ಮಂಜೇಶ್ವರ: ಸಾಹಿತ್ಯ, ಸಂಶೋಧನೆಯನ್ನು ಸವ್ಯಸಾಚಿಯಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸಾಹಿತ್ಯ ಕೃತಿಗಳಲ್ಲಿ ಕ್ರಿಯಾಶೀಲತೆ ಮತ್ತು ಪ್ರಯೋಗಶೀಲತೆಯ ದರ್ಶನವಾಗುತ್ತದೆ ಎಂದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯಪಟ್ಟರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯ ಆಶ್ರಯದಲ್ಲಿ ಗಿಳಿವಿಂಡು ಸಭಾಭವನದಲ್ಲಿ ಶನಿವಾರ ಸಂಜೆ ಜರಗಿದ ರಾಷ್ಟ್ರಕವಿಯ 141ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯರಚನೆಯಲ್ಲೂ ಪೈಗಳ ಸಂಶೋಧನಾ ಪ್ರವೃತ್ತಿ ಸದಾ ಜಾಗೃತುವಾಗಿರುತ್ತಿತ್ತು ಎನ್ನುವುದಕ್ಕೆ ಅವರ ಖಂಡ ಕಾವ್ಯಗಳಲ್ಲಿ ಉದಾಹರಣೆಗಳು ದೊರೆಯುತ್ತದೆ. ಕವಿತ್ವದ ಕಲ್ಪನೆ ಮತ್ತು ಸಂಶೋಧಕನ ವಾಸ್ತವ ಪ್ರಜ್ಞೆ ಇವೆರಡರ ಸಮ್ಮಿಳಿತ ಪ್ರತಿಭೆ ಪೈವರದ್ದು. ಅವರ ಕೃತಿಗಳೆಲ್ಲ ಮರುಮುದ್ರಣಗೊಂಡು ಮತ್ತೆ ಹೊರಬರಬೇಕಿದೆ. ಬಹುಭಾಷೆಗಳಿಗೆ ಅನುವಾದಗೊಂಡು ಪ್ರತಿಭಾದರ್ಶನವಾಗಬೇಕಿದೆ ಎಂದು ಅವರು ತಿಳಿಸಿದರು.
ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ, ಹಿರಿಯ ರಂಗಕರ್ಮಿ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪೈಗಳ ನೆನಪನ್ನು ಸದಾ ಹಸಿರಾಗಿಸಲು ವಿವಿಧ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು. ಉಭಯ ಸರ್ಕಾರಗಳು ಹಾಗೂ ಸಾಹಿತ್ಯಾಸಕ್ತರು ಈ ಯೋಜನೆಗಳಿಗೆ ಸದಿಸಬೇಕೆಂದು ಅವರು ವಿನಂತಿಸಿದರು. ತಿಂಗಳಿಗೊಂದು ಸಾಹಿತ್ಯ-ಕಲಾ ಕಾರ್ಯಕ್ರಮಗಳನ್ನು ಗಿಳಿವಿಂಡು ಸಂಕೀರ್ಣದಲ್ಲಿ ನಡೆಸಲು ಪ್ರಾಧಿಕಾರ, ಅಕಾಡೆಮಿಗಳು ಮುಂದಾಗಬೇಕೆಂದು ಸೂಚಿಸಿದರು.
ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಜೈ ತುಳುನಾಡ್ ಕಾಸರಗೋಡು ಘಟಕಾಧ್ಯಕ್ಷೆ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಶುಭಹಾರೈಸಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತರನ್ನು ಮತ್ತು ಪ್ರಾಧಿಕಾರ, ಅಕಾಡೆಮಿಗಳ ನೂತನ ಸದಸ್ಯರನ್ನು ಅಭಿನಂದಿಸಲಾಯಿತು. ಗೋವಿಂದ ಪೈ ಸ್ಮಾರಕ ಗ್ರಂಥಾಲಯಕ್ಕೆ ಐದು ಸಾವಿರ ರೂ.ಗಳ ಪುಸ್ತಕಗಳನ್ನು ಪುಷ್ಪರಾಜ್ ಮಾಸ್ತರ್ ಬದಿಯಡ್ಕ ಈ ಸಂದರ್ಭ ಉಚಿತವಾಗಿ ನೀಡಿದರು. ಗ್ರಂಥಾಲಯದ ಜೊತೆ ಕಾರ್ಯದರ್ಶಿ ಜಯಂತ ಮಾಸ್ತರ್ ಸ್ವೀಕರಿಸಿದರು.
ಬಳಿಕ ‘ಕವಿನಮನ’ ವಿಶೇಷ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗಳಾದ ರವೀಂದ್ರನ್ ಪಾಡಿ, ಕುಶಾಲಾಕ್ಷಿ ವಿ.ಕುಲಾಲ್, ನಿರ್ಮಲಾ ಶೇಷಪ್ಪ ಖಂಡಿಗೆ, ಪ್ರಮೀಳಾ ಚುಳ್ಳಿಕ್ಕಾನ, ಶಶಿಕಲಾ ಕುಂಬಳೆ, ನಿಧಿ ಶೆಟ್ಟಿ, ಉಮೇಶ್ ಶಿರಿಯ, ಮೇಘನಾ ಪುತ್ತಿಗೆ, ಶ್ಯಾಮಲಾ ರವಿರಾಜ್ ಕುಂಬಳೆ, ವನಿತಾ ಆರ್.ಶೆಟ್ಟಿ ಸ್ವರಚಿತ ಕವನಗಳನ್ನು ವಾಚಿಸಿದರು. ಗೋವಿಂದ ಪೈ ಸ್ಮಾರಕ ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ್ಮಾರಕ ಸಮಿತಿ ಸದಸ್ಯ ಕಮಲಾಕ್ಷೆ ಕೆ.ವಂದಿಸಿದರು. ಸದಸ್ಯೆ ವನಿತಾ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಗಿಳಿವಿಂಡು ಆವರಣದೊಳಗಿನ ಗೋವಿಂದ ಪೈಗಳ ಪುತ್ಥಳಿಗೆ ಮಾಲಾರ್ಪಣೆಯ ಮೂಲಕ ಗೌರವ ನಮನ ನಡೆಯಿತು.