ರಾಜ್ಯ ಸರಕಾರದ ಒಂದು ಸಾವಿರ ದಿನ ಪೂರೈಕೆ: ಜಿಲ್ಲಾ ಮಟ್ಟದ ಸರಣಿ ಸಮಾರೋಪ
0
February 28, 2019
ಕಾಸರಗೋಡು: ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಒಂದು ವಾರ ನಡೆಸಲಾದ ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಗಳು ಸಮಾಪ್ತಿಗೊಂಡಿವೆ.
ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮೈದಾನದಲ್ಲಿ ಈ ಸಂಬಂಧ ಜರುಗಿದ ಸಮಾರೋಪ ಸಮಾರಂಭವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಸರಕಾರ ಸಾವಿರ ದಿನ ಪೂರೈಸಿದ ವೇಳೆ ಗಮನಾರ್ಹವೆನಿಸುವ ಅನೇಕ ಸಾಧನೆಗಳಿವೆ. ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಸರಕಾರ ರಚಿಸಿರುವ ಮಿಷನ್ ಗಳು ಮತ್ತು ಯೋಜನೆಗಳು ಜನಪರವಾಗಿವೆ. ರಾಜ್ಯದಲ್ಲಿ ನಡೆದ ಜಲದುರಂತದ ಪರಿಣಾಮವನ್ನು ಎದುರಿಸುವ ಮೂಲಕ ಇಲ್ಲಿನ ಜನತೆ ದೇಶಕ್ಕೆ ಮಾದರಿಯಾಗಿದ್ದಾರೆ. ಎಲ್ಲ ರೀತಿಯ ಭೇದಭಾವ ಮರೆತು ಜೀವರಕ್ಷಣೆಗೆ ದಾವಿಸಿ ಬಂದ ರಾಜ್ಯದ ಜನ ಮಾನವೀಯತೆಗೆ ಸಂಕೇತವಾದರು. ಎಂದು ಹೇಳಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ, ನಗರಸಭೆ ಉಪಾಧ್ಯಕ್ಷೆ ವಿ.ವಿ.ಗೌರಿ, ಪಿಲಿಕೋಡ್ ಗ್ರಾಮಪಂಚಾಯತ್ ಅಧ್ಯಕ್ಷ ಟಿ.ವಿ.ಶ್ರೀಧರನ್, ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ಅಧ್ಯಕ್ಷೆ ವಿಧುಬಾಲ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ,ಜನಪ್ರತಿನಿಧಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.