ಬದಿಯಡ್ಕ: ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಕುಟುಂಬಶ್ರೀ ಮೂಲಕ ಸಾಧ್ಯವಾಗಿದೆ. ಇಂತಹ ಸಂಘಟನೆಗಳ ಮೂಲಕ ಮನೆಯೊಳಗಿನ ಮಹಿಳೆಯರು ಹೊರಲೋಕವನ್ನು ಕಾಣಲು ಮತ್ತು ಇತರರೊಂದಿಗೆ ಬೆರೆಯಲು ಸಹಕಾರಿಯಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಬದಿಯಡ್ಕ ಗ್ರಾಮಪಂಚಾಯತಿ ಸಿ.ಡಿ.ಎಸ್. ವಾರ್ಷಿಕೋತ್ಸವ ವೇದಿಕೆ-2019ನ್ನು ಗುರುವಾರ ಬದಿಯಡ್ಕ ಶ್ರೀ ಗುರುಸದನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬಶ್ರೀಯ ಘಟಕಗಳ ಮೂಲಕ ಹಲಸಿನ ಮೌಲ್ಯವರ್ಧನೆ ಸಾಧ್ಯವಾಗಲಿದೆ. ಸರಕಾರವು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದು, ಅದಕ್ಕಾಗಿ ಎಲ್ಲಾ ಸದಸ್ಯರೂ ಜೊತೆಗೂಡಬೇಕು. ಸರಕಾರದ ಯಾವುದೇ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಕುಟುಂಬಶ್ರೀ ಘಟಕಗಳು ಪ್ರಧಾನ ಕಾರಣವಾಗಿದೆ ಎಂದರು.
ಬದಿಯಡ್ಕ ಗ್ರಾ.ಪಂ. ಸಿಡಿಎಸ್ ಅಧ್ಯಕ್ಷೆ ಸುಧಾ ಜಯರಾಂ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಮಾತನಾಡಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರಕಾರವು ಕುಟುಂಬಶ್ರೀ ಘಟಕಗಳನ್ನು ಅನುಷ್ಠಾನಗೊಳಿಸಿ 21 ವರ್ಷಗಳಾಯಿತು. ಇಂದು ಅದು ಬಲಿಷ್ಠ ಸಂಘಟನೆಯಾಗಿ ಹೊರಹೊಮ್ಮಿ ಸರಕಾರ ಹಾಗೂ ಜನರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಮಾತನಾಡಿ ಕುಟುಂಬಶ್ರೀ ಕಾರ್ಯಕರ್ತೆಯರು ಅದೆಷ್ಟೋ ಮಂದಿ ಇಂದು ಜನಪ್ರತಿನಿಧಿಗಳಾಗಿ ನಮ್ಮ ಮುಂದಿದ್ದಾರೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷೆ ಝೈಬುನ್ನೀಸ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಬಾನ, ಗ್ರಾ.ಪಂ.ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಮುನೀರ್, ಜಯಶ್ರೀ, ರಾಜೇಶ್ವರಿ, ಜಯಂತಿ, ಪ್ರಸನ್ನ, ಲಕ್ಷ್ಮೀನಾರಾಯಣ ಪೈ, ವಿಶ್ವನಾಥ ಪ್ರಭು, ಮುಹಮ್ಮದ್, ಪುಷ್ಪ ಕುಮಾರಿ, ಪ್ರೇಮ ಕುಮಾರಿ, ಅನಿತ ಕ್ರಾಸ್ತ, ಕುಟುಂಬಶ್ರೀ ಸಂಚಾಲಕಿ ರಮ್ಯಾ, ಆರೋಗ್ಯ ಅಧಿಕಾರಿ ಪ್ರಕಾಶ್, ಸಹ ಅಧಿಕಾರಿ ದೇವಿಜಾಕ್ಷನ್, ಕೃಷಿಭವನದ ಅಧಿಕಾರಿ ಮೀರಾ, ಮೈರ್ಕಳನಾರಾಯಣ ಭಟ್, ಎಂ.ಎಚ್. ಜನಾರ್ಧನ, ಜಯಪ್ರಕಾಶ ಪಜಿಲ ಶುಭಹಾರೈಸಿದರು. ಕುಟುಂಬಶ್ರೀ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೀರ್ಪುಗಾರರಾಗಿ ರವಿಕಾಂತ ಕೇಸರಿ ಕಡಾರು, ನಿವೃತ್ತ ಅಧ್ಯಾಪಕ ಜನಾರ್ಧನ ಸಹಕರಿಸಿದರು. ಸುಮತಿ ವಿದ್ಯಾಗಿರಿ ಸ್ವಾಗತಿಸಿ, ಅನ್ನತ್ ವಂದಿಸಿದರು. ಲೀಲಾವತಿ ಕನಕಪ್ಪಾಡಿ ನಿರೂಪಿಸಿದರು.


