ನವದೆಹಲಿ: 'ಸ್ವಯಂ ನಿವೃತ್ತಿ ಕೇವಲ ಕೆಲಸ ಬಿಡುವ ಅಥವಾ ನಿಲ್ಲಿಸುವ ಕ್ರಿಯೆಯಲ್ಲ, ಬದಲಿಗೆ, ಉದ್ಯೋಗಿಯ ವಿಶಿಷ್ಟ ಹಕ್ಕು' ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಛತ್ತೀಸಗಢ ಹೈಕೋರ್ಟ್ 2019ರಲ್ಲಿ ನೀಡಿದ್ದ ಎರಡು ಪ್ರತ್ಯೇಕ ಆದೇಶಗಳನ್ನು ಪ್ರಶ್ನಿಸಿ, ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಹಾಗೂ ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ.
'ಸ್ವಯಂ ನಿವೃತ್ತಿ ಆಯ್ಕೆಯು, ನಿಗದಿತ ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಲಭ್ಯವಿರುತ್ತದೆ. ಹಾಗಾಗಿ, ಇದು ಉದ್ಯೋಗಿಯ ವಿಶಿಷ್ಟ ಹಕ್ಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಅರ್ಜಿದಾರರಿಗೆ ಅಂತಿಮ ಸೌಲಭ್ಯಗಳ ಜತೆಗೆ ಸ್ವಯಂ ನಿವೃತ್ತಿ ಮಂಜೂರುಗೊಳಿಸುವಂತೆ ಬ್ಯಾಂಕ್ಗೆ ಸೂಚನೆ ನೀಡಿತು.
ನಿಗದಿತ ವರ್ಷಗಳ ಸೇವೆ ಮತ್ತು 'ಮೂರು ತಿಂಗಳ ನೋಟಿಸ್ ಅವಧಿ' ಪೂರ್ಣಗೊಳಿಸಿದ ಉದ್ಯೋಗಿಯನ್ನು ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಿದ ದಿನದಿಂದಲೇ ಸ್ವಯಂ ನಿವೃತ್ತಿಗೆ ಪರಿಗಣಿಸಬೇಕು' ಎಂದು ಪೀಠ ಹೇಳಿದೆ.
ಪ್ರಕರಣ ಏನು?: 1983ರಲ್ಲಿ ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬರು 2007ರಲ್ಲಿ ವ್ಯವಸ್ಥಾಪಕರಾಗಿ ಬಡ್ತಿ ಪಡೆದಿದ್ದರು. 2010ರಲ್ಲಿ ಅವರು ವ್ಯವಸ್ಥಾಪಕರಾಗಿದ್ದ ಬ್ಯಾಂಕ್ ಶಾಖೆಯಲ್ಲಿನ ಎರಡು ಖಾತೆಗಳ ಮೂಲಕ ಅನುಮಾನಾಸ್ಪದ ವಹಿವಾಟು ನಡೆದಿತ್ತು, ಇದು ಬ್ಯಾಂಕ್ ಗಮನಕ್ಕೆ ಬಂದಿತ್ತು. ಇದರ ಬೆನ್ನಲ್ಲೇ ಉದ್ಯೋಗಿ ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. 2011ರಿಂದ ಅವರು ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಿದ್ದರು. ಆದರೆ, ಉದ್ಯೋಗಿಯ ಸ್ವಯಂ ನಿವೃತ್ತಿ ಅರ್ಜಿ ತಿರಸ್ಕರಿಸಿದ್ದ ಬ್ಯಾಂಕ್, ಅವರ ವಿರುದ್ಧ ಅನುಮಾನಾಸ್ಪದ ವಹಿವಾಟು ಆರೋಪದಡಿ ಪ್ರಕರಣ ದಾಖಲಿಸಿತ್ತು.
'ಉದ್ಯೋಗಿಯು 1993ರಲ್ಲೇ ಅವರು ಸ್ವಯಂ ನಿವೃತ್ತಿ ಪಡೆಯಲು ಬೇಕಿರುವ 20 ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿದ್ದಾರೆ. ಜತೆಗೆ ಮೂರು ತಿಂಗಳ ನೋಟಿಸ್ ಅವಧಿಯನ್ನೂ ಮುಗಿಸಿದ್ದಾರೆ. ಹೀಗಾಗಿ ಅವರು, ಎಲ್ಲ ಅಂತಿಮ ಸೌಲಭ್ಯಗಳೊಂದಿಗೆ ಸ್ವಯಂ ನಿವೃತ್ತಿಗೆ ಅರ್ಹರು ಎಂದು ನ್ಯಾಯಪೀಠ ಹೇಳಿದೆ.

