ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹತ್ತೊಂಬತ್ತನೇ ವಾರ್ಷಿಕೋತ್ಸವವು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನೆರವೇರಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಗಂಡುಮೆಟ್ಟಿನ ಕಲೆ ಯಕ್ಷಗಾನ ಈ ನಾಡಿನ ಜನತೆಗೆ ಬದುಕು ಕಟ್ಟಿಕೊಡುವುದರ ಜತೆಗೆ ಸಂಸ್ಕøತಿಯನ್ನು ಬೆಳೆಸುತ್ತಾ ಬಂದಿದೆ. ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮೂಲಕ ಹಲವಾರು ಶಿಷ್ಯವೃಂದವನ್ನು ಬೆಳೆಸುತ್ತಾ ಬಂದಿರುವ ಸಬ್ಬಣಕೋಡಿ ರಾಮಭಟ್ಟರ ಕಲಾಸಾಧನೆ ಶ್ಲಾಘನೀಯ. ಸಮಸ್ಯೆಗಳ ನಡುವೆಯೂ ಯಕ್ಷಗಾನ ಕೇಂದ್ರವನ್ನು ಸದೃಢವಾಗಿ ಬೆಳೆದುನಿಲ್ಲುವಂತೆ ಮಾಡಿರುವ ಸಬ್ಬಣಕೋಡಿ ಅವರ ಶ್ರಮ ಸಮಾಜಕ್ಕೆ ಆದರ್ಶವಾಗಿದೆ ಎಂದು ತಿಳಿಸಿದರು.
ಯಕ್ಷಗುರು ಸಬ್ಬಣಕೋಡಿ ರಾಮಭಟ್ಟ ಅವರ 50ವರ್ಷ ಯಕ್ಷ ಪರ್ಯಟನೆಯ ಪ್ರಯುಕ್ತ 25ಮಂದಿಯನ್ನು ಸನ್ಮಾನಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಕಲಾಸಾಧನೆಯನ್ನು ಮಾಡಿದ ಗಣೇಶ್ ಸುಳ್ಯ ಇವರಿಗೆ ಕಲಾಸಾಧನ ಪ್ರಶಸ್ತಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ಅವರಿಗೆ ಚೆಂಡೆಯ ಗಂಡುಗಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೇಂದ್ರದ ವಿದ್ಯಾರ್ಥಿಗಳಿಂದ ಗಾನ-ನಾಟ್ಯ-ವೈಭವ, ನಾಟ್ಯಾಚಾರ್ಯ ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ ಪೂರ್ವರಂಗ ಸಹಿತ ಯಕ್ಷೋತ್ಸವ, ಶ್ರೀದುರ್ಗಾಪೂಜೆ ನಡೆಯಿತು.
ಎರಡನೇ ದಿನ ಚಂದ್ರಶೇಖರ ದಾಮ್ಲೆ ಯವರ ಅಧ್ಯಕ್ಷ ತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಕಲಾವಿದರಾದ ರಾಧಾಕೃಷ್ಣ ನಾವುಡ ಅವರಿಗೆ ಪಡ್ರೆ ಚಂದು ಪ್ರಶಸ್ತಿ, ಪದ್ಯಾಣ ಶಂಕರನಾರಾಯಣ ಭಟ್ಟ ಅವರಿಗೆ ತೆಂಕು ಬೈಲು ಪ್ರಶಸ್ತಿ, ಸರವು ರಮೇಶ ಭಟ್ಟ ಅವರಿಗೆ ಬಲಿಪ ಪ್ರಶಸ್ತಿ, ಹಾಸ್ಯಗಾರ ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ಅಡ್ಕಸ್ಥಳಪ್ರಶಸ್ತಿ, ಮೋಹನ್ ಶೆಟ್ಟಿಗಾರ್ ಇವರಿಗೆ ಚೇವಾರು ಕಾಮತ್ ಪ್ರಶಸ್ತಿ, ಹಾಸ್ಯಗಾರ ಮಹಾಬಲೇಶ್ವರ ಬಾಂಗಮಂಡಲ ಇವರಿಗೆ ಅಡ್ಕಸ್ಥಳ ಮಾಯಿಲೆಂಗಿ ಪ್ರಶಸಿ, ರಾಧಾಕೃಷ್ಣ ಮಾಸ್ಟರ್ ಪೈವಳಿಕೆ ಇವರಿಗೆ ದೇವಕಾನಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗುರು ಸಬ್ಬಣಕೋಡಿ ಯವರ ನಿರ್ದೇಶನದಲ್ಲಿ ಎರಡು ದಿನ ಪೂರ್ವರಂಗ ಸಹಿತ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು. ಗಣಪತಿ ಹೋಮ ದುರ್ಗಾಪೂಜೆ ಸತ್ಯನಾರಾಯಣ ಪೂಜೆ ನಡೆಯಿತು. ಸಬ್ಬಕೋಡಿ ರಾಮಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಎನ್.ಕೆ. ರಾಮಚಂದ್ರ ಭಟ್ ಧನ್ಯವಾದಗಳನ್ನು ನುಡಿದರು.



