಚಿನ ಪ್ರಯೋಜನ ಲಭ್ಯವಾಗುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ಬತ್ತಿ ಬರಡಾಗುತ್ತಿದ್ದ ಹೊಳೆ, ಮೇ ತಿಂಗಳ ವರೆಗೂ ನೀರಿನಿಂದ ನಳನಳಿಸುತ್ತಿರುತ್ತದೆ. ಹತ್ತಕ್ಕೂ ಹೆಚ್ಚು ಮಂದಿ ಕೃಷಿಕರು ಹೊಳೆಯಿಂದ ನೇರವಾಗಿ ನೀರಿನ ಪ್ರಯೋಜನ ಪಡೆಯುತ್ತಿದ್ದರೆ, ನೂರಾರು ಮಂದಿಗೆ ಪರೋಕ್ಷವಾಗಿ ನೀರಿನ ಲಾಭ ಪಡೆಯುತ್ತಿದ್ದಾರೆ. ಬಾಕಿಲಪದವು ಹೊಳೆಗೆ ಕಟ್ಟ ಬಿದ್ದ ತಕ್ಷಣ ಖಂಡಿಗೆ, ಆನಗೋಳಿ ಸೇರಿದಂತೆ ವಿವಿಧೆಡೆ  ಬಾವಿಗಳ ನೀರಿನ ಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ. ಕೆಲವು ಕೃಷಿಕರು ಮಾರ್ಚ್ ಅಂತ್ಯದ ವರೆಗೂ ಬಾವಿ, ಕೆರೆಯ ನೀರನ್ನೇ ಕೃಷಿಗೆ ಬಳಸುತ್ತಿದ್ದು, ಏಪ್ರಿಲ್ ನಂತರವೇ ಕೊಳವೆ ಬಾವಿಗಳಿಂದ ನೀರು ಮೇಲಕ್ಕೆತ್ತುತ್ತಾರೆ. ಅಂತರ್ಜಲಮಟ್ಟ ಹೆಚ್ಚಳಗೊಳಿಸುವಲ್ಲಿ ಇಲ್ಲಿನ ಕಟ್ಟ  ಮಹತ್ವದ ಪಾತ್ರ ವಹಿಸುತ್ತಿದೆ. ಮರಳು ಚೀಲದ ಕಟ್ಟವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಚೀಲಗಳಲ್ಲಿ ಮರಳು ತುಂಬಿಸಿ ಎರಡು ಪಾಶ್ರ್ವದಲ್ಲಿ ಜೋಡಿಸಿ, ಇದರ ಮಧ್ಯೆ ಹದಬರಿಸಿದ ಮಣ್ಣು ಸುರಿದು ಕಟ್ಟ ನಿರ್ಮಿಸಲಾಗುತ್ತಿದೆ. ಪ್ಲಾಸ್ಟಿಕ್ ಗೋಣಿ ಚೀಲಗಳ ಅಳವಡಿಕೆಯಿಂದ ಏಡಿಗಳ ಉಪಟಳ ನಿಯಂತ್ರಣಕ್ಕೂ ಸಾಧ್ಯವಾಗುತ್ತದೆ.



                      ಹೊರೆಯಾಗುತ್ತಿರುವ ಕಟ್ಟ:
           ಬಹುತೇಕ ಕಡೆ ಕೃಷಿಕರೆಲ್ಲರು ಸೇರಿ ಕಟ್ಟ ನಿರ್ಮಿಸುತ್ತಿದ್ದರೆ, ಬಾಕಿಲಪದವು ಕಟ್ಟವನ್ನು ಶಿವಸುಬ್ರಹ್ಮಣ್ಯ ಭಟ್ ಅವರೊಬ್ಬರೇ ನಿರ್ಮಿಸುತ್ತಿದ್ದಾರೆ. ವಾರ್ಷಿಕ ಒಂದು ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಕಟ್ಟ ನಿರ್ಮಿಸುತ್ತಿದ್ದಾರೆ. ವರ್ಷ ಕಳೆದಂತೆ ಕಟ್ಟ ನಿರ್ಮಾಣ ವೆಚ್ಚದಲ್ಲಿ ಉಂಟಾಗುತ್ತಿರುವ ಹೆಚ್ಚಳ ಪರಿಗಣಿಸಿ,  ಕಟ್ಟ ನಿರ್ಮಾಣಕ್ಕೆ ಸರ್ಕಾರ ನೆರವು ನೀಡುವಂತೆ ಶಿವಸುಬ್ರಹ್ಮಣ್ಯ ಭಟ್ ಅವರು ಆಗ್ರಹಿಸಿದ್ದಾರೆ. ಜಿಲ್ಲೆಯ ನಾನಾ ಕಡೆ ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ವಿಸಿಬಿ ಕಂ ಬ್ರಿಡ್ಜ್ ನಿರ್ಮಿಸುತ್ತಿದ್ದು, ಇವುಗಳಲ್ಲಿ ಶೇ. 90ರಷ್ಟು ಉಪಯೋಗಶೂನ್ಯವಾಗಿದೆ. ಕೃಷಿಕರು ತಮ್ಮದೇ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ಕಟ್ಟಗಳು ಬೇಸಿಗೆಯಲ್ಲಿ ಕೊನೆಯವರೆಗೂ ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿರುತ್ತದೆ. ಆದರೆ ಇಂತಹ ಕಟ್ಟಗಳಿಗೆ ಸರ್ಕಾರ ನೆರವು ನೀಡುವಲ್ಲಿ ಹಿಂದೇಟುಹಾಕುತ್ತಿರುವುದು ಕೃಷಿಕರನ್ನು ಅಸಮಧಾನಕ್ಕಿಡುಮಾಡಿದೆ.  ಉದ್ಯೋಗ ಖಾತ್ರಿ ಯೋಜನೆ ಮೂಲಕ ಕಟ್ಟ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೃಷಿಕರು ಮಾಡಿಕೊಂಡಿರುವ ಮನವಿಗೂ ಬೆಲೆಯಿಲ್ಲದಾಗಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries