ಮುಳ್ಳೇರಿಯ: ಶಾಲೆಗಳಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯ ನೀಡಿದಾಗ ನಿಜವಾದ ಶಿಕ್ಷಣ ಮಕ್ಕಳಿಗೆ ದೊರೆಯುತ್ತದೆ ಎಂದು ಅಂತಾರಾಷ್ಟ್ರೀಯ ಚಿತ್ರಕಲಾವಿದ ಪಿ ಎಸ್ ಪುಣಿಂಚಿತ್ತಾಯ ಹೇಳಿದರು.
ಅವರು ರಂಗಚಿನ್ನಾರಿ ಕಾಸರಗೋಡು ನಡೆಸುತ್ತಿರುವ ನೃತ್ಯ ಪ್ರಾತ್ಯಕ್ಷಿಕಾ ಅಭಿಯಾನ ತಕಜಣುತಾ... ದ ಅಂಗವಾಗಿ ಕಾರಡ್ಕ ವೊಕೇಶನಲ್ ಹೈಯರ್ಸೆಕೆಂಡರಿ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆ ಭಾಷಾ-ಸೀಮೆಗೆ ಅತೀತವಾದ ವಿಚಾರ. ಗ್ರಾಮೀಣ ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆ ಬೆಳಗುವಂತಾಗಬೇಕಿದ್ದರೆ ಇಂತಹ ಕಾರ್ಯಕ್ರಮಗಳು ಕಾರಣವಾಗಬಹುದು ಎಂದು ಅವರು ಹೇಳಿದರು.
ರಂಗಚಿನ್ನಾರಿ ಹಾಗೂ ಪ್ರಸ್ತುತ ಅಭಿಯಾನದ ರೂವಾರಿ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಬ್ಬೊಬ್ಬ ಕಲಾವಿದನಿರುತ್ತಾನೆ. ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ನಮ್ಮೊಳಗಿನ ಆ ಕಲಾವಿದನನ್ನು ಬೆಳೆಸಬೇಕು.ಈ ನಿಟ್ಟಿನಲ್ಲಿ ರಂಗಚಿನ್ನಾರಿ ಈ ವರೆಗೆ ವಿವಿಧಾಯಾಮಗಳ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಇದೀಗ ಹೊಸ ನಮೂನೆಯ ವಿಶಿಷ್ಟ ಯತ್ನಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಉತ್ಸವ ಸಮಿತಿಯ ಸಂಚಾಲಕ ಜ್ಯೋತಿಚಂದ್ರ ಮಾಸ್ತರ್ ಸ್ವಾಗತಿಸಿ, ಹಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕ ಕೃಷ್ಣೋಜಿ ರಾವ್ ವಂದಿಸಿದರು. ಕನ್ನಡ ಅಧ್ಯಾಪಕ ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಹಿರಿಯ ಶಿಕ್ಷಕಿ ಭಾನುಮತಿ, ನೌಕರ ಸಂಘದ ಕಾರ್ಯದರ್ಶಿ ಅಜಿತ್ ಮಾಸ್ತರ್ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು. ಸಭಾಂಗಣವು ಉತ್ಸಾಹೀ ಮಕ್ಕಳಿಂದ ತುಂಬಿತ್ತು. ಕಲಾವಿದೆಯರಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ರಚನಾ ಅವರು ತರಗತಿ ನಡೆಸಿದರು. ಭರತನಾಟ್ಯದ ಸರಳ ವ್ಯಾಯಾಮ, ಮುದ್ರೆಗಳು ಹಾಗೂ ಅವುಗಳ ಅರ್ಥ, ಪ್ರಾಥಮಿಕ ಹೆಜ್ಜೆಗಳನ್ನು ಹೇಳಿಕೊಟ್ಟರು. ಕೊನೆಯಲ್ಲಿ ಕೃಷ್ಣನ ಕುರಿತಾದ ನೃತ್ಯವನ್ನು ಸುಂದರವಾಗಿ ಪ್ರಸ್ತುತಪಡಿಸಿದರು.




