ಮಂಜೇಶ್ವರ: ಉದ್ಯಾವರ ಗುಡ್ಡೆ ಸರಕಾರಿ ಪ್ರೌಢ ಶಾಲೆಗೆ ಕಾಸರಗೋಡು ಜಿಲ್ಲಾ ಪಂಚಾಯತಿ ವತಿಯಿಂದ ನೂತನವಾಗಿ ನಿರ್ಮಿಸಿದ ಹೆಣ್ಮಕ್ಕಳ ವಿಶ್ರಾಂತಿ ಕೊಠಡಿಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಗುರುವಾರ ಉದ್ಘಾಟಿಸಿದರು.
2018-19ನೇ ಜಿಲ್ಲಾ ಪಂಚಾಯತಿ ವಾರ್ಷಿಕ ಯೋಜನೆಯ ಭಾಗವಾಗಿ ಶಾಲೆಯ ಹೆಣ್ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆಯನ್ನೊಳಗೊಂಡ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಜಿ.ಸಿ.ಬಶೀರ್ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ಭೌತಿಕ ಸೌಕರ್ಯಗಳನ್ನು ನೀಡುವ ಪ್ರಯತ್ನ ಮಾಡುವುದರ ಜೊತೆಗೆ ಜಿಲ್ಲಾ ಪಂಚಾಯತಿ ವತಿಯಿಂದ ಸೋಲಾರ್ ಪ್ಯಾನಲ್ ಅಳವಡಿಸುವುದಕ್ಕೆ ಅನುದಾನ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ವಹಿಸಿದ್ದರು.
ಉದ್ಯಾವರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದು ಪ್ರಸ್ತುತ ಜಿಲ್ಲಾವಿದ್ಯಾಧಿಕಾರಿಯಾಗಿರುವ ನಂದಿಕೇಶನ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ, ಕಾಸರಗೋಡು ಜಿಲ್ಲಾ ಆರೋಗ್ಯ ಮತ್ತುವಿಧ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರ್, ನಿವೃತ್ತ ಮುಖ್ಯೋಪಾಧ್ಯಾಯ ಪಾಂಡುರಂಗ ಎಚ್. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪಂಚಾಯತಿ ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ಭಾಸ್ಕರ ಶೆಟ್ಟಿಗಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುವ್ ರಝಾಕ್, ಯೂಸುಫ್ ಜಮಾಲ್, ಹಂಝ ಸಭೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಉದಯ ಕುಮಾರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಾಲಾನೌಕರರ ಸಂಘದ ಕಾರ್ಯದರ್ಶಿ ರಾಜೇಶ್ ವಂದಿಸಿದರು. ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.


