ಪೆರ್ಲ: ಕಾಟುಕುಕ್ಕೆ ಬಾಲಪ್ರಭಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಇತ್ತೀಚೆಗೆ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯ ರಾಮ ಭಟ್ ನೀರ್ಚಾಲು ಧ್ವಜಾರೋಹಣ ಗೈದರು. ಶಾಲಾ ಮಕ್ಕಳು ಹಾಗೂ ಹಳೆ ವಿದ್ಯಾರ್ಧಿಗಳಿಂದ ಛದ್ಮವೇಷ ಸ್ಪರ್ಧೆ ಜರುಗಿತು. ಕಾಟುಕುಕ್ಕೆ ಗ್ರಾಮದ ಅಂಗನವಾಡಿ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಮತ್ತು ಶಾಲಾ ಸ್ಕೌಟ್ ಮತ್ತು ಗೈಡ್ ಮಕ್ಕಳಿಂದ ವಂದನಾರ್ಪಣೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ ಔಪಚಾರಿಕವಾಗಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಇಂದಿನ ಶಿಕ್ಷಣಕ್ಕೂ ಹಿಂದಿನ ಶಿಕ್ಷಣಕ್ಕೂ ಹಗಲು ರಾತ್ರಿಯ ವ್ಯತ್ಯಾಸಗಳಿದ್ದು, ಹಿಂದೆ ಪಠ್ಯ ಪುಸ್ತಕದಲ್ಲಿದ್ದ ವಿಷಯಗಳೇ ಪರೀಕ್ಷೆಗಳಲ್ಲಿ ಪ್ರಶ್ನೆಗಳಾಗಿ ಬರುತ್ತಿದ್ದರೆ ಈಗ ದೇಶ ಮತ್ತು ಸಮಾಜದಲ್ಲಿನ ಸಮಕಾಲಿನ ಪ್ರಸ್ತುತ ವಿಷಯಗಳನ್ನು ಆಧರಿಸಿ ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚಲಾಗುತ್ತಿದೆ. ಶಾಲಾ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕಲೆ ,ಸಂಸ್ಕøತಿ ಚಟುವಟಿಕೆಗಳ ಮೂಲಕ ಪಠ್ಯೇತರ ಚುಟುವಟಿಕೆಗಳಲ್ಲಿ ಕಲಾವಿದರಾಗಿ ಬೆಳೆಯಲು ಪ್ರೇರಣೆ ನೀಡುತ್ತದೆ ಎಂದು ನುಡಿದರು.

ಜಿಲ್ಲಾ ವಿದ್ಯಾಧಿಕಾರಿ ಎನ್.ನಂದಿಕೇಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳ ಮಕ್ಕಳಲ್ಲಿ ಮನೋವಿಕಾಸ ಹೆಚ್ಚಿರುತ್ತದೆ. ನಗರದ ಶಿಕ್ಷಣಕ್ಕಿಂತ ಗ್ರಾಮೀಣ ಪ್ರದೇಶದ ಕಲಿಕೆ ವಿದ್ಯಾರ್ಥಿಗಳಿಗೆ ಕಲಿಯಲು ಒಳ್ಳೆಯ ವಾತಾವರಣವನ್ನು ಕಲ್ಪಿಸುತ್ತದೆ.ಕಾಟುಕುಕ್ಕೆ ಪ್ರದೇಶದ ಹಳ್ಳಿ ಸೊಬಗು, ಪ್ರಾಕೃತಿಕ ಸೌಂಧರ್ಯ ಮಕ್ಕಳ ಶಾಲಾ ಜೀವನಕ್ಕೆ ಸುಂದರ ಆಯಾಮವನ್ನು ನೀಡುತ್ತದೆ. ಉತ್ತಮವಾದ ಪರಿಸರ ಉತ್ತಮವಾದ ಶಿಕ್ಷಣ ,ಅಧ್ಯಾಪಕ ವೃಂದ ,ಆಡಳಿತ ವರ್ಗದ ಮೂಲಕ ಶಾಲೆ ಮುಂದುವರಿದರೂ ಊರ ಜನರ ಸಹಾಯ ಅದು ಎಲ್ಲ ರೀತಿಯಿಂದಲೂ ಒದಗಿ ಬರಬೇಕಾಗುತ್ತದೆ. ಪ್ರಸ್ತುತ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಕೂಡ ತಾವು ಕಲಿತ ಶಾಲೆಗಳಿಗೆ ತಮ್ಮಿಂದಾಗುವ ವಿಶೇಷವಾದ ಕೊಡುಗೆಗಳನ್ನ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕಾದುದು ಈಗಿನ ಕಾಲದಲ್ಲಿ ಅನಿವಾರ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಶಾಲಾ ಮುಖ್ಯೋಪಾಧ್ಯಾಯ ಕೆ.ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. .ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ. ಉದಯ ಕುಮಾರ್ ಕಯ್ಯಂಕ್ಕೂಡ್ಲು ಅಭಿನಂದನಾ ಭಾಷಣ ಮಾಡಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ, ಗ್ರಾ.ಪಂ. ಸದಸ್ಯೆ ಮಲ್ಲಿಕಾ ಜೆ.ರೈ ಉಪಸ್ಥಿತರಿದ್ದರು.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ನೃತ್ಯ -ನಾಟಕ-ಯಕ್ಷಗಾನ ಪ್ರದರ್ಶನ ನಡೆಯಿತು. ಶಾಲಾ ಪ್ರಬಂಧಕ ಕೆ. ಕೃಷ್ಣ ಭಟ್ ಸ್ವಾಗತಿಸಿ, ಅಧ್ಯಾಪಕ ಗಣೇಶ್ ಕುಮಾರ್ ವಂದಿಸಿದರು. ಶಿಕ್ಷಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.
