ಶ್ರೀಎಡನೀರು ಮೇಳದ 15ನೇ ವರ್ಷದ ತಿರುಗಾಟಕ್ಕೆ ಚಾಲನೆ
0
ಡಿಸೆಂಬರ್ 14, 2018
ಬದಿಯಡ್ಕ: ಜೀವಕೋಟಿಗಳ ಕಲ್ಯಾಣಕ್ಕಾಗಿ ಮಹರ್ಷಿ ವ್ಯಾಸರು ವೇದಗಳನ್ನು ಕ್ರೋಢೀಕರಿಸಿ ಉದ್ಗ್ರಂಥಗಳನ್ನು ಸಮರ್ಪಿಸಿದ ಮಹಾನುಭಾವರು. ಜನಸಾಮಾನ್ಯರ ಅರಿವಿಗಾಗಿ ಅಂತಹ ವೇದಗಳ ಸಾರವನ್ನು ಮನೋಜ್ಞ ಕಥಾನಕಗಳ ಮೂಲಕ ದಶಾವತಾರ ಮೇಳಗಳ ಮೂಲಕ ಕರಾವಳಿಯಾದ್ಯಂತ ಪಸರಿಸಿ ಶ್ರೀಮಂತ ಬೌದ್ದಿಕ ಪರಂಪರೆಯನ್ನು ಕಾಪಿಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಇಂದು ಜಗತ್ತಿನಾದ್ಯಂತ ಜನಮನ್ನಣೆ ಪಡೆಯುವಲ್ಲಿ ಕಲಾವಿದರ, ಕಲಾಪೋಷಕರ ಪ್ರಯತ್ನಗಳು ಕಾರಣ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ಶ್ರೀಗಳು ಆಶೀರ್ವಚನಗೈದು ತಿಳಿಸಿದರು.
ಎಡನೀರು ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯ 15ನೇ ವರ್ಷದ ತಿರುಗಾಟಕ್ಕೆ ಬುಧವಾರ ರಾತ್ರಿ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.
ಮನೋಜ್ಞ ಕಲಾರೂಪವಾದ ಯಕ್ಷಗಾನ ಶಾಸ್ತ್ರೀಯವಾಗಿ ಭದ್ರ ಚೌಕಟ್ಟು ಹೊಂದಿದ್ದು, ಬದುಕಿನ ನಶ್ವರತೆ, ಭಕ್ತಿ, ಆಧ್ಯಾತ್ಮಿಕ ಶಕ್ತಿಯನ್ನು ಪ್ರದಿಪಾದಿಸಿ ಧರ್ಮದ ನೆಲೆಗಟ್ಟನ್ನು ಎತ್ತಿಹಿಡಿದಿದೆ. ಶ್ರೀಮದ್ ಎಡನೀರು ಮಠದ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕøತಿಕತೆಗೆ ನೀಡುತ್ತಿರುವ ಮಹತ್ವದ ಕೊಡುಗೆಗಳು ಕರಾವಳಿಯಲ್ಲಿ ಅತ್ಯಪೂರ್ವವಾದುದು ಎಂದು ಶ್ರೀಗಳು ತಿಳಿಸಿದರು. ಯುವ ತಲೆಮಾರಿಗೆ ಸದಾಶಯದ ಭಕ್ತಿ, ಸಾಧನೆಗಳತ್ತ ಪ್ರೇರಣೆ ನೀಡುವ ಯಕ್ಷಗಾನ ಕಲಾಪ್ರಕಾರಕ್ಕೆ ಇಂದು ಜನಮನ್ನಣೆ ವ್ಯಾಪಕಗೊಂಡಿದ್ದು, ಎಡನೀರು ಶ್ರೀಗಳ ಸ್ವ ಆಸಕ್ತಿಯ ಮೂಲಕ ಇನ್ನಷ್ಟು ಶಕ್ತಿ ತುಂಬಲಾಗುತ್ತಿರುವುದು ಹೆಮ್ಮೆ ಎಂದು ತಿಳಿಸಿದರು.
ಕಾಂಞÂಂಗಾಡು ಆನಂದಾಶ್ರಮದ ಶ್ರೀಮುಕ್ತಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾಪ್ರಕಾರಗಳ ಮೂಲ ಪರಿಕಲ್ಪನೆಗಳಿಗೆ ಧಕ್ಕೆಯಾಗದಂತೆ ವರ್ತಮಾನದೊಂದಿಗೆ ಮುನ್ನಡೆಯುವ ಸೂಕ್ಷ್ಯತೆ ಕಲಾವಿದರಲ್ಲಿರಲಿ. ಎಡನೀರು ಮಠದಿಂದ ಸುಧೀರ್ಘ ವರ್ಷಗಳಿಂದ ನಡೆಯುತ್ತಿರುವ ಕಲಾಪೋಷಣೆ ಇನ್ನಷ್ಟು ಪ್ರಬಲವಾಗಿ ಸಾಮಾಜಿಕ ಏಕತೆ, ಧಾರ್ಮಿಕ ಪ್ರಜ್ಞೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಹೊಸ ಪ್ರೇರಣದಾಯಿ ಮೈಲುಗಲ್ಲಿಗೆ ಕಾರಣವಾಗಲಿ ಎಂದು ತಿಳಿಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ದಿವ್ಯ ಉಪಸ್ಥಿತರಿದ್ದು ಆಶೀರ್ವಚನಗೈದರು. ರಾಜೇಂದ್ರ ಕಲ್ಲೂರಾಯ ಎಡನೀರು ಸ್ವಾಗತಿಸಿದರು. ವಿದ್ವಾನ್.ವಿ.ಬಿ.ಹಿರಣ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀಮಠದ ಕಾರ್ಯದರ್ಶಿ ನ್ಯಾಯವಾದಿ ಐ.ವಿ.ಭಟ್, ಜಯರಾಮ ಎಡನೀರು, ಗೋವಿಂದ ಭಟ್ ಎಡನೀರು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಶ್ರೀಮೇಳದ ಕಲಾವಿದರು ಶಾಸ್ತ್ರೀಯ ಕ್ರಮಗಳೊಂದಿಗೆ ದೇವರ ಪೂಜೆ, ಚೌಕಿ ಪೂಜೆಗಳ ಬಳಿಕ ಪ್ರಸ್ತುತ ವರ್ಷದ ತಿರುಗಾಟದ ಮೊದಲ ಸೇವೆಯಾಟವಾಗಿ ಪಾಂಡವಾಶ್ವಮೇಧ ಪ್ರಸಂಗದ ಬಯಲಾಟ ಪ್ರದರ್ಶಿಸಿದರು. ಅರುಣ್ಕುಮಾರ್ ಮಂಗಳೂರು ಪ್ರಾಯೋಜಿಸಿದ್ದರು.



