ಮಂಜೇಶ್ವರ: ಗಡಿನಾಡಿನ ಖ್ಯಾತಿಯನ್ನು ಜಗದಗಲ ಹರಡಿಸಿದ, ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬದುಕು-ಬರಹಗಳು ರಾಷ್ಟ್ರಾದ್ಯಂತ ಇಂದು ಯುವಜನರಿಗೆ ತಲಪಬೇಕು ಎಂದು ಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ತಿಳಿಸಿದರು.
ಇತ್ತೀಚೆಗೆ ನಿಧನರಾದ ಖ್ಯಾತ ರಂಗಕರ್ಮಿ, ಉದ್ಯಮಿ ಡಾ.ಡಿ.ಕೆ.ಚೌಟರ ನುಡಿನಮನ ಕಾರ್ಯಕ್ರಮಕ್ಕೆ ಆಗಮಿಸುವ ಮಧ್ಯೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ವಿನಃನವೀಕರಣ ಮತ್ತು ನಡೆಯುತ್ತಿರುವ ವಿವಿಧ ಸಾಹಿತ್ತಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗಿಳಿವಿಂಡಿನ ಗ್ರಂಥಾಲಯದ ಸದುಪಯೋಗವನ್ನು ಯುವಜನತೆ ಪ್ರೀತಿ-ಆಸಕ್ತಿಯಿಂದ ಮಾಡಬೇಕು ಎಂದು ತಿಳಿಸಿದರು. ಗ್ರಾಮೀಣ ಜೀವನ ರೀತಿಯನ್ನು ಮೆಚ್ಚಿಕೊಂಡಿದ್ದ ಡಾ.ಚೌಟರ ವಿವಿಧ ಆಯಾಮಗಳ ಚಟುವಟಿಕೆಗಳು, ಸಮಾಜ ಸೇವೆ ಮಾದರಿಯಾದುದು ಎಂದು ತಿಳಿಸಿದರು.
ರಂಗ ಚೇತನ ಟ್ರಸ್ಟ್ ಬೆಂಗಳೂರಿನ ತೊ.ನಂಜುಂಡಸ್ವಾಮಿ, ಡಾ.ಶಂಕರ್ ಬೆಂಗಳೂರು, ಗುಂಡಣ್ಣ ಬೆಂಗಳೂರು, ನ್ಯಾಯವಾದಿ ರೇವಣಸಿದ್ದಯ್ಯ, ರಂಗತಜ್ಞ ಜೀವನ್ ರಾಂ ಸುಳ್ಯ, ಸಂಕಬೈಲು ಸತೀಶ ಅಡಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಗಿಳಿವಿಂಡಿನ ವತಿಯಿಂದ ಕಾರ್ಯದರ್ಶಿ ಜಯಾನಂದಕೆ.ಆರ್. ಅವರು ಡಾ.ಸಿ.ಎನ್.ಮಂಜುನಾಥ್ ಅವರನ್ನು ಶಾಲುಹೊದೆಸಿ ಗೌರವಿಸಿದರು. ಗಿಳಿವಿಂಡಿನ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ಹಾರಾರ್ಪಣೆಗೈದರು.


